ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ನಿಷೇಧದ ಮೊದಲ ದಿನವೇ 137 ಕೇಸ್, 68,500 ರು.ದಂಡ ವಸೂಲಿ
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಸಂಚಾರ ನಿಷೇಧಿಸಲಾಗಿದೆ. ನಿಯಮ ಜಾರಿಗೆ ಬಂದ ಮೊದಲ ದಿನವಾದ ಮಂಗಳವಾರ 137 ಉಲ್ಲಂಘನೆ ಪ್ರಕರಣ ಪತ್ತೆಯಾಗಿದ್ದು, 68,500 ರು. ದಂಡ ವಸೂಲಿಯಾಗಿದೆ.
![Bengaluru Mysuru Expressway Ban on two wheelers and autos 68500 fines were collected on the first day gow Bengaluru Mysuru Expressway Ban on two wheelers and autos 68500 fines were collected on the first day gow](https://static-ai.asianetnews.com/images/01h6nm0qn8grp5rg0n8rbjh9gs/expressway-bike-ban_363x203xt.jpg)
ರಾಮನಗರ (ಜು.2): ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಸಂಭವಿಸುತ್ತಿರುವ ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳವಾರದಿಂದ ಜಾರಿಗೆ ಬಂದ ದ್ವಿಚಕ್ರ, ತ್ರಿಚಕ್ರ ಸೇರಿ ವಿವಿಧ ಬಗೆಯ ವಾಹನಗಳ ಸಂಚಾರ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದ್ದು, ನಿಯಮ ಉಲ್ಲಂಘಿಸಿದವರು 500 ರು. ದಂಡ ಪಾವತಿಸಿದರು. ಈ ಮಧ್ಯೆ, ಮೊದಲ ದಿನವೇ 137 ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ಒಟ್ಟೂ, 68,500 ರು. ದಂಡ ವಸೂಲಿ ಮಾಡಲಾಗಿದೆ.
ಹೆದ್ದಾರಿ ಉದ್ದಕ್ಕೂ ನಿಗಾ ವಹಿಸಿರುವ ಪೊಲೀಸರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಹೆದ್ದಾರಿಯ ಎಂಟ್ರಿ-ಎಕ್ಸಿಟ್ಗಳಲ್ಲಿ ಬೀಡು ಬಿಟ್ಟಿದ್ದರು. ಹೆದ್ದಾರಿ ಪ್ರವೇಶಿಸಲು ಮುಂದಾದ ಬೈಕ್, ರಿಕ್ಷಾ ಹಾಗೂ ಟ್ರ್ಯಾಕ್ಟರ್ ಚಾಲಕರಿಗೆ ನಿಯಮ ಉಲ್ಲಂಘನೆ ಮಾಡದಂತೆ ಅರಿವು ಮೂಡಿಸಿ, ವಾಹನಗಳನ್ನು ಸರ್ವಿಸ್ ರಸ್ತೆಗೆ ಡೈವರ್ಚ್ ಮಾಡುವ ಕೆಲಸ ಮಾಡಿದರು. ಪ್ರವೇಶ ನಿಷೇಧ ಕುರಿತು ಕೆಲವರಿಗೆ ಮಾಹಿತಿ ಕೊರತೆ ಇತ್ತು. ಹೀಗಾಗಿ, ಮೊದಲ ದಿನ ಬೆಳಗ್ಗೆ 8 ರಿಂದ 11ಗಂಟೆವರೆಗೆ ಹೆದ್ದಾರಿ ಪ್ರವೇಶಿಸುವವರಿಗೆ ಎಚ್ಚರಿಕೆ ನೀಡಿ, ಸವೀರ್ಸ್ ರಸ್ತೆಯಲ್ಲಿ ಕಳುಹಿಸುತ್ತಿದ್ದರು. ಅದನ್ನು ಮೀರಿಯೂ ಕೆಲವರು ಹೆದ್ದಾರಿ ಪ್ರವೇಶಿಸಿದರೆ ಅಂತವರಿಗೆ ನಿರ್ಗಮನ ಸ್ಥಳಗಳಲ್ಲಿ 500 ರು.ದಂಡ ಹಾಕಲಾಯಿತು.
Bengaluru-Mysuru Expressway ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ರೆ ಡಿ.ಎಲ್ ಕ್ಯಾನ್ಸಲ್: ಎಡಿಜಿಪಿ ಅಲೋಕ್
ಹೆದ್ದಾರಿಯಲ್ಲಿ ಮಧ್ಯಾಹ್ನದ ನಂತರ ಬೈಕ್ ಸಂಚಾರ ಬಹುತೇಕ ವಿರಳವಾಗಿತ್ತು. ಬೈಕ್, ಆಟೋ, ಟ್ರ್ಯಾಕ್ಟರ್ಗಳು ಸರ್ವಿಸ್ ರಸ್ತೆಯಲ್ಲಿಯೇ ಸಂಚಾರ ಮಾಡಿದವು. ಇದರಿಂದಾಗಿ ಸವೀರ್ಸ್ ರಸ್ತೆಯ ಕೆಲವೆಡೆ ಟ್ರಾಫಿಕ್ ಜಾಮ್ ಉಂಟಾಯಿತು.
ಇದೇ ವೇಳೆ, ಪ್ರಾಧಿಕಾರದ ಕ್ರಮಕ್ಕೆ ರೈತರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈವೇಗಾಗಿ ನಮ್ಮ ಜಮೀನು ಕೊಟ್ಟಿದ್ದೇವೆ. ನಮಗೂ ಇಂತಹ ರಸ್ತೆಯಲ್ಲಿ ಓಡಾಡಬೇಕು ಅಂತ ಆಸೆ ಇರುತ್ತೆ. ನಮ್ಮ ಹೆಂಡತಿ-ಮಕ್ಕಳು ಈ ರಸ್ತೆಯಲ್ಲಿ ಬೈಕ್ನಲ್ಲಿ ಕರೆದುಕೊಂಡು ಹೋಗಿ ಅಂದ್ರೆ ನಾವು ಏನು ಮಾಡೋದು?. ನಮಗೆ ಕಾರು ಕೊಳ್ಳಲು ಸಾಧ್ಯವಿಲ್ಲ ಎಂದು ಸ್ಥಳೀಯ ಬೈಕ್ ಸವಾರರೊಬ್ಬರು ಅಳಲು ತೋಡಿಕೊಂಡರು.
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಮೊದಲ ಫೈನ್ ಕಟ್ಟಿದ ಬೈಕ್ ಸವಾರ ಇವರೇ..?
ಸರ್ವಿಸ್ ರಸ್ತೆಯಲ್ಲಿ ಮೋರಿ ನೀರು ರಸ್ತೆಗೆ ಹರಿಯುತ್ತಿದ್ದು, ಮಣ್ಣು ಕೂತು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಸರ್ವಿಸ್ ರಸ್ತೆಯ ಕಾಮಗಾರಿ ಇನ್ನೂ ಅಲ್ಲಲ್ಲಿ ಬಾಕಿಯಿದೆ ಎಂದು ಕಿಡಿ ಕಾರಿದರು.