Asianet Suvarna News Asianet Suvarna News

ನಮ್ಮದು ಸೋಲಿಗೆ ಅಂಜಿ ಕುಳಿತ ಪಕ್ಷವಲ್ಲ: ಸಿ.ಟಿ. ರವಿ

ನಮ್ಮ ಪಕ್ಷ ಸೋಲಿಗೆ ಅಂಜಿ ಕುಳಿತ ಪಕ್ಷವಲ್ಲ. ತಪ್ಪುಗಳನ್ನು ತಿದ್ದಿಕೊಂಡು ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತೇವೆ. ಮತ್ತೆ ಬಿಜೆಪಿಯದ್ದೇ ಗೆಲುವಾಗಬೇಕು. ಅದಕ್ಕೆ ಬೇಕಾದ ರೂಪುರೇಷೆ ಗಳನ್ನು ಸಿದ್ಧಪಡಿಸುತ್ತೇವೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

BJP is not a party that is afraid of defeat says ct rav at chikkamagaluru rav
Author
First Published Aug 27, 2023, 12:40 PM IST

ಚಿಕ್ಕಮಗಳೂರು (ಆ.27):  ನಮ್ಮ ಪಕ್ಷ ಸೋಲಿಗೆ ಅಂಜಿ ಕುಳಿತ ಪಕ್ಷವಲ್ಲ. ತಪ್ಪುಗಳನ್ನು ತಿದ್ದಿಕೊಂಡು ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತೇವೆ. ಮತ್ತೆ ಬಿಜೆಪಿಯದ್ದೇ ಗೆಲುವಾಗಬೇಕು. ಅದಕ್ಕೆ ಬೇಕಾದ ರೂಪುರೇಷೆ ಗಳನ್ನು ಸಿದ್ಧಪಡಿಸುತ್ತೇವೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.

ಶನಿವಾರ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ನಡೆದ ಪಕ್ಷದ ಜಿಲ್ಲಾ ಪದಾಧಿಕಾರಿಗಳು ಹಾಗೂ ಪ್ರವಾಸಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ನಾವು ಐದೂ ಕ್ಷೇತ್ರಗಳಲ್ಲಿ ಸೋತಿದ್ದೇವೆ. ಈಗ ಏನು ಹೇಳಿದರೂ ಸಮಾಧಾನದ ಮಾತಾಗುತ್ತದೆ. ಮತ್ತೆ ನಾವು ಗೆಲುವಿನ ಕಡೆಗೆ ಹೆಜ್ಜೆ ಹಾಕಿದಾಗ ಮಾತ್ರ ಸೋಲಿನ ನೋವು ದೂರಾಗುತ್ತದೆ. ಮುಂದಿನ ಲೋಕಸಭಾ ಚುನಾವಣೆ ಸಿದ್ಧತೆ ನಡೆಸಿದ್ದೇವೆ. ಮನೆಯಲ್ಲೇ ಆಘಾತ ಉಂಟಾದರೆ ನೋವು ಇರುತ್ತದೆ. ನಿಧಾನಕ್ಕೆ ಅದರಿಂದ ಸಹಜ ಸ್ಥಿತಿಗೆ ಹೋಗುವ ಪ್ರಯತ್ನ ನಡೆಯುತ್ತದೆ ಎಂದರು.

ಜನರ ಮಧ್ಯೆ ಇರುವುದು ಕಾಂಗ್ರೆಸ್ಸಿಗೆ ಅಪರಾಧ ಅನಿಸುತ್ತೆ: ಸಿ.ಟಿ.ರವಿ

ನಾವು ಸೋಲಿಗೆ ಅಂಜುವವರಾಗಿದ್ದರೆ ಜನಸಂಘದ ಕಾಲದಲ್ಲೇ ಪಕ್ಷದ ಕಚೇರಿ ಬಾಗಿಲು ಹಾಕಬೇಕಿತ್ತು. ಚುನಾವಣೆ ಸೋತಿದ್ದೇವೆ ಎಂದರೆ ಶರಣಾಗಿದ್ದೇವೆ ಎಂದರ್ಥವಲ್ಲ. ವಿಶ್ವಾಸವನ್ನೇ ಕಳೆದುಕೊಂಡಾಗ, ಬದುಕಿಗೆ ಇನ್ನಾವುದೂ ದಾರಿಯೇ ಇಲ್ಲ ಎನ್ನಿಸಿದಾಗ ಶರಣಾಗುತ್ತೇವೆ. ಆದರೆ ನಾವು ಶರಣಾಗುವವರಲ್ಲ ಎಂದರು.

1952 ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಜನಸಂಘವೂ ಸ್ಪರ್ಧೆ ಮಾಡಿತ್ತು. ಆಗ ಇಡೀ ದೇಶದಲ್ಲಿ ನಮಗೆ ದಕ್ಕಿದ್ದು ಮೂರು ಸ್ಥಾನಗಳು ಮಾತ್ರ. ಆಗ ಪ್ರಚಂಡ ಬಹುಮತದಿಂದ ಗೆದ್ದಿದ್ದ ಜವಹರಲಾಲ್‌ ನೆಹರು, ಜನಸಂಘವನ್ನು ನಿರ್ನಾಮ ಮಾಡುತ್ತೇವೆ ಎಂದಿದ್ದರು. ಅದಕ್ಕುತ್ತರಿಸಿದ್ದ ಶ್ಯಾಮಪ್ರಸಾದ್‌ ಮುಖರ್ಜಿ ನಾವು ನಿಮ್ಮ ಮನಸ್ಥಿತಿಯನ್ನು ನಿರ್ನಾಮ ಮಾಡುತ್ತೇವೆ ಎಂದಿದ್ದರು. ಜನಸಂಘವನ್ನು ನಿರ್ನಾಮ ಮಾಡಲು ನೆಹರು ಅವರ ಕೈನಲ್ಲಿ ಆಗಲಿಲ್ಲ. ಅದು ಬೆಳೆಯುತ್ತ ಸಾಗಿತು. ರೂಪಾಂತರಗೊಂಡು ಜನತಾ ಪಕ್ಷ ನಂತರ ಭಾ ರತೀಯ ಜನತಾ ಪಕ್ಷವಾಗಿ ಜಗತ್ತಿನ ಅತ್ಯಂತ ಹೆಚ್ಚು ಸದಸ್ಯತ್ವ ಹೊಂದಿರುವ ರಾಜಕೀಯ ಮತ್ತು ಲೋಕಪ್ರಿಯ ನೇತಾರರನ್ನು ಕೊಟ್ಟಪಕ್ಷವಾಗಿ ಬದಲಾಗಿದೆ ಎಂದು ತಿಳಿಸಿದರು.

ವರ್ತಮಾನ ಎದುರಿಸಲು ಮತ್ತು ಭವಿಷ್ಯ ರೂಪಿಸಿಕೊಳ್ಳಲು ರಾಜಕೀಯ ಪರಾಮರ್ಶೆ ಮಾಡಲೇಬೇಕು. ಆದರೆ, ದುಃಖದಿಂದ ಕೂರಲಿಕ್ಕಲ್ಲ. ಸೋಲು ಎನ್ನುವುದು ಅನಾಥ. ಸೋಲಿಗೆ ಇನ್ನೊಬ್ಬರ ಕಡೆಗೆ ಬೆಟ್ಟು ಮಾಡಿ ತೋರಿಸದೆ ನಮ್ಮದೇ ತಪ್ಪಿದೆ, ದುರ್ಬಲತೆ ನಮ್ಮದೆಂದು ಭಾವಿಸಿದ್ದೇವೆ. ನಾವು ಹೊರಗಡೆ ತಲೆ ಬಾಗುವವರಲ್ಲ. ಆದರೆ, ನಮ್ಮ ಕಾರ್ಯಕರ್ತರಿಗೆ ತಲೆ ಬಾಗುತ್ತೇವೆ. ಹಾಗಾಗಿ ನಮ್ಮಿಂದಾಗಿರುವ ತಪ್ಪುಗಳಿದ್ದರೆ ಅದನ್ನು ಕ್ಷಮಿಸಿ ಎಂದು ಕೇಳಿಕೊಳ್ಳುತ್ತೇನೆ ಎಂದರು.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷವನ್ನು ಗೆಲ್ಲಿಸುವ ಹೊಣೆಗಾರಿಕೆ ನನ್ನ ಮೇಲಿತ್ತು. ಪಕ್ಷವನ್ನೂ ಗೆಲ್ಲಿಸಲಾಗಲಿಲ್ಲ. ನಾನೂ ಗೆಲ್ಲಲಾಗÜಲಿಲ್ಲ. ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ. ಆದರೆ, ಅಟಲ್‌ಜೀ ಹೇಳಿದಂತೆ ನ ದೈನ್ಯಂ, ನ ಪಲಾಯನಂ ಎನ್ನುವ ಹಾಗೆ ತಲೆತಗ್ಗಿಸುವುದಿಲ್ಲ. ಓಡಿ ಹೋಗುವುದಿಲ್ಲ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್‌.ಸಿ.ಕಲ್ಮರುಡಪ್ಪ ಮಾತನಾಡಿ, ಜಿಲ್ಲೆ ಸಂಘಟನಾತ್ಮಕ ಜಿಲ್ಲೆಯಾದರೂ ಐದೂ ಕ್ಷೇತ್ರಗಳಲ್ಲಿ ಸೋತಿದ್ದೇವೆ. ಇದರ ಬಗ್ಗೆ ಆತ್ಮಾವಲೋಕನ ಮಾಡಿದ್ದೇವೆ. ಸೋಲಿಗೆ ಹಲವು ಕಾರಣಗಳಿವೆ. ಸೋಲು, ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನಸ್ಥಿತಿಗೆ ಬಂದಿದ್ದೇವೆ. ನೀತಿ ಮತ್ತು ನಾಯಕತ್ವ ಹೊಂದಿದ ಪಕ್ಷ ನಮ್ಮದು ಅದನ್ನೇ ಮುಂದಿಟ್ಟುಕೊಂಡು ಗೆಲುವಿನತ್ತ ಸಾಗಬೇಕು ಎಂದರು.

ಆಪರೇಷನ್ ಕಮಲ ಮಾಡಿದಾಗ ಇವರಿಗೆ ನಾಚಿಕೆ ಆಗಲಿಲ್ವಾ?: ಸಚಿವ ಶಿವರಾಜ ತಂಗಡಗಿ

ಎ.ನರೇಂದ್ರ ಅಭಿನಂದನಾ ನಿರ್ಣಯ ಮಂಡಿಸಿದರು. ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಗುಣಸಾಗರ ವಿಜಯಕುಮಾರ್‌ ಮಂಡಿಸಿದರು.

ಸಭೆಯಲ್ಲಿ ಮಾಜಿ ಶಾಸಕ ಬೆಳ್ಳಿ ಪ್ರಕಾಶ್‌, ಬಿ.ಕೆ.ಗಣೇಶ್‌ರಾವ್‌, ಗಿರೀಶ್‌ ಪಟೇಲ್‌, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ ಶೆಟ್ಟಿ, ಪುಣ್ಯಪಾಲ್‌ ಉಪಸ್ಥಿತರಿದ್ದರು. ಬೆಳವಾಡಿ ರವೀಂದ್ರ ಕಾರ್ಯಕ್ರಮ ನಿರೂಪಿಸಿದರು.

Follow Us:
Download App:
  • android
  • ios