ರೈತ ಮಹಿಳೆಯೊಬ್ಬರಿಗೆ ಸಿಎಂ ಕುಮಾರಸ್ವಾಮಿ ಕೇಳಿದ್ದ ಪ್ರಶ್ನೆ ಭಾರೀ ವಿವಾದ ಸೃಷ್ಟಿಸಿದ್ದ ಬೆನ್ನಲ್ಲೇ, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡಾ ತಾನು ನೀಡಿದ ಹೇಳಿಕೆಯೊಂದರಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಸದ್ಯ ತಂದೆಗಿಂತ ನಿಖಿಲ್ ಕುಮಾರಸ್ವಾಮಿಯೇ ಈ ವಿಚಾರವಾಗಿ ಹೆಚ್ಚು ವಿವಾದಕ್ಕೀಡಾಗುವ ಸಾಧ್ಯತೆಗಳಿವೆ

ಬೆಂಗಳೂರು[ನ.21]: ಕಬ್ಬು ಬೆಳೆಗಾರರ ಹೋರಾಟದಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬರಿಗೆ ಸಿಎಂ ಕುಮಾರಸ್ವಾಮಿ ಕೇಳಿದ್ದ ಪ್ರಶ್ನೆ ಭಾರೀ ವಿವಾದ ಸೃಷ್ಟಿಸಿದ್ದ ಬೆನ್ನಲ್ಲೇ, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡಾ ತಾನು ನೀಡಿದ ಹೇಳಿಕೆಯೊಂದರಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಸದ್ಯ ತಂದೆಗಿಂತ ನಿಖಿಲ್ ಕುಮಾರಸ್ವಾಮಿಯೇ ಈ ವಿಚಾರವಾಗಿ ಹೆಚ್ಚು ವಿವಾದಕ್ಕೀಡಾಗುವ ಸಾಧ್ಯತೆಗಳಿವೆ.

Add Asianetnews Kannada as a Preferred SourcegooglePreferred

ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದ ರೈತ ಮಹಿಳೆಯೊಬ್ಬರಿಗೆ ಸಿಎಂ ಕುಮಾರಸ್ವಾಮಿ ನಾಲ್ಕು ವರ್ಷಗಳಿಂದ ಸುಮ್ಮನಿದ್ದು, ಈಗ ಎದ್ದು ಬಂದಿದ್ದೀಯಲ್ಲಮ್ಮಾ? ಎಲ್ಲ ಮಲಗಿದ್ದೆಯಮ್ಮಾ? ಎಂದು ಪ್ರಶ್ನಿಸಿದ್ದರು. ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸಿಎಂ ಕ್ಷಮೆ ಯಾಚಿಸಬೇಕೆಂಬ ಕೂಗು ಕೇಳಿ ಬಂದಿತ್ತು. ಈ ವೇಳೆ ಖಾಸಗಿ ವಾಹಿನಿಯೊಂದು ನಿಖಿಲ್ ಕುಮಾರಸ್ವಾಮಿಯವರನ್ನು ಮಾತನಾಡಿಸಿತ್ತು. 

ಇದನ್ನೂ ಓದಿ: ರೈತರೇ, ಸಮಸ್ಯೆಯಿದ್ದರೆ ನನ್ನ ಬಳಿ ಬನ್ನಿ: ಸಿಎಂ

ವಾಹಿನಿಗೆ ಪ್ರತಿಕ್ರಿಯಿಸಿದ್ದ ನಿಖಿಲ್ ಕುಮಾರಸ್ವಾಮಿ 'ಗುಪ್ತಚರ ಇಲಾಖೆ ವರದಿ ಪ್ರಕಾರ' ಎಂಬ ಮಾತುಗಳಿಂದಲೇ ಆರಂಭಿಸಿ ಪ್ರತಿಕ್ರಿಯೆ ನೀಡಿದ್ದರು. ಆದರೀಗ ತನ್ನ ಈ ಮಾತುಗಳೇ ನಿಖಿಲ್ ಕುಮಾರಸ್ವಾಮಿಗೆ ಕಬ್ಬಿಣದ ಕಡಲೆಯಂತಾಗಿವೆ. ಜನಪ್ರತಿನಿಧಿಯಲ್ಲದ ಓರ್ವ ವ್ಯಕ್ತಿಗೆ ಗುಪ್ತಚರ ಇಲಾಖೆ ವರದಿ ಹೇಗೆ ಸಿಕ್ಕಿತು? ರಾಜ್ಯದ ಮುಖ್ಯಮಂತ್ರಿಯ ಮಗ ಎಂಬ ಕಾರಣಕ್ಕೆ ಇಲಾಖೆ ವರದಿ ನೀಡಿತಾ?ಎನ್ನುವ ಹಲವಾರು ಶಂಕೆಗಳು ವ್ಯಕ್ತವಾಗಿವೆ.

ಇದನ್ನೂ ಓದಿ: ಮಾಲೀಕರಿಲ್ಲದ ಸಭೆಯಲ್ಲಿ ದೊರೆ ತೀರ್ಮಾನ, ರೈತರಿಗೆ ಅಂತಿಮವಾಗಿ ಸಿಕ್ಕಿದ್ದೇನು?

ಈ ಕುರಿತಾಗಿ ಬಿಜೆಪಿ ಮುಖಂಡ ಸುರೇಶ್ ಕುಮಾರ್ ಕೂಡಾ ಟ್ವೀಟ್ ಮಾಡಿದ್ದು, ಗುಪ್ತಚರ ವರದಿ ಅಷ್ಟು ಸಸ್ತಾ ಆಗೋಗಿದೆಯೇ? ಗುಪ್ತಚರ ವರದಿ ಸಿಗೋದಕ್ಕೆ ನಿಖಿಲ್ ಕುಮಾರಸ್ವಾಮಿಯವರ "ಅಧಿಕಾರ" ಏನು? ಮುಖ್ಯಮಂತ್ರಿಗಳ ಮಗನಾಗಿದ್ದಕ್ಕೆ ಈ ಮಹದವಕಾಶವೇ? ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು’ ಎಂದಿದ್ದಾರೆ.

Scroll to load tweet…

ಒಟ್ಟಾರೆಯಾಗಿ ಸಿಎಂ ಕುಮಾರಸ್ವಾಮಿ ರೈತ ಮಹಿಳೆಗೆ ಕೇಳಿದ್ದ ಪ್ರಶ್ನೆ ಸ್ಪಷ್ಟನೆ ನೀಡಿದ್ದ ಬೆನ್ನಲ್ಲೇ, ನಿಖಿಲ್ ಕುಮಾರಸ್ವಾಮಿ ತನ್ನ ಹೇಳಿಕೆಯಿಂದ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ತಮ್ಮ ಹೇಳಿಕೆ ಕುರಿತಾಗಿ ನಿಖಿಲ್ ತಂದೆಯಂತೆಯೇ ಸ್ಪಷ್ಟನೆ ನೀಡುತ್ತಾರಾ? ಅಥವಾ ಸುಮ್ಮನಾಗುತ್ತಾರಾ ಕಾದು ನೋಡಬೇಕಿದೆ.