Asianet Suvarna News Asianet Suvarna News

PSI Recruitment Scam: ಇದು ಸುಳ್ಳು, ರಾಜಕೀಯ ಷಡ್ಯಂತ್ರ: ದಡೇಸುಗೂರ್‌

ನನ್ನ ವಿರುದ್ಧ ಮಾಡಿರುವ ಆರೋಪವು ಸತ್ಯಕ್ಕೆ ದೂರವಾಗಿದೆ. ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಆಡಿಯೋ ಹಳೆಯದಾಗಿದೆ. ಇದರ ಹಿಂದೆ ರಾಜಕೀಯ ಕುತಂತ್ರ ಇದೆ ಎಂದು ಕಾಂಗ್ರೆಸ್‌ ಆರೋಪವನ್ನು ಇದೇ ವೇಳೆ ತಳ್ಳಿ ಹಾಕಿದ ಬಸವರಾಜ ದಡೇಸುಗೂರ್‌

BJP MLA Basavaraj Dadesugur React on PSI Recruitment Scam grg
Author
First Published Sep 13, 2022, 7:57 AM IST

ಬೆಂಗಳೂರು(ಸೆ.13):  ಪಿಎಸ್‌ಐ ನೇಮಕಾತಿಯಲ್ಲಿ ಹಣ ಪಡೆದಿದ್ದೇನೆ ಎಂಬುದರ ಬಗ್ಗೆ ಖಾಲಿ ಬ್ಯಾಗ್‌ ಹಿಡಿದುಕೊಂಡು ಕಾಂಗ್ರೆಸ್ಸಿಗರು ಏನೋ ರಿಲೀಸ್‌ ಮಾಡುತ್ತೇವೆ ಎಂದಿದ್ದರಲ್ಲ, ಏನಿದೆ? ಎಂದು ಬಿಜೆಪಿ ಶಾಸಕ ಬಸವರಾಜ ದಡೇಸುಗೂರ್‌ ಲೇವಡಿ ಮಾಡಿದ್ದಾರೆ. ನನ್ನ ವಿರುದ್ಧ ಮಾಡಿರುವ ಆರೋಪವು ಸತ್ಯಕ್ಕೆ ದೂರವಾಗಿದೆ. ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಆಡಿಯೋ ಹಳೆಯದಾಗಿದೆ. ಇದರ ಹಿಂದೆ ರಾಜಕೀಯ ಕುತಂತ್ರ ಇದೆ ಎಂದು ಕಾಂಗ್ರೆಸ್‌ ಆರೋಪವನ್ನು ಇದೇ ವೇಳೆ ತಳ್ಳಿ ಹಾಕಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಖಾಲಿ ಬ್ಯಾಗ್‌ ಹಿಡಿದುಕೊಂಡು ಅದೇನೋ ರಿಲೀಸ್‌ ಮಾಡುತ್ತೇವೆ ಎಂದರು. ಬ್ಯಾಗ್‌ನಲ್ಲಿ ಏನಿದೆ ಎಂಬುದು ಯಾರಿಗೆ ಗೊತ್ತು? ಅದರಲ್ಲಿ ಹುಲ್ಲು ಇದೆಯೋ? ಅಕ್ಕಿ ಇದೆಯೋ? ಜೋಳ ಇದೆಯೋ? ಅಥವಾ ರಾಗಿ, ತೊಗರಿ ಇದೆಯೋ? ಎಂದು ವ್ಯಂಗ್ಯವಾಡಿದರು.

ಬಿಜೆಪಿ ಶಾಸಕ ಹಣ ಸಂಗ್ರಹ ಮಾಡಿದ ಸ್ಫೋಟಕ ವಿಡಿಯೋ ರಿಲೀಸ್ ಮಾಡಿದ ಕಾಂಗ್ರೆಸ್

ಯಾವುದೋ ಹಳೆ ಫೋಟೋ ತೋರಿಸಿದರೆ ಅಂತಹವರಿಗೆ ಏನು ಹೇಳಬೇಕು. ನಾನು ಏನೋ ಬಿಡುಗಡೆ ಮಾಡಿಬಿಡುತ್ತಾರೆ ಎಂದು ಭಾವಿಸಿದ್ದೆ. ಅದು-ಇದು ಎಂದು ಮಾಧ್ಯಮದಲ್ಲಿ ಏನೋ ಗದ್ದಲ ಮಾಡಿದರು. ಆದರೆ ಏನೂ ಇಲ್ಲ ಎಂದರು.

ಇನ್ನು, ಆಡಿಯೋ 2020ನೇ ಸಾಲಿನದ್ದಾಗಿದ್ದು, ಯಾವುದೋ ಕ್ಷೇತ್ರದ ಸಮಸ್ಯೆ ಬಗೆಹರಿಸುವ ಕುರಿತು ಮಾತನಾಡಿದ್ದೆ. ಆಗ ಪಿಎಸ್‌ಐ ಹಗರಣ ಇರಲಿಲ್ಲ. ಬೇರೆ ವಿಚಾರ ಕುರಿತು ಮಾತನಾಡಿದ್ದೆ. ಆದರೆ, ನಾನು ಮಾತನಾಡಿದ ಆಡಿಯೋವನ್ನು ಪಿಎಸ್‌ಐ ಹಗರಣಕ್ಕೆ ಜೋಡಿಸಿದ್ದಾರೆ. ನನ್ನ ಆಡಿಯೋವನ್ನು ಎಡಿಟ್‌ ಮಾಡಿದ್ದಾರೆ. ನಾನು ದಾಖಲೆ ಸಮೇತ ಸದನಕ್ಕೆ ಬಂದಿದ್ದೇನೆ. ಸಿ.ಡಿ. ಸಹ ಜತೆಗೆ ತಂದಿದ್ದೇನೆ. ಸದನದಲ್ಲಿ ಇದರ ಬಗ್ಗೆ ಪ್ರಸ್ತಾಪವಾದಾಗ ಅದಕ್ಕೆ ನಾನು ಉತ್ತರ ನೀಡುತ್ತೇನೆ. ಶಾಸಕ ಪ್ರಿಯಾಂಕ್‌ ಖರ್ಗೆ ಅಮೃತ ಗಳಿಗೆಯಲ್ಲಿ ಆಡಿಯೋ, ವಿಡಿಯೋ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ. ಅವರು ಮಾಡಲಿ, ಯಾವುದೇ ಸಮಸ್ಯೆ ಇಲ್ಲ. ನಾನು ಅದನ್ನು ಸ್ವಾಗತಿಸಿದ್ದೇನೆ. ನಾನು ಯಾವುದೇ ಹಣ ಪಡೆದಿಲ್ಲ ಮತ್ತು ಸರ್ಕಾರಕ್ಕೂ ಯಾವುದೇ ಹಣ ತಲುಪಿಸಿಲ್ಲ. ನಾನು ದುಡ್ಡು ಪಡೆದಿದ್ದೇನೆ ಎಂಬುದು ಸುಳ್ಳು ಆರೋಪ. ರಾಜಕೀಯ ಉದ್ದೇಶಕ್ಕಾಗಿ ಈ ರೀತಿ ಆರೋಪ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.

ದುಡ್ಡು ನೀಡಿದ್ದೇನೆ ಎಂದಿರುವ ಅಭ್ಯರ್ಥಿ ದೈಹಿಕ ಪರೀಕ್ಷೆ ಉತ್ತೀರ್ಣ ಆಗಿಲ್ಲ. ನನ್ನ ಬಳಿ ಸಂಪೂರ್ಣ ಆಡಿಯೋ, ವಿಡಿಯೋ ಇದೆ. ನಾನು ತಪ್ಪು ಮಾಡಿದ್ದರೆ ನಾನು ಶಿಕ್ಷೆ ಅನುಭವಿಸುತ್ತೇನೆ. ಅವರು ತಪ್ಪು ಮಾಡಿದರೆ ಅವರು ಶಿಕ್ಷೆ ಅನುಭವಿಸುತ್ತಾರೆ ಎಂದರು.
 

Follow Us:
Download App:
  • android
  • ios