ಕಲಬುರಗಿಯ ಸಿಂಚೋಳಿ ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ತುಮಕೂರು (ಅ.21): ಕಲಬುರಗಿಯ ಸಿಂಚೋಳಿ ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂಚೋಳಿ ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತ ಶಿವಕುಮಾರ ಪೂಜಾರಿ ಎಂಬುವರು ಸಚಿವ ಡಾ. ಶರಣಪ್ರಕಾಶ್ ಅವರ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ನಿರ್ಧರಿಸಲಾಗಿದೆ ಎಂದರು.

ಈ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವರು ಭಾಗಿಯಾಗಿದ್ದಾರೆ ಎಂದು ಕೆಲವರು ಹೇಳಿಕೆ ಕೊಡುತ್ತಿದ್ದಾರೆ. ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಆ ವ್ಯಕ್ತಿ ತಮಗೆ ಗೊತ್ತಿಲ್ಲ ಎಂದು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಆದರೂ ಸಮಗ್ರ ತನಿಖೆಯಾಗಲಿ ಎಂಬ ಉದ್ದೇಶದಿಂದ ಸಿಐಡಿಗೆ ಈ ಪ್ರಕರಣವನ್ನು ವಹಿಸಲಾಗುತ್ತಿದೆ ಎಂದು ಹೇಳಿದರು.. 

 ಸಚಿವ ಶರಣಪ್ರಕಾಶ್ ಹೆಸರೇಳಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ; ಈ ಪ್ರಕರಣ ಇಲ್ಲಿಗೆ ಬಿಡಲ್ಲ ಎಂದ ಬಿಜೆಪಿ

ಈ ಪ್ರಕರಣ ಕುರಿತು ತನಿಖೆ ನಡೆದ ವರದಿ ಬಂದ ನಂತರ ಸತ್ಯಾಂಶ ಹೊರ ಬರಲಿದೆ ಎಂದು ಅವರು ತಿಳಿಸಿದರು. ರಾಜ್ಯದಲ್ಲಿ ಬರ ಪರಿಸ್ಥಿತಿ ಕುರಿತು ಈಗಾಗಲೇ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಈಗ ಮತ್ತೊಂದು ವರದಿಯನ್ನು ಸಿದ್ದಪಡಿಸುತ್ತಿದ್ದು, 25 ತಾಲೂಕುಗಳನ್ನು ಹೊರತುಪಡಿಸಿ ಉಳಿದ ಎಲ್ಲ ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿದೆ. ಸದ್ಯದಲ್ಲೇ ಈ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ಬೇಸಿಗೆ ಬರುತ್ತಿದ್ದಂತೆ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಹಣ ಇಡಲಾಗಿದೆ. ಹಾಗೆಯೇ ತುಮಕೂರು ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 19 ಕೋಟಿ ಹಣ ಇದ್ದು, ತಾಲೂಕುವಾರು ಅರ್ಜಿಗಳನ್ನು ಪಡೆದು ಕುಡಿಯುವ ನೀರು, ಮೇವು, ಕಾಮಗಾರಿಗಳು ಹಾಗೂ ಗೋಶಾಲೆಗೆ ಹಣ ಖರ್ಚು ಮಾಡಲು ಸೂಚನೆ ನೀಡಲಾಗಿದೆ ಎಂದರು. 

ಆತ್ಮಹತ್ಯೆಗೆ ಶರಣಾದ ಶಿವಕುಮಾರ್‌ ಯಾರೆಂಬುದೇ ನನಗೆ ತಿಳಿದಿಲ್ಲ: ಸಚಿವ

ಕಲಬುರಗಿ: ಬಿಜೆಪಿ ಕಾರ್ಯಕರ್ತ ಶಿವಕುಮಾರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು, ಶಿವಕುಮಾರ ಯಾರೆಂಬುದೇ ತಮಗೆ ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಲಬುರಗಿ: ಸಚಿವ ಸ್ಥಾನದಿಂದ ಡಾ. ಶರಣಪ್ರಕಾಶ ವಜಾಕ್ಕೆ ತೇಲ್ಕೂರ್‌ ಆಗ್ರಹ

ಆ ವ್ಯಕ್ತಿಯೊಂದಿಗೆ ನಾನು ಜೀವನದಲ್ಲಿ ಮಾತಾಡಿಲ್ಲ, ನಾನು ಆತನಿಗೆ ಕರೆ ಮಾಡಿಲ್ಲ, ಆತನೂ ನನಗೆ ಕರೆ ಮಾಡಿಲ್ಲ, ಆತ ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಆಡಿಯೋನಲ್ಲಿ ನಿಖರವಾಗಿ ಯಾವುದೇ ಆರೋಪ ಇಲ್ಲ, ಆತ ಯಾವ ಅರ್ಥದಲ್ಲಿ ಹೇಳಿದ್ದಾನೋ, ಯಾರು ಹೇಳಿಸಿದ್ದಾರೋ ಗೊತ್ತಿಲ್ಲ ಅವರ ಕುಟುಂಬದವರೇ ಸಾಲಬಾಧೆಯಿಂದ ಮೃತರಾಗಿರುವುದಾಗಿ ದೂರು ನೀಡಿದ್ದಾರಲ್ಲ ಸಚಿವರು ಹೇಳಿದರು.

ಬಿಜೆಪಿಯವರು ಸೋಲಿನಿಂದ ಹತಾಶರಾಗಿ ಈ ರೀತಿ ಮಾತಾಡುತ್ತಿದ್ದಾರೆ. ಈ ವಿಷಯದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ, ತನಿಖೆಯಿಂದ ಸತ್ಯಾಸತ್ಯತೆ ಹೊರ ಬೀಳುತ್ತದೆ ಎಂದು ಡಾ. ಶರಣಪ್ರಕಾಶ ಪಾಟೀಲ್‌ ಹೇಳಿದರು.