ಪೊಲೀಸರ ವಶದಲ್ಲಿರುವ ಬಿಟ್ ಕಾಯಿನ್ ಸೇಫ್: ಪಂತ್
* ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಆಯುಕ್ತರ ಸ್ಪಷ್ಟನೆ
* ಪ್ರಿಯಾಂಕ್ ಸವಾಲು ಹಾಕುವುದು ಶೋಭೆ ತರಲ್ಲ: ನಾರಾಯಣಸ್ವಾಮಿ
* ತಪ್ಪಿತಸ್ಥರೆಂದು ಸಾಬೀತಾದರೆ ಯಾವುದೇ ಪಕ್ಷದವರೆ ಆಗಿರಲಿ ಮುಲಾಜಿಲ್ಲದೆ ಕ್ರಮ
ಬೆಂಗಳೂರು(ನ.19): ಬಿಟ್ ಕಾಯಿನ್ ಪ್ರಕರಣದ ಆರೋಪಿ ರಾಬಿನ್ ಖಂಡೇವಾಲಾ ವ್ಯಾಲೆಟ್ನಿಂದ ಪೊಲೀಸರ ವ್ಯಾಲೆಟ್ಗೆ ವರ್ಗಾವಣೆ ಆಗಿರುವ 0.8 ಬಿಟ್ ಕಾಯಿನ್ ಸುರಕ್ಷಿತವಾಗಿವೆ ಎಂದು ನಗರ ಪೊಲೀಸ್ ಆಯುಕ್ತರ ಕಚೇರಿ ಸ್ಪಷ್ಟಪಡಿಸಿದೆ.
ಬಿಟ್ ಕಾಯಿನ್ ಪ್ರಕರಣ ಸಂಬಂಧ ಆರೋಪಿ ರಾಬಿನ್ ಖಂಡೇವಾಲಾ(Robin Khandewala) ವ್ಯಾಲೆಟ್ನಿಂದ ಸರ್ಕಾರದ ಪಂಚರ ಸಮಕ್ಷಮದಲ್ಲಿ ಪೊಲೀಸ್ ವ್ಯಾಲೆಟ್ಗೆ ಬಿಟ್ ಕಾಯಿನ್ ವರ್ಗಾಯಿಸಲಾಯಿತು. ಈ ಬಗ್ಗೆ ಪಂಚನಾಮೆ ಸಹ ಆಗಿದ್ದು, ನ್ಯಾಯಾಲಯಕ್ಕೆ(Court) ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಕೂಡ ಲಗತ್ತಿಸಲಾಗಿದೆ ಎಂದು ಆಯುಕ್ತ ಕಮಲ್ ಪಂತ್(Kamal Pant) ವಿವರಣೆ ನೀಡಿದ್ದಾರೆ.
ಭಾರತದಲ್ಲಿ(India) ಬಿಟ್ ಕಾಯಿನ್ ಎಕ್ಸ್ಚೇಂಜ್ ವ್ಯವಹಾರ(Exchange Business) ನಡೆಸುವ ಕೆಲವೇ ಸಂಸ್ಥೆಗಳಲ್ಲಿ ಯುನೋ ಬಿಟ್ ಕಾಯಿನ್ ಕಂಪನಿ ಕೂಡಾ ಒಂದಾಗಿದ್ದು, ಅದೂ ಬೆಂಗಳೂರಿನಿಂದಲೇ ವಹಿವಾಟು ನಡೆಸುತ್ತಿದೆ. ಈ ಪ್ರಕರಣದಲ್ಲಿ ಆ ಕಂಪನಿ ಸಂತ್ರಸ್ತ ಕಂಪನಿಯಾಗಿದೆಯೇ ಹೊರತು ಆರೋಪಿಯಲ್ಲ. ತನಿಖೆಗೆ ತಾಂತ್ರಿಕ ನೆರವನ್ನು ಯುನೋ ಕಂಪನಿ ನೀಡಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
Bitcoin Scam: ಕಾಂಗ್ರೆಸ್-ಬಿಜೆಪಿ ನಾಯಕರ ಮಧ್ಯೆ ವಾಗ್ಯುದ್ಧ..!
ಬಿಟ್ ಕಾಯಿನ್ ಹಗರಣ ಸಂಬಂಧ ಆರೋಪಿ ರಾಬಿನ್ ಖಂಡೇವಾಲಾ ವ್ಯಾಲೆಟ್ನಿಂದ ಜಪ್ತಿಯಾದ ಬಿಟ್ ಕಾಯಿನ್ ನಾಪತ್ತೆಯಾಗಿದೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದರು. ಈ ಆರೋಪಕ್ಕೆ ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.
ಬಿಟ್ ಕಾಯಿನ್(Bitcoin) ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿ(Bengaluru Police Commissioner's Office) ಇಂಟರ್ಪೊಲ್ನ(Interpol) ನೆರವು ಕೇಳಿದ್ದರ ಬಗ್ಗೆ ಪ್ರಕಟಣೆ ಹೊರಡಿಸಿತ್ತು. ಇದರಲ್ಲಿ ದೂರಿನ ಸಾರಾಂಶವನ್ನ ಏಕೆ ಉಲ್ಲೇಖಿಸಿಲ್ಲ? ಅಂತ ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ಅವರು ಪ್ರಶ್ನಿಸಿದ್ದರು.
ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ(Twitter) ನವೆಂಬರ್ 13 ರಂದು ಹೊರಡಿಸಿದ ಪತ್ರಿಕಾ ಪ್ರಕಟಣೆಯನ್ನ ಉಲ್ಲೇಖಿಸಿರುವ ಪ್ರಿಯಾಂಕ ಖರ್ಗೆ(Priyank Kharge), ಕ್ರೈಂ ನಂ 3/2020 ರ ಪ್ರಕರಣ ಸಂಬಂಧ 28 ಏಪ್ರಿಲ್ 2021 ರಂದು ಬೆಂಗಳೂರು ಪೊಲೀಸ್ ಕಮಿಷನರ್ ಇಂಟರ್ ಪೊಲ್ ಗೆ ಪತ್ರ ಬರೆಯಲಾಗಿದೆ. ಆದರೆ, ಇದರಲ್ಲಿ ದೂರಿನ ಸಾರಾಂಶ ಉಲ್ಲೇಖಿಸಿಲ್ಲ ಏಕೆ..? ಅಂತ ಪ್ರಶ್ನೆ ಮಾಡಿದ್ದರು.
ಪ್ರಿಯಾಂಕ್ ಸವಾಲು ಹಾಕುವುದು ಶೋಭೆ ತರಲ್ಲ: ಸಚಿವ ಎ.ನಾರಾಯಣಸ್ವಾಮಿ
ರಾಮನಗರ: ಬಿಟ್ ಕಾಯಿನ್ ಪ್ರಕರಣದ ವಿಚಾರವಾಗಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತಳಬುಡ ಇಲ್ಲದೇ ಮಾತನಾಡುತ್ತಿದ್ದಾರೆ. ಆತ ಒಬ್ಬ ವಿರೋಧ ಪಕ್ಷದವನ ಮಗನಾಗಿ, ರಾಜ್ಯದ ಮಾಜಿ ಸಚಿವನಾಗಿ ಗೌರವಯುತವಾಗಿ ಹೇಗೆ ಮಾತನಾಡಬೇಕು ಎಂಬುದೇ ಗೊತ್ತಿಲ್ಲ ಎಂದು ಸಾಮಾಜಿಕ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಜನಪ್ರತಿನಿಧಿಗಳಿಗೆ ಸವಾಲು ಹಾಕುವುದು ಪ್ರಿಯಾಂಕ ಖರ್ಗೆಗೆ ಶೋಭೆ ತರುವುದಿಲ್ಲ. ಆತ ಅನಗತ್ಯ ಮಾತುಗಳನ್ನು ನಿಲ್ಲಿಸಿ ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡಲೆಂದು ಮನವಿ ಮಾಡುತ್ತೇನೆ ಎಂದರು.
Bitcoin scam;ಇಲ್ಲದ 'ಬಿಟ್' ವಿವಾದ ಜೀವಂತವಾಗಿಡಲು 'ಕೈ' ಯತ್ನ ಎಂದ ಸಿಎಂಗೆ ಕಾಂಗ್ರೆಸ್ ತಿರುಗೇಟು!
ಬಿಟ್ ಕಾಯಿನ್ ಕುರಿತಾಗಿ ಕೇಂದ್ರದಲ್ಲಿಯೇ ಚರ್ಚೆಗಳು ನಡೆಯುತ್ತಿವೆ. ಅದನ್ನು ಅಕೌಂಟಬಿಲಿಟಿ ಮಾಡಬೇಕ ಬೇಡವ ಅಥವಾ ಆದಾಯ ತೆರಿಗೆ ಪರಧಿಗೆ ಸೇರಿಸಬೇಕಾ ಬೇಡವೆ ಎಂಬುದರ ಬಗ್ಗೆ ವರದಿ ಸಿದ್ಧವಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯರವರು ಬಿಟ್ ಕಾಯಿನ್ ಬಗ್ಗೆ ಯಾವುದೇ ದಾಖಲೆಗಳು ಇಲ್ಲವೆಂದು ಒಪ್ಪಿಕೊಂಡಿದ್ದಾರೆ. ಇದೀಗ ಮತ್ತೆ ಬಿಟ್ ಕಾಯಿನ್ ಬಗ್ಗೆ ಮಾತನಾಡುತ್ತಿರುವುದು ಏಕೆಂದು ಅರ್ಥವಾಗುತ್ತಿಲ್ಲ. ರಾಜಕಾರಣಕ್ಕಾಗಿ ರಾಜಕಾರಣ ಮಾಡುವುದನ್ನು ಕಾಂಗ್ರೆಸ್ ನಾಯಕರು ಬಿಡಬೇಕು ಎಂದು ಹೇಳಿದರು.
ವಿರೋಧ ಪಕ್ಷದವರು ತಮ್ಮ ಬಳಿ ಯಾವುದೇ ದಾಖಲೆಗಳಿದ್ದರು ನೀಡಲಿ, ತನಿಖೆ ನಡೆಸಲಾಗುವುದು. ತಪ್ಪಿತಸ್ಥರೆಂದು ಸಾಬೀತಾದರೆ ಯಾವುದೇ ಪಕ್ಷದವರೆ ಆಗಿರಲಿ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು. ಯಾರನ್ನೂ ರಕ್ಷಣೆ ಮಾಡುವ ವಿಚಾರವೇ ಇಲ್ಲದೆಂದು ಮುಖ್ಯಮಂತ್ರಿಗಳೇ ಸ್ಪಷ್ಟಪಡಿಸಿದ್ದಾರೆ ಎಂದು ನಾರಾಯಣಸ್ವಾಮಿ ತಿಳಿಸಿದರು.