ಬಿಜೆಪಿ-ಜೆಡಿಎಸ್ ಮೈತ್ರಿ: ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ನೀಡಿದ ಜೆಡಿಎಸ್ ಶಾಸಕರು !
ಬಿಜೆಪಿ-ಜೆಡಿಎಸ್ ಮೈತ್ರಿ ಬೆನ್ನಲೇ, ಜೆಡಿಎಸ್ ಪಕ್ಷದಲ್ಲಿ ಅಸಮಾಧಾನ ಸ್ಪೋಟಗೊಂಡಿದೆ. ಪಕ್ಷದಲ್ಲಿನ ಡ್ಯಾಮೇಜ್ ಕಂಟ್ರೋಲ್ ಮಾಡಲು ಖುದ್ದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರೇ ಅಖಾಡಕ್ಕೆ ಇಳಿದಿದ್ದು, ಇಂದು ಶಾಸಕರು, ಎಂಎಲ್ಸಿಗಳ ಸಭೆ ಕರೆಯುವ ಮೂಲಕ ಸಭೆಯಲ್ಲಿ ಚರ್ಚಿಸಿ ಮೈತ್ರಿಗೆ ಸರ್ವಾನುಮತದಿಂದ ಒಪ್ಪಿಗೆ ಪಡೆಯಲಾಯಿತು.

ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ
ರಾಮನಗರ (ಅ.1): ಬಿಜೆಪಿ-ಜೆಡಿಎಸ್ ಮೈತ್ರಿ ಬೆನ್ನಲೇ, ಜೆಡಿಎಸ್ ಪಕ್ಷದಲ್ಲಿ ಅಸಮಾಧಾನ ಸ್ಪೋಟಗೊಂಡಿದೆ. ಪಕ್ಷದಲ್ಲಿನ ಡ್ಯಾಮೇಜ್ ಕಂಟ್ರೋಲ್ ಮಾಡಲು ಖುದ್ದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರೇ ಅಖಾಡಕ್ಕೆ ಇಳಿದಿದ್ದು, ಇಂದು ಶಾಸಕರು, ಎಂಎಲ್ಸಿಗಳ ಸಭೆ ಕರೆಯುವ ಮೂಲಕ ಸಭೆಯಲ್ಲಿ ಚರ್ಚಿಸಿ ಮೈತ್ರಿಗೆ ಸರ್ವಾನುಮತದಿಂದ ಒಪ್ಪಿಗೆ ಪಡೆಯಲಾಯಿತು.
ಸಭೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಗೈರು
ಜೆಡಿಎಸ್ - ಬಿಜೆಪಿ ದೋಸ್ತಿಗೆ, ಜೆಡಿಎಸ್ ಪಕ್ಷದಲ್ಲೇ ಕೆಲವೊಂದಷ್ಟು ಶಾಸಕರು ವಿರೋಧ ವ್ಯಕ್ತಪಡಿಸಿದ ಹಿನ್ನಲೆ, ಮೈತ್ರಿಯ ಅನಿವಾರ್ಯತೆ, ಪಕ್ಷದಲ್ಲಿನ ಗೊಂದಲ ನಿವಾರಿಸಲು ಖುದ್ದು ಮಾಜಿ ಪ್ರಧಾನಿ ದೇವೆಗೌಡರು(HD Devegowda) ಇಂದು ಬಿಡದಿಯ ತೋಟದ ಮನೆಯಲ್ಲಿ ಶಾಸಕರು, ಎಂಎಲ್ಸಿಗಳು, ಮಾಜಿ ಶಾಸಕರ ಸಭೆ ಕರೆಯುವ ಮೂಲಕ ಮೈತ್ರಿ ಸಂಬಂಧ ಚರ್ಚಿಸಿದರು.
ಜೆಡಿಎಸ್-ಬಿಜೆಪಿ ಮೈತ್ರಿ; ಬಿಡದಿ ತೋಟದ ಮನೆಯಲ್ಲಿ ಅಸಮಾಧಾನಿತರೊಂದಿಗೆ ದೊಡ್ಡಗೌಡರು ಸಭೆ
ಮೈತ್ರಿ ಸಭೆಗೆ ಜೆಡಿಎಸ್ ನ 19 ಶಾಸಕರ ಪೈಕಿ 17 ಜನ ಶಾಸಕರು ಹಾಜರಾಗಿದ್ರು, ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೆಗೌಡ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಗೆ ಗೈರಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ(JDS CM Irbrahim) ಗೆ ಖುದ್ದು ಮಾಜಿ ಪ್ರಧಾನಿ ದೇವೆಗೌಡರು ಕಾಲ್ ಮಾಡಿ ಸಭೆಗೆ ಬರುವಂತೆ ತಿಳಿಸಿದ್ರೂ ಸಭೆಗೆ ಗೈರಾಗುವ ಮೂಲಕ ಬಹಿರಂಗವಾಗಿಯೇ ಮೈತ್ರಿಗೆ ಅಸಮಧಾನ ಹೊರಹಾಕಿದ್ದಾರೆ. ಇತ್ತ ಶಾಸಕರಾದ ಶರಣ್ ಗೌಡ ಕಂದಕೂರು ಹಾಗೂ ಹನ್ನೂರು ಶಾಸಕ ಮಂಜುನಾಥ್ ಕೂಡ ಸಭೆಗೆ ಗೈರಾಗಿದ್ದು, ನಿಖಿಲ್ ಕುಮಾರಸ್ವಾಮಿ(Nikhil kumaraswamy) ಪೋನ್ ಮಾಡುವ ಮೂಲಕ ಅವರನ್ನ ಮನವೊಲಿಸುವ ಕೆಲಸ ಮಾಡಿದ್ರು.
ಇನ್ನೂ ಸಭೆಯನ್ನು ಉದ್ದೇಶಿಸಿ ಮಾತನಾಡಿದ,ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy) ಇಂದು ಸಭೆಯಲ್ಲಿ ಮೈತ್ರಿ ಬಗ್ಗೆ ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ. ಮುಂದಿನ ಒಂದು ತಿಂಗಳ ಒಳಗೆ 31 ಜಿಲ್ಲೆಗಳಲ್ಲೂ ಸಭೆ ಮಾಡ್ತೀವಿ. ಪಕ್ಷದ ಮುಖಂಡರು ನಾಯಕರ ಎಲ್ಲಾ ಸಮಸ್ಯೆಗಳನ್ನ ಬಗೆಹರಿಸುವ ಕೆಲಸ ಆಗುತ್ತೆ. ಮೈತ್ರಿಯಿಂದ ನಮ್ಮ ಅಭ್ಯರ್ಥಿಗಳಿಗೆ ಟಿಕೇಟ್ ಸಮಸ್ಯೆಗಳು ಉಂಟಾಗಲ್ಲ. ಈ ಬಗ್ಗೆ ನಾನು ಭರವಸೆ ಕೊಡುತ್ತೇನೆ. ಇದರ ಬಗ್ಗೆ ಕೂತು ಮುಕ್ತವಾಗಿ ಚರ್ಚೆ ಮಾಡುತ್ತೇವೆ. ಹೊಂದಾಣಿಕೆಯಿಂದ ಯಾರ ರಾಜಕೀಯ ಭವಿಷ್ಯವನ್ನೂ ಹೊಸಕಿ ಹಾಕಲ್ಲ. ಜಿಟಿಡಿ ನೇತೃತ್ವದ ಕೋರ್ ಕಮಿಟಿ ಇದೆ. ಈ ಕಮಿಟಿ ಮೂಲಕ ಸಂಘಟನೆ ಮಾಡ್ತೀವಿ. ಕಾಂಗ್ರೆಸ್ ನಾಯಕರು ನನ್ನ ಬಗ್ಗೆ ಏನು ಬೇಕಾದ್ರೂ ಅವಹೇಳನ ಮಾಡಲಿ.
ಇದಕ್ಕೆ ನನ್ನ ಕಾರ್ಯಕರ್ತರು, ನಾಡಿನ ಜನತೆ ಮುಂದಿನ ದಿನಗಳಲ್ಲಿ ಉತ್ತರ ಕೊಡ್ತಾರೆ. ಮುಸಲ್ಮಾನ ಬಂಧುಗಳು ಎಚ್ಚರಿಕೆ ಇಂದ ಇರಿ. ಕೆಲ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡ್ತಿದ್ದಾರೆ.
ನಾನು ಮತಕ್ಕಾಗಿ ಒಂದು ಸಮಾಜವನ್ನ ಓಲೈಕೆ ಮಾಡುವ ಅವಶ್ಯಕತೆ ಇಲ್ಲ. ಮುಸಲ್ಮಾನ ಬಂಧುಗಳ ಬಗ್ಗೆ ನನ್ನ ಕಮಿಟ್ ಮೆಂಟ್ ಏನು ಅಂತ ಗೊತ್ತು.
ಕಳೆದ ಬಾರಿ ಉಂಟಾದ ಸಮಸ್ಯೆ ಬಗ್ಗೆ ಧ್ವನಿ ಎತ್ತಿ ಅವರ ಪರವಾಗಿ ನಿಂತಿದ್ದು ನಾನು. ಹಾಗಾಗಿ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದರು.
ಸಭೆಗೆ ಭಾಗಿಯಾದವರ ಪಟ್ಟಿ
ಶಾಸಕರು -ಜಿ ಟಿ ದೇವೌಗೌಡ, ಹೆಚ್.ಡಿ ರೇವಣ್ಣ, ಕರೆಮ್ಮ ಜಿ ನಾಯಕ, ಹರೀಶ್ ಗೌಡ, ಸುರೇಶ್ ಬಾಬು, ಸಮೃದ್ಧಿ ಮಂಜುನಾಥ್, ವೆಂಕಟಶಿವಾರೆಡ್ಡಿ, ಶಾರದ ಪಿ ನಾಯ್ಕ್, ಎಚ್ ಟಿ ಮಂಜುನಾಥ್, ಸ್ವರೂಪ್, ನೇಮಿರಾಜು ನಾಯಕ್, ಎಂ.ಟಿ.ಕೃಷ್ಣಪ್ಪ, ಸೂರಜ್ ನಾಯಕ್, ಭೀಮಾಗೌಡ ಬಸವನಗೌಡ ಪಾಟೀಲ್, ಶಿಢ್ಲಘಟ್ಟ ರವಿಕುಮಾರ್, ಶ್ರವಣಬೆಳಗೊಳ ಬಾಲಕೃಷ್ಣ, ಎ.ಮಂಜು, ಮಾಜಿ ಶಾಸಕರಾದ ಗೌರಿಶಂಕರ್, ಪುಟ್ಟರಾಜು, ಅನ್ನದಾನಿ, ಕೃಷ್ಣಾರೆಡ್ಡಿ, ವೈ ಎಸ್ ವಿ ದತ್ತಾ, ಬಂಡೆಪ್ಪ ಕಾಶೆಂಪುರ್, ಹೆಚ್.ಕೆ.ಕುಮಾರಸ್ವಾಮಿ ಭಾಗಿ. ಜೆಡಿಎಸ್ ಯುವಮುಖಂಡ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವು ಮುಖಂಡರು ಭಾಗಿ.
ಸಿದ್ಧಾಂತ ಒಪ್ಪಿ ಬರೋದಾದ್ರೆ ಬರ್ಲಿ, ಸಿಎಂ ಇಬ್ರಾಹಿಂ ಘರ್ ವಾಪಸಿಗೆ ನಮ್ಮ ವಿರೋಧ ಇಲ್ಲ; ಡಾ.ಜಿ.ಪರಮೇಶ್ವರ್
ಗೈರಾದವರು ಜೆಡಿಎಸ್ ರಾಜ್ಯಾದ್ಯಕ್ಷ ಸಿ.ಎಂ ಇಬ್ರಾಹಿಂ, ಶಾಸಕ ಶರಣ್ ಗೌಡ ಕಂದಕೂರ್ ಹಾಗೂ ಹನೂರು ಶಾಸಕ ಮಂಜುನಾಥ್.
ಒಟ್ಟಾರೆ ಬಿಜೆಪಿ ಜೊತೆಗಿನ ಮೈತ್ರಿಯಿಂದಾಗಿ ಸ್ವಪಕ್ಷದಲ್ಲೇ ಅಪಸ್ವರ ಕೇಳಿಬಂದ ಹಿನ್ನಲೆ ಪಕ್ಷದ ಎಲ್ಲಾ ಶಾಸಕರನ್ನೂ ಒಗ್ಗೂಡಿಸುವ ಮೂಲಕ ಮೈತ್ರಿಗೆ ಎಲ್ಲರಿಂದಲೂ ಸಹಮತ ಪಡೆಯಲಾಗಿದ್ದು, ಇದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ವರ್ಕೌಟ್ ಆಗಲಿದೆ ಎಂಬುದನ್ನು ಕಾದುನೋಡಬೇಕಿದೆ.