ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಕಳೆದ ಆರು ತಿಂಗಳಲ್ಲಿ ₹33.85 ಕೋಟಿ ಖರ್ಚು ಮಾಡಲಾಗಿದೆ ಎಂದು ವಿಧಾನಸಭೆಯಲ್ಲಿ ಬಹಿರಂಗವಾಗಿದೆ. ಚಾಮರಾಜಪೇಟೆಯಲ್ಲಿ ಒಂದು ಗುಂಡಿಗೆ 1 ಲಕ್ಷ ರೂಪಾಯಿ ಖರ್ಚು ಮಾಡಿರುವುದು ಸಾರ್ವಜನಿಕರ ತೆರಿಗೆ ಹಣದ ಲೂಟಿಯ ಬಗ್ಗೆ ತೀವ್ರ ಅನುಮಾನಗಳನ್ನು ಹುಟ್ಟುಹಾಕಿದೆ.

ಬೆಂಗಳೂರು (ಏ.28): ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ದೂರು ನೀಡಿ ಜನ ಸಾಕಾಗಿದ್ದಾರೆ. ಆದರೆ, ಇದೇ ಗುಂಡಿಗಳನ್ನು ಮುಚ್ಚುವ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣ ಹೇಗೆ ಲೂಟಿಯಾಗುತ್ತಿದೆ ಎಂಬ ಆಘಾತಕಾರಿ ಅಂಶ ಈಗ ವಿಧಾನಸಭೆಯಲ್ಲಿ ಬಹಿರಂಗವಾಗಿದೆ. ಕಳೆದ ಆರು ತಿಂಗಳಲ್ಲಿ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಜಿಬಿಎ (GBA) ಬರೋಬ್ಬರಿ ₹33.85 ಕೋಟಿ ಖರ್ಚು ಮಾಡಿದೆ! ಇದರಲ್ಲಿ ಅತಿ ದೊಡ್ಡ ಆಶ್ಚರ್ಯವೆಂದರೆ, ಚಾಮರಾಜಪೇಟೆ ಕ್ಷೇತ್ರದಲ್ಲಿ ಕೇವಲ ಒಂದು ಗುಂಡಿ ಮುಚ್ಚಲು ಬರೋಬ್ಬರಿ 1 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ.

ವಿಧಾನಸಭೆಯಲ್ಲಿ ಬಯಲಾದ ‘ದುಬಾರಿ’ ಕಾಮಗಾರಿ:

ಮಾಜಿ ಸಚಿವ ಹಾಗೂ ಶಾಸಕ ಅಶ್ವಥ್ ನಾರಾಯಣ್ ಅವರು ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಅಂಕಿಅಂಶಗಳನ್ನು ನೀಡಿದ್ದಾರೆ. ಈ ಅಂಕಿಅಂಶಗಳನ್ನು ಗಮನಿಸಿದರೆ ಇದು ರಸ್ತೆ ರಿಪೇರಿಯೋ ಅಥವಾ ರಸ್ತೆಗೆ ಚಿನ್ನದ ಲೇಪನವೋ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಅಂಕಿಅಂಶಗಳ ಕಿರುನೋಟ:

  • ಒಟ್ಟು ಗುಂಡಿಗಳು: 41,150
  • ಮುಚ್ಚಲಾದ ಗುಂಡಿಗಳು: 39,887
  • ಒಟ್ಟು ವೆಚ್ಚ: ₹33.85 ಕೋಟಿ
  • ಬಾಕಿ ಉಳಿದಿರುವ ಗುಂಡಿಗಳು: 1,263

ಕ್ಷೇತ್ರದಿಂದ ಕ್ಷೇತ್ರಕ್ಕೆ ದರ ವ್ಯತ್ಯಾಸ: ಭ್ರಷ್ಟಾಚಾರದ ವಾಸನೆ?

ಬೆಂಗಳೂರಿನ ಒಂದೇ ನಗರದಲ್ಲಿ, ಒಂದೇ ರೀತಿಯ ಗುಂಡಿಗಳನ್ನು ಮುಚ್ಚಲು ಜಿಬಿಎ ಅಧಿಕಾರಿಗಳು ಬೇರೆ ಬೇರೆ ದರಗಳನ್ನು ನಿಗದಿಪಡಿಸಿದ್ದಾರೆ. ಇದು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಚಾಮರಾಜಪೇಟೆ (ಅತ್ಯಂತ ದುಬಾರಿ): ಇಲ್ಲಿ 140 ಗುಂಡಿಗಳನ್ನು ಮುಚ್ಚಲು 1.40 ಕೋಟಿ ರೂ. ಖರ್ಚು ಮಾಡಲಾಗಿದೆ. ಅಂದರೆ ಒಂದು ಗುಂಡಿಗೆ ಸರಾಸರಿ 1 ಲಕ್ಷ ರೂಪಾಯಿ!

ಶಿವಾಜಿನಗರ: ಇಲ್ಲಿ ಒಂದು ಗುಂಡಿಗೆ ₹60,344 ವೆಚ್ಚ ಮಾಡಲಾಗಿದೆ. ಇಲ್ಲಿ 232 ಗುಂಡಿಗಳಿಗೆ 1.40 ಕೋಟಿ ಬಿಲ್ ಮಾಡಲಾಗಿದೆ.

ಗೋವಿಂದರಾಜನಗರ: ಒಂದು ಗುಂಡಿಗೆ ₹49,180 ವೆಚ್ಚ.

ವಿಜಯನಗರ: ಒಂದು ಗುಂಡಿಗೆ ₹47,120 ವೆಚ್ಚ.

ಜಯನಗರದ ಅಚ್ಚರಿ: ಇಡೀ ನಗರದಲ್ಲಿ ಕೋಟಿ ಕೋಟಿ ಲೂಟಿಯಾಗುತ್ತಿದ್ದರೆ, ಜಯನಗರದಲ್ಲಿ ಮಾತ್ರ 565 ಗುಂಡಿಗಳನ್ನು ‘ಶೂನ್ಯ’ ವೆಚ್ಚದಲ್ಲಿ ಮುಚ್ಚಲಾಗಿದೆ ಎಂದು ವರದಿ ಹೇಳುತ್ತಿದೆ. ಇದು ಹೇಗೆ ಸಾಧ್ಯ ಎಂಬುದು ಈಗ ಯಕ್ಷಪ್ರಶ್ನೆ.

ರಿಯಾಲಿಟಿ ಚೆಕ್‌ನಲ್ಲಿ ಬಯಲಾದ ಕಳಪೆ ಕಾಮಗಾರಿ:

ಈ ಭಾರಿ ವೆಚ್ಚದ ಕಾಮಗಾರಿಗಳ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ನಡೆಸಿದ ‘ರಿಯಾಲಿಟಿ ಚೆಕ್’ನಲ್ಲಿ ಕರಾಳ ಸತ್ಯ ಹೊರಬಿದ್ದಿದೆ. ಶಿವಾಜಿನಗರದ ಬಂಬೂ ಬಜಾರ್ ರಸ್ತೆಯಲ್ಲಿ 60 ಸಾವಿರ ಖರ್ಚು ಮಾಡಿ ಮುಚ್ಚಿದ ಗುಂಡಿಗಳು ಮೂರೇ ತಿಂಗಳಲ್ಲಿ ಮತ್ತೆ ಬಾಯಿ ಬಿಟ್ಟಿವೆ. ಚಾಮರಾಜಪೇಟೆಯಲ್ಲಿ ಲಕ್ಷಾಂತರ ರೂಪಾಯಿ ಬಿಲ್ ಮಾಡಿದ್ದರೂ ರಸ್ತೆಗಳ ಸ್ಥಿತಿ ಮಾತ್ರ ಸುಧಾರಿಸಿಲ್ಲ.

ಜನರ ಆಕ್ರೋಶ ಮತ್ತು ತನಿಖೆಗೆ ಒತ್ತಾಯ:

ಕೆಲವು ಕ್ಷೇತ್ರಗಳಲ್ಲಿ ₹5,000 ಕ್ಕಿಂತ ಕಡಿಮೆ ವೆಚ್ಚದಲ್ಲಿ ಗುಂಡಿ ಮುಚ್ಚಿದ್ದರೆ, ಇನ್ನು ಕೆಲವು ಕಡೆ ಲಕ್ಷಾಂತರ ರೂಪಾಯಿ ಏಕೆ? ಬೆಂಗಳೂರು ದಕ್ಷಿಣದಲ್ಲಿ ₹5,209 ಕ್ಕೆ ಒಂದು ಗುಂಡಿ ಮುಚ್ಚಲು ಸಾಧ್ಯವಿರುವಾಗ, ಚಾಮರಾಜಪೇಟೆಯಲ್ಲಿ 1 ಲಕ್ಷ ಏಕೆ ಬೇಕು? ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಸಾರ್ವಜನಿಕರ ಹಣ ದುರ್ಬಳಕೆ ಆಗುತ್ತಿದ್ದು, ಇದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.