ಬರೋಬ್ಬರಿ 13 ವರ್ಷಗಳ ಬಳಿಕ ಕಪಾಲಿ ಪಟ್ನೆ ಕುಟುಂಬಕ್ಕೆ ನ್ಯಾಯ ಸಿಕ್ಕಿದೆ. ಸಿಸೇರಿಯನ್‌ ಸಮಯದಲ್ಲಿ ಸಾವು ಕಂಡಿದ್ದ ಕಪಾಲಿ ಪಟ್ನೆ ಹಾಗೂ ಆಕೆಯ ಹುಟ್ಟದ ಮಗುವಿಗಾಗಿ 1.5 ಕೋಟಿ ರೂಪಾಯಿ ದಂಡ ಕಟ್ಟುವಂತೆ ಎನ್‌ಸಿಡಿಆರ್‌ಸಿ ಕೋರ್ಟ್‌ ಬೆಂಗಳೂರಿನ ಸಂತೋಷ್‌ ಆಸ್ಪತ್ರೆಗೆ ಸೂಚನೆ ನಿಡಿದೆ.

ಬೆಂಗಳೂರು (ಮೇ.28): ಇನ್ನೇನು ಮಗುವಿನ ನಿರೀಕ್ಷೆಯಲ್ಲಿದ್ದ ಕಪಾಲಿ ಪಟ್ನೆಯನ್ನು ಆ ದಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಪುಟ್ಟ ಪಾಪುವಿನ ಆಗಮನದ ಖುಷಿಯಲ್ಲಿದ್ದ ಇಡೀ ಕುಟುಂಬ ಸಿಸೇರಿಯನ್‌ ಆಪರೇಷನ್‌ಗೂ ಒಪ್ಪಿತ್ತು. ಆದರೆ, ಅದೇನಾಯ್ತೋ ಗೊತ್ತಿಲ್ಲ ಕೆಲವೇ ಹೊತ್ತಿನಲ್ಲಿ ಆಸ್ಪತ್ರೆಯು ತಾಯಿ ಹಾಗೂ ಮಗು ಸಾವನ್ನಪ್ಪಿದೆ ಎಂದು ತಿಳಿಸಿತ್ತು. ಇಡೀ ಕುಟುಂಬಕ್ಕೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತ ಅನುಭವ. ಆಸ್ಪತ್ರೆಯ ವಿರುದ್ಧ ವೈದ್ಯಕೀಯ ನಿರ್ಲಕ್ಯದ ಕೇಸ್‌ ದಾಖಲಿಸಿದ ಕುಟುಂಬಕ್ಕೆ ಬರೋಬ್ಬರಿ 13 ವರ್ಷಗಳ ಬಳಿಕ ನ್ಯಾಯ ಸಿಕ್ಕಿದೆ. ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) 'ವೈದ್ಯಕೀಯ ನಿರ್ಲಕ್ಷ್ಯ' ಮತ್ತು ಚಿಕಿತ್ಸೆಯಲ್ಲಿನ ವೈಫಲ್ಯದ ಕಾರಣ ನೀಡಿ ಕಪಾಲಿ ಪಟ್ನೆ ಕುಟುಂಬಕ್ಕೆ 1.5 ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ಪಾವತಿಸುವಂತೆ ಬೆಂಗಳೂರು ನಗರದ ಆಸ್ಪತ್ರೆಯನ್ನು ಕೇಳಿದೆ. 2010ರ ಏಪ್ರಿಲ್‌ 16 ರಂದು 25 ವರ್ಷದ ಕಪಾಲಿ ಹಾಗೂ ಆಕೆಯ ಇನ್ನೂ ಹುಟ್ಟದ ಮಗು ಸಾವು ಕಂಡಿದೆ ಎಂದು ನಗರದ ಪ್ರೊಮೆನೇಡ್‌ ರಸ್ತೆಯ ಸಂತೋಷ್‌ ಆಸ್ಪತ್ರೆ ಹೇಳಿತ್ತು. ಇದರ ಬೆನ್ನಲ್ಲಿಯೇ ಇದು ವೈದ್ಯಕೀಯ ನಿರ್ಲಕ್ಷ್ಯ ಎಂದು ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು.

'ಈ ಪ್ರಕರಣದ ವಿಶಿಷ್ಟತೆಯ ದೃಷ್ಟಿಯಿಂದ, ನ್ಯಾಯದ ಅಂತ್ಯವನ್ನು ಪೂರೈಸಲು, 1.6 ಕೋಟಿ ರೂಪಾಯಿಗಳ ಒಟ್ಟು ಪರಿಹಾರವನ್ನು ನ್ಯಾಯಯುತ ಮತ್ತು ಸಮರ್ಪಕವಾಗಿರಲು ನಾವು ಅನುಮತಿಸುತ್ತೇವೆ' ಎಂದು ಎನ್‌ಸಿಡಿಆರ್‌ಸಿ ತನ್ನ ಮೇ 23 ರ ಆದೇಶದಲ್ಲಿ ತಿಳಿಸಿದೆ. ಆಸ್ಪತ್ರೆಯ ಆಡಳಿತ ಮಂಡಳಿಗೆ 1.5 ಕೋಟಿ ರೂಪಾಯಿ ಕಟ್ಟುವಂತೆ ಹೇಳಲಾಗಿದ್ದರೆ, ಅರಿವಳಿಕೆ ತಜ್ಞರಿಗೆ 10 ಲಕ್ಷ ರೂಪಾಯಿ ದಂಡ ಕಟ್ಟುವಂತೆ ತಿಳಿಸಲಾಗಿದೆ. ಆದರೆ ಪ್ರಸೂತಿ ತಜ್ಞರನ್ನು ಕೇಸ್‌ನಿಂದ ಮುಕ್ತಮಾಡಲಾಗಿದೆ. ಅವರನ್ನು ಸಂಪರ್ಕಿಸಿದಾಗ, ಸಂತೋಷ್ ಆಸ್ಪತ್ರೆಯು ಎನ್‌ಸಿಡಿಆರ್‌ಸಿ ಆದೇಶವನ್ನು ಸ್ವೀಕರಿಸದ ಕಾರಣ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಹಿರಿಯ ಸಿಬ್ಬಂದಿ ತಿಳಿಸಿದ್ದಾರೆ.

ಸಿಸೇರಿಯನ್‌ ಸಮಯದಲ್ಲಿ ಗರ್ಭಿಣಿ ಕೆಲ ಸಮಸ್ಯೆಗಳನ್ನು ಎದುರಿಸಿದ್ದರು, ಕೆಲವೇ ಸಮಯದ ಅಂತರದಲ್ಲಿ ಅವರು ಸಾವು ಕಂಡರು. ಇನ್ನು ದೂರುದಾರರು ಹೇಳುವ ಪ್ರಕಾರ, ಆಪರೇಷನ್‌ ಟೇಬಲ್‌ನಿಂದ ಗರ್ಭಿಣಿ ಬಿದ್ದ ಕಾರಣದಿಂದಾಗಿಯೇ ಆಕೆ ಸಾವು ಕಂಡಿದ್ದಾಳೆ ಎನ್ನಲಾಗಿದೆ. ಇದು ಸ್ಯಾಕ್ರೋ-ಇಲಿಯಾಕ್ ಜಂಟಿ ಮುರಿತಕ್ಕೆ ಕಾರಣವಾಯಿತು ಮತ್ತು ರಕ್ತಸ್ರಾವದಿಂದಾಗಿ ಆಕೆ ಸಾವು ಕಂಡಿದ್ದಾರೆ. ಆದರೆ, ಪ್ರತಿದೂರುದಾರರ ಪ್ರಕಾರ, ಅರಿವಳಿಕೆ ಔಷಧ ಸೋಡಿಯಂ ಪೆಂಟಾಥಾಲ್‌ಗೆ ತೀವ್ರವಾದ ಅನಾಫಿಲ್ಯಾಕ್ಟಿಕ್ ಪ್ರತಿಕ್ರಿಯೆಯಿಂದಾಗಿ, ಇದು ನಂತರ ಹೃದಯ ಸ್ತಂಭನ ಮತ್ತು ಸಾವಿಗೆ ಕಾರಣವಾಯಿತು' ಎಂದು ಎನ್‌ಸಿಡಿಆರ್‌ಸಿ ತಿಳಿಸಿದೆ.

"ಆದಾಗ್ಯೂ, ಅನಾಫಿಲ್ಯಾಕ್ಟಿಕ್ ಪ್ರತಿಕ್ರಿಯೆಯ ಬಗ್ಗೆ ಆಸ್ಪತ್ರೆಗಳು ನೀಡಿದ ಸಲ್ಲಿಕೆಯ ಬಗ್ಗೆ ನಮಗೆ ಒಪ್ಪಿತವಿಲ್ಲ. ಅನಾಫಿಲ್ಯಾಕ್ಟಿಕ್ ಔಷಧ ಪ್ರತಿಕ್ರಿಯೆಯಾಗಿದ್ದರೆ ಬೃಹತ್ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಒಳ-ಪೆರಿಟೋನಿಯಲ್ ರಕ್ತಸ್ರಾವ ಏಕಾಗುತ್ತದೆ? ಮೇಲಿಂದ ಬಿದ್ದ ಪಕ್ಷದಲ್ಲಿ ಮಾತ್ರವೇ ಆಂತರಿಕ ಅಂಗಗಳಲ್ಲಿ ಈ ರೀತಿಯ ಪ್ರತಿಕ್ರಿಯೆ ಕಾಣುತ್ತದೆ. ಇದನ್ನು ಅನಾಫಿಲ್ಯಾಕ್ಟಿಕ್ ಪ್ರತಿಕ್ರಿಯೆ ಎನ್ನಲು ಸಾಧ್ಯವಿಲ್ಲ. ಅದರಿಂದ ಈ ರೀತಿಯ ಅಘಾತಕಾರಿ ಪ್ರತಿಕ್ರಿಯೆ ಆಗುತ್ತದೆ ಎನ್ನುವುದು ನಾವು ಒಪ್ಪಿಕೊಳ್ಳೋದಿಲ್ಲ' ಎಂದು ಹೇಳಿದೆ ಲಭ್ಯವಿರುವ ವೈದ್ಯಕೀಯ ದಾಖಲೆಗಳ ಆಧಾರದ ಮೇಲೆ, ಆಸ್ಪತ್ರೆಯು ಅನಾಫಿಲ್ಯಾಕ್ಸಿಸ್ ಕಥೆ ಕಟ್ಟಲು ಪ್ರಯತ್ನಿಸುತ್ತಿವೆ ಎಂದು ಎನ್‌ಸಿಡಿಆರ್‌ಸಿ ಗಮನಿಸಿದೆ. ಆಸ್ಪತ್ರೆಯ ಅಧಿಕಾರಿಗಳು ಸಾಕ್ಷ್ಯವನ್ನು ನಾಶಪಡಿಸಲು ಪ್ರಯತ್ನಿಸಿದವು ಎಂದು ತಿಳಿಸಿದೆ.

ಮೊದಲ ಪುತ್ರ IAS ಅಧಿಕಾರಿ, ಮತ್ತೊಬ್ಬ ಉದ್ಯಮಿ; ಅನಾಥಾಶ್ರಮದಲ್ಲಿ ಶ್ರೀಮಂತ ತಂದೆ!

ನ್ಯಾಯಕ್ಕಿಂತ ಯಾರೂ ಮೇಲಲ್ಲ: ಇನ್ನು ಕಪಾಲಿ ಪಟ್ನೆಯ ಪತಿ ಪರೀಕ್ಷಿತ್‌ ದಲಾಲ್‌ ಎನ್‌ಸಿಡಿಆರ್‌ಸಿ ತೀರ್ಪಿನ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವುದೇ ವೈದ್ಯರು ನ್ಯಾಯಕ್ಕಿಂತ ಮೇಲಲ್ಲ ಎನ್ನುವುದನ್ನು ಇದು ಎತ್ತಿ ತೋರಿಸಿದೆ.ಆದರೆ ದಲಾಲ್ ತೀರ್ಪಿನ ಬಗ್ಗೆ ಸಂಪೂರ್ಣ ಸಂತುಷ್ಟವಾಗಿಲ್ಲ. ವಿಶೇಷವಾಗಿ ಪ್ರಸೂತಿ ತಜ್ಞರನ್ನು ಖುಲಾಸೆ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ತೀರಾ ಕಡಿಮೆ ಪರಿಹಾರವನ್ನು ನೀಡುವ ಮೂಲಕ ನಮ್ಮ ದೇಶದಲ್ಲಿ ಜೀವನವನ್ನು ನಾವು ಎಷ್ಟು ಕಡಿಮೆ ಗೌರವಿಸುತ್ತೇವೆ ಎಂಬುದನ್ನು ಸಹ ತೀರ್ಪು ತೋರಿಸುತ್ತದೆ ಎಂದು ದಲಾಲ್ ಹೇಳಿದರು. ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಇಲ್ಲಿಯವರೆಗೆ 12 ಸಾಕ್ಷಿಗಳನ್ನು ಪ್ರಶ್ನಿಸಲಾಗಿದೆ.

ಮೋದಿ ಉದ್ಘಾಟನೆ ಮಾಡಿದ್ದ ಮಹಾಕಾಲ ಲೋಕದ ಸಪ್ತಋಷಿ ಪ್ರತಿಮೆಗಳು ಬಿರುಗಾಳಿಗೆ ನೆಲಸಮ!