ಜೈನ ಧರ್ಮದ ಉಳಿವಿಗಾಗಿ ಅದರ ಪಾಲನೆಗಾಗಿ ಜೈನ ಬಂಧುಗಳು ಹೆಣ್ಣಾಗಲಿ ಗಂಡಾಗಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೆರಬೇಕು. ಜೈನ ಧರ್ಮದ ಜನಸಂಖ್ಯೆ ಹೆಚ್ಚಾದರೆ ಮಾತ್ರ ಜೈನ ಧರ್ಮಕ್ಕೆ ಉಳಿಗಾಲವಿದೆ. ಹೆಣ್ಣು ಮಕ್ಕಳು ಜನಿಸಿದ ಮನೆಯಲ್ಲಿ ಮಾತ್ರ ಮುಂಬರುವ ದಿನಗಳಲ್ಲಿ ಆಹಾರ ಸೇವಿಸಲಾಗುವುದು ಎಂದು ಆಚಾರ್ಯ ಶ್ರೀ 108 ಕುಲರತ್ನ ಭೂಷಣ ಮುನಿ ಮಹಾರಾಜರು ಹೇಳಿದರು.

ಅಥಣಿ (ಮೇ.3) : ಜೈನ ಧರ್ಮದ ಉಳಿವಿಗಾಗಿ ಅದರ ಪಾಲನೆಗಾಗಿ ಜೈನ ಬಂಧುಗಳು ಹೆಣ್ಣಾಗಲಿ ಗಂಡಾಗಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೆರಬೇಕು. ಜೈನ ಧರ್ಮದ ಜನಸಂಖ್ಯೆ ಹೆಚ್ಚಾದರೆ ಮಾತ್ರ ಜೈನ ಧರ್ಮಕ್ಕೆ ಉಳಿಗಾಲವಿದೆ. ಹೆಣ್ಣು ಮಕ್ಕಳು ಜನಿಸಿದ ಮನೆಯಲ್ಲಿ ಮಾತ್ರ ಮುಂಬರುವ ದಿನಗಳಲ್ಲಿ ಆಹಾರ ಸೇವಿಸಲಾಗುವುದು ಎಂದು ಆಚಾರ್ಯ ಶ್ರೀ 108 ಕುಲರತ್ನ ಭೂಷಣ ಮುನಿ ಮಹಾರಾಜರು ಹೇಳಿದರು.

Add Asianetnews Kannada as a Preferred SourcegooglePreferred

ಮಹೇಶವಾಡಗಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಂಚಕಲ್ಯಾಣ ಮಹಾಮಹೋತ್ಸವದ ತೀರ್ಥಂಕರ ಜನ್ಮ ಕಲ್ಯಾಣ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮುಂಬರುವ ದಿನಗಳಲ್ಲಿ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಗುರುಕುಲ ತೆರೆಯಲಾಗುವುದು. ಅಲ್ಲಿ ಬಡ ಹಾಗೂ ಅನಾಥ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಸಂಸ್ಕಾರ ಜೈನ ಧರ್ಮದ ಆಚಾರ ವಿಚಾರ ತಿಳಿಸಿಕೊಡಲಾಗುವುದು ಎಂದರು.

ಇಂದಿನ ಆಧುನಿಕ ಯುಗದಲ್ಲಿ ಹೆಣ್ಣು ಗಂಡು ಎಂಬ ಭೇದ ಭಾವ ದೂರಾಗಬೇಕು. ಮಗನಿಗೆ ಸೊಸೆಯಾಗಿ ಹೆಣ್ಣು ಬೇಕು. ಆದರೆ ಸ್ವಂತ ಮಗಳಾಗಿ ಹೆಣ್ಣು ಮಗಳು ಬೇಡ ಎನ್ನುವುದು ಮೂರ್ಖತನವಾಗಿದೆ ಎಂದ ಮುನಿಗಳು, ತೀರ್ಥಂಕರ ಜನ್ಮ ಕಲ್ಯಾಣ ಜನ್ಮ ಅಭಿಷೇಕ ನಾಮಕರಣ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೆ ಜೈನ ಪುಣ್ಯ ಕ್ಷೇತ್ರ ಶಿಖರಜಿಗೆ ಹೋಗಿ ಬಂದಷ್ಟೇ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು. 

ಇದನ್ನೂ ಓದಿ: ಛತ್ರಪತಿ ಶಿವಾಜಿ ಮಹಾರಾಜರ ರೂಪಕಗಳ ಭವ್ಯ ಮೆರವಣಿಗೆಗೆ ಚಾಲನೆ

ಆಚಾರ್ಯ ಶ್ರೀ 108 ಉತ್ತಮ ಸಾಗರ ಮುನಿ ಮಹಾರಾಜರು ಮಾತನಾಡಿ, ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ. ಜೈನ ಧರ್ಮದವರು ಹೆಚ್ಚು ಮಕ್ಕಳನ್ನು ಹೆತ್ತರೆ ಸಾಕಲು ಸಲುಹಲು ಹೆದರುವ ಅವಶ್ಯಕತೆ ಇಲ್ಲ, ತೀರ್ಥಂಕರ ಆಶೀರ್ವಾದವಿರುತ್ತದೆ ಎಂದರು. ಈ ಸಂದರ್ಭದಲ್ಲಿ ಶ್ರೀ 108 ಶಾಂತಿಧರ್ಮ ಮಹರಾಜರು, 105 ಕರುಣಾಮತಿ ಮಾತಾಜಿ, 105 ದರ್ಶನ ಭೂಷಣಮತಿ ಮಾತಾಜಿ, 105 ಜ್ಞಾನ ಭೂಷಣಮತಿ ಮಾತಾಜಿ, 105 ಚಾರಿತ್ರ್ಯ ಭೂಷಣಮತಿ ಮಾತಾಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಜನ್ಮ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ವಿವಿಧ ವಿಧಾನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು