ಕೆ.ಆರ್.ಪುರಂ ಮೆಟ್ರೋ ನಿಲ್ದಾಣದಲ್ಲಿ ಮರೆತುಹೋದ ಟೂಲ್ ಕಿಟ್ ಬಾಕ್ಸ್ ಬಾಂಬ್ ಭೀತಿ ಸೃಷ್ಟಿಸಿತ್ತು. ಎಚ್.ಎ.ಎಲ್ ಉದ್ಯೋಗಿ ಮಂಜುನಾಥ್ ಜಾದವ್ ಅವರದ್ದಾಗಿದ್ದ ಬಾಕ್ಸ್ ಅನ್ನು ಬಾಂಬ್ ನಿಷ್ಕ್ರಿಯ ದಳ ಪರಿಶೀಲಿಸಿ ಸುರಕ್ಷಿತ ಎಂದು ಖಚಿತಪಡಿಸಿತು. ಪೊಲೀಸರು ಮಂಜುನಾಥ್‌ರಿಗೆ ಎಚ್ಚರಿಕೆ ನೀಡಿದರು.

ಬೆಂಗಳೂರು (ಆ.06): ನಗರದ ಕೆ.ಆರ್.ಪುರಂ ಮೆಟ್ರೋ ನಿಲ್ದಾಣದಲ್ಲಿ ಬುಧವಾರ ಮಧ್ಯಾಹ್ನ ಅನುಮಾನಾಸ್ಪದ ಬಾಕ್ಸ್ ಪತ್ತೆಯಾಗಿದ್ದು, ಕೆಲಕಾಲ ಬಾಂಬ್ ಭೀತಿ ಸೃಷ್ಟಿಯಾಗಿತ್ತು. ಬಳಿಕ ಅದು ಎಚ್‌ಎಎಲ್ ಉದ್ಯೋಗಿಯೊಬ್ಬರು ಮರೆತುಹೋಗಿದ್ದ ಟೂಲ್ ಕಿಟ್ ಬಾಕ್ಸ್ ಎಂಬುದು ತಿಳಿದುಬಂದಿದ್ದು, ಸಾರ್ವಜನಿಕರು ಮತ್ತು ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆಯ ವಿವರ:

ಹರಿಯಾಣದಲ್ಲಿ ತರಬೇತಿ ಮುಗಿಸಿ ಇಂದು ಮಧ್ಯಾಹ್ನ ಬೆಂಗಳೂರಿನ ಕೆ.ಆರ್.ಪುರಂ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಎಚ್‌ಎಎಲ್‌ನ ಏರ್‌ಕ್ರಾಫ್ಟ್ ವಿಭಾಗದ ಉದ್ಯೋಗಿ ಮಂಜುನಾಥ್ ಜಾದವ್, ಬಳಿಕ ಮೆಟ್ರೋ ನಿಲ್ದಾಣಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಟೂಲ್ ಕಿಟ್ ಬಾಕ್ಸ್ ಅನ್ನು ನಿಲ್ದಾಣದಲ್ಲಿಯೇ ಮರೆತು ಬಿಟ್ಟು ಹೋಗಿದ್ದಾರೆ. ಅನಾಥವಾಗಿ ಬಿದ್ದಿದ್ದ ಬಾಕ್ಸ್ ಅನ್ನು ಗಮನಿಸಿದ ಸಾರ್ವಜನಿಕರು, ಅದರಲ್ಲಿ ಬಾಂಬ್ ಇರಬಹುದೆಂದು ಶಂಕಿಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಮಹದೇವಪುರ ಪೊಲೀಸರು, ಮುಂಜಾಗ್ರತಾ ಕ್ರಮವಾಗಿ ಸ್ಥಳವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು.

ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ:

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ (ಬಾಂಬ್ ಸ್ಕ್ವಾಡ್) ಮತ್ತು ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಅತ್ಯಂತ ಎಚ್ಚರಿಕೆಯಿಂದ ಬಾಕ್ಸ್ ಅನ್ನು ಪರಿಶೀಲಿಸಿದಾಗ, ಅದರಲ್ಲಿ ಯಾವುದೇ ಸ್ಫೋಟಕ ವಸ್ತುಗಳಿಲ್ಲ, ಬದಲಾಗಿ ಅದು ಕೇವಲ ಟೂಲ್ ಕಿಟ್ ಬಾಕ್ಸ್ ಎಂಬುದು ದೃಢಪಟ್ಟಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ಮತ್ತು ಪೊಲೀಸರು ನಿಟ್ಟುಸಿರು ಬಿಟ್ಟರು. ಕೆಲಕಾಲ ಮೆಟ್ರೋ ನಿಲ್ದಾಣದ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಉದ್ಯೋಗಿಗೆ ಪೊಲೀಸರಿಂದ ಕ್ಲಾಸ್:

ಈ ನಡುವೆ, ತಾನು ಮರೆತುಹೋಗಿದ್ದ ಟೂಲ್ ಕಿಟ್ ಬಾಕ್ಸ್ ಅನ್ನು ತೆಗೆದುಕೊಳ್ಳಲು ಮಂಜುನಾಥ್ ಜಾದವ್ ಮೆಟ್ರೋ ನಿಲ್ದಾಣಕ್ಕೆ ವಾಪಸ್ ಬಂದಿದ್ದಾರೆ. ಆಗ ಪೊಲೀಸರು ಅವರನ್ನು ವಿಚಾರಣೆ ನಡೆಸಿ, ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಬೇಜವಾಬ್ದಾರಿತನದಿಂದ ವರ್ತಿಸಬಾರದೆಂದು ಎಚ್ಚರಿಕೆ ನೀಡಿ, ಅವರಿಗೆ ತಿಳಿಹೇಳಿದ್ದಾರೆ. ತನ್ನ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದ ಮಂಜುನಾಥ್, 'ನನ್ನದೇ ಟೂಲ್ ಕಿಟ್ ಅನ್ನು ಮರೆತು ಬಿಟ್ಟು ಹೋಗಿದ್ದೆ' ಎಂದು ಹೇಳಿ ಬಾಕ್ಸ್ ಅನ್ನು ತೆಗೆದುಕೊಂಡು ತೆರಳಿದರು.

ಈ ಘಟನೆಯಿಂದಾಗಿ ಕೆ.ಆರ್.ಪುರಂ ಮೆಟ್ರೋ ನಿಲ್ದಾಣದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಯಾವುದೇ ಅಹಿತಕರ ಘಟನೆ ನಡೆಯದೆ, ಪರಿಸ್ಥಿತಿ ಸುಖಾಂತ್ಯಗೊಂಡಿದೆ. ಬಾಂಬ್ ಇದೆ ಎಂಬ ವದಂತಿಗೆ ತೆರೆಬಿದ್ದಿದ್ದು, ಸಾರ್ವಜನಿಕರು ನೆಮ್ಮದಿಯಿಂದ ಪ್ರಯಾಣ ಬೆಳೆಸಿದರು.