ಅಕ್ರಮ ಹಣ ಸಂಪಾದನೆ ಮತ್ತು ಲಂಚ ಪಡೆಯುತ್ತಿದ್ದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಶಾಸಕ ಮಾಡಾಳು ವಿರುಪಾಕ್ಷಪ್ಪ  ಕೊನೆಗೂ ಷರತ್ತುಬದ್ದ ಬೇಲ್ ಸಿಕ್ಕಿದೆ.

ಬೆಂಗಳೂರು (ಏ.15): ಅಕ್ರಮ ಹಣ ಸಂಪಾದನೆ ಮತ್ತು ಲಂಚ ಪಡೆಯುತ್ತಿದ್ದ ಪ್ರಕರಣದಲ್ಲಿ ಲೋಕಾಯುಕ್ತ ದಾಳಿಗೆ ಸಿಲುಕಿ ನ್ಯಾಯಾಂಗ ಬಂಧನದಲ್ಲಿದ್ದ ಶಾಸಕ ಮಾಡಾಳು ವಿರುಪಾಕ್ಷಪ್ಪ ಕೊನೆಗೂ ಬೇಲ್ ಸಿಕ್ಕಿದೆ. ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ. ಕೆಎಸ್‌ಡಿಎಲ್‌ ಗುತ್ತಿಗೆಯಲ್ಲಿ ಲಂಚ ಪಡೆದ ಆರೋಪದಲ್ಲಿ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಷರತ್ತುಬದ್ದ ಜಾಮೀನನ್ನು ಶನಿವಾರ ನೀಡಲಾಗಿದೆ. ನ್ಯಾ. ಜಯಂತ್ ಕುಮಾರ್ ಅವರಿದ್ದ ಪೀಠದಿಂದ ಆದೇಶ ಹೊರಡಿಸಲಾಗಿದೆ. 5 ಷರತ್ತುಗಳನ್ನ ವಿಧಿಸಿ ನ್ಯಾಯಮೂರ್ತಿ ಜಾಮೀನು ನೀಡಿದ್ದಾರೆ.

ಶರತ್ತುಗಳೇನು?: 3 ವಾರಕ್ಕೆ ಒಮ್ಮೆ ಲೋಕಾಯುಕ್ತ ಕಚೇರಿಗೆ ಹಾಜರಾಗಬೇಕು, ಲೋಕಾಯುಕ್ತ ಅಧಿಕಾರಿ ಕರೆದಾಗ ವಿಚಾರಣೆಗೆ ಹಾಜರಾಗಬೇಕು ಪ್ರಕರಣದ ಸಾಕ್ಷಿಗೆ ಯಾವ ಕಾರಣದಲ್ಲೂ ಪ್ರಭಾವ ಬೀರಬಾರದು. ಕೋರ್ಟ್ ವ್ಯಾಪ್ತಿ ಬಿಟ್ಟು ಹೋಗಬಾರದು ಅದರೊಂದಿಗೆ ಪಾಸ್‌ಪೋರ್ಟ್ ಅನ್ನು ಸರೆಂಡರ್ ಮಾಡುವಂತೆ‌ ಮಾಡಾಳ್‌ ವಿರೂಪಾಕ್ಷಪ್ಪಗೆ ಷರತ್ತು ವಿಧಿಸಲಾಗಿದೆ. ಜೊತೆಗೆ 5 ಲಕ್ಷ ರೂಪಾಯಿ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ನೀಡುವಂತೆ‌ ತಿಳಿಸಲಾಗಿದೆ. ಭಾನುವಾರ ಮಧ್ಯಾಹ್ನ 1 ಗಂಟೆಯಿಂದ‌ ಸಂಜೆ 5 ಗಂಟೆ ಒಳಗೆ ನ್ಯಾಯಾಲಯಕ್ಕೆ ಹಾಜರಾಗಬೇಕು. ತನಿಖೆ‌ ಮುಕ್ತಾಯ ಆಗುವವರೆಗೂ ಕೆಎಸ್ಡಿಎಲ್ ಕಚೇರಿಗೆ ಭೇಟಿ ನೀಡಬಾರದು. ಜೊತೆಗೆ ಹೈಕೋರ್ಟ್ ಮಾರ್ಗಸೂಚಿ ಪಾಲಿಸುವಂತೆ ಕೋರ್ಟ್ ಷರತ್ತು ವಿಧಿಸಿದೆ.

ಕಳೆದ ಮಾ.2ರಂದು ನಡೆದ ಲೋಕಾಯುಕ್ತ ದಾಳಿಯ ವೇಳೆ ಲಂಚ ಪಡೆಯುವುದು ಹಾಗೂ 8 ಕೋಟಿ ರೂ. ಅಕ್ರಮ ಹಣ ಸಂಪಾದನೆ ಕುರಿತಂತೆ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರಿಗೆ ನೀಡಲಾಗಿದ್ದ ಮಧ್ಯಂತರ ಜಾಮೀನು ರದ್ದುಗೊಂಡ ಬೆನ್ನಲ್ಲೇ ಮಾ.27ರಂದು ಬಂಧನ ಮಾಡಲಾಗಿತ್ತು. ಅಂದಿನಿಂದ ಮಾ.31ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಬಂಧನ ಅವಧಿ ಪೂರ್ಣಗೊಂಡ ಹಿನ್ನೆಲೆ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿ , ಏ.11ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಣೆ ಮಾಡಿ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿತ್ತು. ಇದೀಗ ಕೊನೆಗೂ ಮಾಡಾಳು ವಿರುಪಾಕ್ಷಪ್ಪಕ್ಕೆ ಬೇಲ್ ಸಿಕ್ಕಿದೆ.

ಶಾಸಕ ಮಾಡಾಳ್ ಬಂಧನ: ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದ ಕಮಲಪಡೆ

ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದ ವಿರೂಪಾಕ್ಷಪ್ಪ: ಅಕ್ರಮ ಹಣ ಸಂಪಾದನೆ ಹಾಗೂ ಲಂಚ ಪಡೆಯುವ ಆರೋಪದಡಿ ಎ1 ಆರೋಪಿಯಾಗಿದ್ದ ಬಿಜೆಪಿ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರನ್ನು ಮಾ.27ರಂದು ಲೋಕಾಯುಕ್ತ ಪೊಲಿಸರು ಬಂಧಿಸಿದ್ದರು. ಮಾ.8ರಂದು ಹೈಕೋರ್ಟ್‌ನಿಂದ ಪಡೆದಿದ್ದ ಮಧ್ಯಂತರ ಜಾಮೀನು ಮಾ.27ರಂದು ರದ್ದಾದ ಬೆನ್ನಲ್ಲೇ ಚನ್ನಗಿರಿಯಿಂದ ಕಾರಿನಲ್ಲಿ ಹೊರಟ ಮಾಡಾಳ ವಿರುಪಾಕ್ಷಪ್ಪ ಅವರನ್ನು ತುಮಕೂರಿನ ಕ್ಯಾತಸಂದ್ರ ಟೋಲ್‌ಗೇಟ್‌ ಬಳಿ ಬಂಧಿಸಿದ್ದರು. ನಂತರ ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು ಎದೆ ನೋವು ಎಂದು ನಾಟಕ ಮಾಡುತ್ತಿದ್ದ ಶಾಸಕರನ್ನು ಬೌರಿಂಗ್‌ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿ, ಯಾವುದೇ ಆರೋಗ್ಯ ಸಮಸ್ಯೆಯಿಲ್ಲ ಎಂದು ವೈದ್ಯಕೀಯ ಪ್ರಮಾಣಪತರವನ್ನು ಪಡೆದುಕೊಂಡು ವಶಕ್ಕೆ ಪಡೆದುಕೊಂಡಿದ್ದರು.

ಶಾಸಕ ಮಾಡಾಳ್‌ ವಿರುಪಾಕ್ಷಪ್ಪಗೆ ಏ.11ರವರೆಗೆ ನ್ಯಾಯಾಂಗ ಬಂಧನ: ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ

6 ದಿನ ಕಣ್ತಪ್ಪಿಸಿಕೊಂಡಿದ್ದ ವಿರುಪಾಕ್ಷಪ್ಪ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌) ಅಧ್ಯಕ್ಷರಾಗಿದ್ದ ಮಾಡಾಳು ವಿರುಪಾಕ್ಷಪ್ಪ ಖಾಸಗಿ ಕಂಪನಿಯೊಂದರ ಪ್ರಕರಣವನ್ನು ಖುಲಾಸೆ ಮಾಡುವ ಕಾರಣಕ್ಕೆ 40 ಲಕ್ಷ ರೂ. ಲಂಚ ಪಡೆಯುತ್ತಿದ್ದರು ಎಂಬ ಆರೋಪದಡಿ ಅವರನ್ನೇ 1 ಆರೋಪಿಯನ್ನಾಗಿ ಮಾಡಲಾಗಿತ್ತು. ಉಳಿದಂತೆ ಅವರ ಪುತ್ರ ಮಾಡಾಳು ಪ್ರಶಾಂತ, ಹಣ ಕೊಡಲು ಬಂದಿದ್ದ ಕಂಪನಿಯ ಇಬ್ಬರು ವ್ಯಕ್ತಿಗಳು ಹಾಗೂ ಮಾಡಾಳು ವಿರುಪಾಕ್ಷಪ್ಪ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಮಾಡಾಳು ವಿರುಪಾಕ್ಷಪ್ಪ ಮಾತ್ರ 6 ದಿನಗಳವರೆಗೆ ಯಾರ ಕೈಗೂ ಸಿಗದಂತೆ ತಪ್ಪಿಸಿಕೊಂಡಿದ್ದರು. ಇನ್ನು ಹೈಕೋರ್ಟ್‌ನಲ್ಲಿ ಜಾಮೀನು ಲಭ್ಯವಾದ ನಂತರವೇ ಬಹಿರಂಗವಾಗಿ ಪ್ರತ್ಯಕ್ಷ ಆಗಿದ್ದರು.