ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶುಕ್ರವಾರ ನಡೆಯುತ್ತಿದ್ದು, ಈ ಸಭೆಗೆ ಗೈರಾದ ಮುಖಂಡರಿಗೆ ನೋಟಿಸ್ ನೀಡುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಆದರೆ ಈ ಬಗ್ಗೆ ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಪ್ರತಿಕ್ರಿಯಿಸಿ ಗೈರಾದವರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ.

ಶಿವಮೊಗ್ಗ : ಶಾಸಕಾಂಗ ಪಕ್ಷದ ಸಭೆಗೆ ಶಾಸಕರು ಗೈರಾದಲ್ಲಿ ಸಂವಿಧಾನದ 10ನೇ ಪರಿಚ್ಛೇದದ ಅನ್ವಯ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯಿಸುವುದಿಲ್ಲ ಎಂದು ವಿಧಾನ ಮಂಡಲ ಶಿಷ್ಟಾಚಾರ ಸಮಿತಿ ಅಧ್ಯಕ್ಷ ಆಯನೂರು ಮಂಜುನಾಥ್ ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸದನದ ಒಳಗೆ , ವ್ಯಾಪ್ತಿಯೊಳಗೆ ವಿಪ್ ಜಾರಿ ಮಾಡಬೇಕು. ಅದನ್ನು ವಿರೋಧಿಸಿದರೆ , ತಟಸ್ಥರಾದರೇ, ಗೈರು ಹಾಜರಾದರೇ ಮಾತ್ರ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುತ್ತದೆ ಎಂದು ಸುವರ್ಣ ನ್ಯೂಸ್.ಕಾಂಗೆ ತಿಳಿಸಿದ್ದಾರೆ. 

ವಿಧಾನ ಮಂಡಲದ ಹೊರಗೆ ನಡೆಯುವ ಚಟುವಟಿಕೆಗಳಿಗೆ ಪಕ್ಷಾಂತರ ನಿಷೇಧ ಕಾಯ್ದೆ ತರಲು ಸಾಧ್ಯವಿಲ್ಲ. ಹೆಚ್ಚೆಂದರೇ ಪಕ್ಷದಿಂದ ಅಮಾನತು ಮಾಡಬಹುದಾಗಿದೆ.

ಈ ಕಾಂಗ್ರೆಸ್ ನಾಯಕರಿಗೆ ಸಿಗುತ್ತಾ ಪಕ್ಷದಿಂದ ಗೇಟ್ ಪಾಸ್ ..?

ತಪ್ಪು ತಪ್ಪಾಗಿ ನೋಟಿಸ್ ಕೊಟ್ಟಿದ್ದು ಸಭೆಗೆ ಬಾರದೇ ಇದ್ದರೇ ಪಕ್ಷಾಂತರ ಕಾಯ್ದೆ ಅನ್ವಯವಾಗುತ್ತೆ ಎಂದು ಅನಗತ್ಯವಾಗಿ ಭಯ ಹುಟ್ಟಿಸುವ ಯತ್ನಗಳು ನಡೆಯುತ್ತಿವೆ. ಇದೊಂದು ಪಕ್ಷದ ನೋಟಿಸ್ ಹೊರತು 3 ಲೈನ್ ವಿಪ್ ಅಲ್ಲ. ಇದರಿಂದ 100 ಪರ್ಸೆಂಟ್ ಶಾಸಕತ್ವ ಕಳೆದುಕೊಳ್ಳುವುದಿಲ್ಲ ಎಂದು ಆಯನೂರು ಮಂಜುನಾಥ್ ತಿಳಿಸಿದ್ದಾರೆ.

ಶಾಸಕರನ್ನು ಪ್ರೀತಿಯಿಂದ ಕರೆಯದೇ ಹೆದರಿಸಿ ಕರೆಯುತ್ತಿರುವುದು ಇಂದಿನ ಸಮ್ಮಿಶ್ರ ಸರ್ಕಾರದ ನಡೆಯನ್ನು ತಿಳಿಸುತ್ತದೆ. ತಮ್ಮಲ್ಲಿನ ಭಿನ್ನಾಭಿಪ್ರಾಯ , ಸರ್ಕಾರದ ಮೇಲೆ ಶಾಸಕರಿಗಿರುವ ಅಸಮಾಧಾನ , ಅತೃಪ್ತಿ ಈ ನೋಟಿಸ್ ಮೂಲಕ ಹೊರ ಬಿದ್ದಿದೆ. ಕಾನೂನಿನ ಅರಿವಿರುವ ಶಾಸಕರಿಗೆ ಈ ನೋಟಿಸ್ ಬಟ್ಟೆಯ ಹಾವಿದ್ದಂತೆ, ಹಲ್ಲಿಲ್ಲದ ಹಾವು ಎಂಬುದು ಗೊತ್ತಾಗುತ್ತದೆ ಎಂದು ಅವರು ಹೇಳಿದರು. 

ಕಾಂಗ್ರೆಸ್ ಶಾಸಕಾಂಗ ಸಭೆಗೆ ಶಾಸಕರು ಹಾಜರಾಗಿ ಸಭೆಯ ನಂತರವೂ ತಮ್ಮ ಬಂಡಾಯ ಚಟುವಟಿಕೆ ನಡೆಸಿದರೆ ಸಿದ್ದರಾಮಯ್ಯ ಎನೂ ಮಾಡಲು ಸಾಧ್ಯವಿಲ್ಲ ಎಂದರು.