ಮೇ. 14ರಿಂದ ಈಚೆಗೆ ರಾಜ್ಯದಲ್ಲಿ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಕುಟುಂಬದವರೂ ಸಹ ಬಿಪಿಎಲ್‌ ಕಾರ್ಡ್‌ಗಳನ್ನು ಮಾಡಿಸಿಕೊಳ್ಳಲು ಅರ್ಜಿಗಳನ್ನು ಸಲ್ಲಿಸಿದ್ದಾರೆ. ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರತಿಯೊಬ್ಬರು ತಲಾ ಐದು ಸಾವಿರ ರು.ನಿಂದ ಎಂಟು ಸಾವಿರ ರು.ವರೆಗೆ ಹಣವನ್ನು ಪಡೆದು ಬಿಪಿಎಲ್‌ ಕಾರ್ಡ್‌ಗಳನ್ನು ಮಾಡಿ ಕೊಟ್ಟಿರುವುದು ಮತ್ತು ಮಾಡಿಕೊಡುತ್ತಿರುವುದು ಬೆಳಕಿಗೆ ಬಂದಿದೆ: ಎನ್‌.ಆರ್‌. ರಮೇಶ್‌ 

ಬೆಂಗಳೂರು(ಮೇ.30): ಕಳೆದ 15 ದಿನಗಳಿಂದೀಚೆಗೆ ಕಾಳಸಂತೆಯಲ್ಲಿ ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ಗಳನ್ನು ಮಾಡಿಕೊಡುತ್ತಿರುವ ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ ಅಧ್ಯಕ್ಷ ಎನ್‌.ಆರ್‌. ರಮೇಶ್‌ ಆಗ್ರಹಿಸಿದ್ದಾರೆ.

Add Asianetnews Kannada as a Preferred SourcegooglePreferred

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಮೇ 14ರಿಂದ ಈಚೆಗೆ ರಾಜ್ಯದಲ್ಲಿ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಕುಟುಂಬದವರೂ ಸಹ ಬಿಪಿಎಲ್‌ ಕಾರ್ಡ್‌ಗಳನ್ನು ಮಾಡಿಸಿಕೊಳ್ಳಲು ಅರ್ಜಿಗಳನ್ನು ಸಲ್ಲಿಸಿದ್ದಾರೆ. ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರತಿಯೊಬ್ಬರು ತಲಾ ಐದು ಸಾವಿರ ರು.ನಿಂದ ಎಂಟು ಸಾವಿರ ರು.ವರೆಗೆ ಹಣವನ್ನು ಪಡೆದು ಬಿಪಿಎಲ್‌ ಕಾರ್ಡ್‌ಗಳನ್ನು ಮಾಡಿ ಕೊಟ್ಟಿರುವುದು ಮತ್ತು ಮಾಡಿಕೊಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ಗ್ಯಾರಂಟಿಗೆಲ್ಲ ಆನ್‌ಲೈನ್‌ ಬಿಪಿಎಲ್‌ ತಣ್ಣೀರು..!

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವತಿಯಿಂದ ಈಚೆಗೆ ಬಿಪಿಎಲ್‌ ಕಾರ್ಡ್‌ಗಳನ್ನು ನೀಡಿರುವಂತಹ ದಾಖಲೆಗಳನ್ನು ತಾವು ಕೂಡಲೇ ಖುದ್ದಾಗಿ ಪರಿಶೀಲಿಸಿದರೆ ಇದರ ಬಗೆಗಿನ ಸತ್ಯಾಂಶ ತಮಗೆ ಅರಿ ವಾಗುತ್ತದೆ. ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಐದು ಉಚಿತ ಯೋಜನೆಗಳನ್ನು ಪಡೆದುಕೊಳ್ಳಬೇಕೆಂಬ ದುರುದ್ದೇಶದಿಂದ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಜನರೂ ಸಹ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿನ ಭ್ರಷ್ಟಅಧಿಕಾರಿಗಳ ನೆರವಿನಿಂದ ಕಳೆದ 15 ದಿನಗಳಿಂದೀಚೆಗೆ ಸಹಸ್ರಾರು ಸಂಖ್ಯೆಯಲ್ಲಿ ಬಿಪಿಎಲ್‌ ಕಾರ್ಡ್‌ಗಳನ್ನು ಪಡೆದಿದ್ದಾರೆ ಮತ್ತು ಪಡೆಯಲು ಅರ್ಜಿಗಳನ್ನು ಸಲ್ಲಿಸಿದ್ದಾರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರತಿಯೊಂದು ಕಚೇರಿಗಳ ಮುಂದೆಯೂ ಸಹ ನೂರಾರು ಸಂಖ್ಯೆಯಲ್ಲಿ ಜನರು ಸರತಿಯಲ್ಲಿ ನಿಂತಿರುವ ಬಗ್ಗೆಯೂ ತಿಳಿದುಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವತಿಯಿಂದ ನೀಡಲಾಗಿರುವ ಬಿಪಿಎಲ್‌ ಕಾರ್ಡ್‌ಗಳ ದಂಧೆಯ ಬಗ್ಗೆ ತಕ್ಷಣವೇ ಒಂದು ತನಿಖಾ ತಂಡವನ್ನು ನಿಯೋಜಿಸಿ, ತನಿಖಾ ವರದಿಯ ನಂತರವೇ ಅರ್ಹತೆ ಇರುವ ಬಡ ಕುಟುಂಬದ ಜನರಿಗೆ ಮಾತ್ರವೇ ಬಿಪಿಎಲ್‌ ಕಾರ್ಡ್‌ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಮತ್ತು ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಕುಟುಂಬದವರಿಗೆ ನೀಡಲಾಗಿರುವ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸಿ, ಇಂತಹ ಕಾರ್ಡ್‌ಗಳನ್ನು ನೀಡಿರುವ ಅಧಿಕಾರಿ/ನೌಕರರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.