ಬೈಯ್ಯಪ್ಪನಹಳ್ಳಿ ಬಳಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣವಾಗಿರುವ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ನಲ್ಲಿ ಜೂನ್ 6ರಿಂದ ರೈಲು ಸಂಚಾರ ಆರಂಭಗೊಳ್ಳುತ್ತಿದ
ಬೆಂಗಳೂರು (ಜೂ. 06): ಬೈಯ್ಯಪ್ಪನಹಳ್ಳಿ ಬಳಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣವಾಗಿರುವ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ನಲ್ಲಿ ಇಂದಿನಿಂದ (ಜೂ.6) ರೈಲು ಸಂಚಾರ ಆರಂಭಗೊಳ್ಳುತ್ತಿದೆ. ಸೋಮವಾರ ಸಂಜೆ 7ಕ್ಕೆ ಹೊರಡುವ ಬಾಣಸವಾಡಿ-ಎರ್ನಾಕುಲಂ ಸೂಪರ್ಫಾಸ್ಟ್ ಎಕ್ಸ್ಪ್ರೆಸ್(ರೈಲು ಸಂಖ್ಯೆ 12684) ರೈಲು ನೂತನ ಟರ್ಮಿನಲ್ನಿಂದ ಕಾರ್ಯಾಚರಣೆ ನಡೆಸುವ ಮೊದಲ ರೈಲಾಗಿದೆ.
ಬಳಿಕ ವೇಳಾಪಟ್ಟಿಯಂತೆ ಟರ್ಮಿನಲ್ನಲ್ಲಿ ವಾರದಲ್ಲಿ ಮೂರು ರೈಲುಗಳು ಸಂಚರಿಸಲಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟುರೈಲು ಸೇವೆಯನ್ನು ಆರಂಭಿಸಲಾಗುವುದು ಎಂದು ನೈಋುತ್ಯ ರೈಲ್ವೆ ತಿಳಿಸಿದೆ. ರೈಲು ಓಡಾಟ ಆರಂಭವಾಗುತ್ತಿರುವ ಹಿನ್ನೆಲೆ ಸೋಮವಾರದಿಂದಲೇ ಟಿಕೆಟ್ ಕೌಂಟರ್, ಲಿಫ್ಟ್, ಆಹಾರ ಮಳಿಗೆಗಳು, ಪಾರ್ಕಿಂಗ್ ಸೇರಿದಂತೆ ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳು ಲಭ್ಯವಾಗಲಿವೆ. ಜತೆಗೆ ಬಿಎಂಟಿಸಿ ಬಸ್ ಸೇವೆ ಒದಗಿಸುತ್ತಿದೆ.
ಹೊಸ ಟರ್ಮಿನಲ್ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ 1.5 ಕಿ.ಮೀ, ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ 1.2 ಕಿ.ಮೀ ದೂರವಿದ್ದು, ಮೆಟ್ರೋ ನಿಲ್ದಾಣ, ಮೆಜೆಸ್ಟಿಕ್, ಕೆಆರ್ ಪುರದಿಂದ ಬಿಎಂಟಿಸಿ ಬಸ್ ಸೇವೆ ಕಲ್ಪಿಸಲಾಗಿದೆ.
ಉದ್ಘಾಟನೆಯಾಗದೇ ಚಾಲನೆ: ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಮತ್ತು ಯಶವಂತಪುರ ಜಂಕ್ಷನ್ ಮೇಲಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಬೈಯಪ್ಪನಹಳ್ಳಿ ಮತ್ತು ಬಾಣಸವಾಡಿ ರೈಲು ನಿಲ್ದಾಣಗಳ ನಡುವೆ ಈ ನೂತನ ರೈಲ್ವೆ ಟರ್ಮಿನಲ್ ಸ್ಥಾಪಿಸಲಾಗಿದೆ.
2021 ಆರಂಭದಲ್ಲಿಯೇ ನೂತನ ಟರ್ಮಿನಲ್ ನಿರ್ಮಾಣ ಪೂರ್ಣಗೊಂಡಿದ್ದರೂ ಕಾರಣಾಂತರಗಳಿಂದ ಉದ್ಘಾಟನೆಯಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಔಪಚಾರಿಕಾ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಿರುವ ನೈಋುತ್ಯ ರೈಲ್ವೆ ಇಲಾಖೆ ಸೋಮವಾರದಿಂದ ರೈಲು ಸಂಚಾರವನ್ನು ಪ್ರಾರಂಭಿಸುತ್ತಿದೆ.
ಹೀಗಿದೆ ವೇಳಾಪಟ್ಟಿ:
- ಜೂ.6 ಸಂಜೆ 7ಕ್ಕೆ ಬಾಣಸವಾಡಿ-ಎರ್ನಾಕುಲಂ ಎಕ್ಸ್ಪ್ರೆಸ್ (ನಿರ್ಗಮನ)
- ಜೂನ್ 8 ಬೆಳಗ್ಗೆ 3.55ಕ್ಕೆ ಎರ್ನಾಕುಲಂ-ಬಾಣಸವಾಡಿ ಎಕ್ಸ್ಪ್ರೆಸ್ (ಆಗಮನ)
- ಜೂನ್ 10 ಸಂಜೆ 7ಕ್ಕೆ ಕೊಚ್ಚಿವೆಲ್ಲಿ ಎಕ್ಸ್ಪ್ರೆಸ್ (ನಿರ್ಗಮನ)
- ಜೂನ್ 12 ಮಧ್ಯಾಹ್ನ 1.50ಕ್ಕೆ ಪಾಟ್ನಾ ಎಕ್ಸ್ಪ್ರೆಸ್ (ನಿರ್ಗಮನ)
ನಿಲ್ದಾಣದ ಪ್ರಮುಖ ವೈಶಿಷ್ಟ್ಯಗಳು:
- ರೂ.300 ಕೋಟಿ ವೆಚ್ಚ. 4,200 ಚ.ಮೀ ವಿಸ್ತೀರ್ಣ
- ಪ್ರತಿನಿತ್ಯ 50,000 ಪ್ರಯಾಣಿಕರು ಓಡಾಟ ನಡೆಸುವ ಸಾಮರ್ಥ್ಯ
- 7 ಫ್ಲಾಟ್ ಫಾರಂ ರಚನೆ, ದಿನಕ್ಕೆ 50 ರೈಲುಗಳು ಓಡಾಟ ನಡೆಸಬಹುದು
- ಭಾರತದಲ್ಲಿನ ಮೊದಲ ಕೇಂದ್ರಿಕೃತ ಹವಾನಿಯಂತ್ರಿತ ರೈಲ್ವೆ ಟರ್ಮಿನಲ…, ಅತ್ಯಾಧುನಿಕ ಸೌಲಭ್ಯ
- ಕೆಂಪೇಗೌಡ ವಿಮಾನ ನಿಲ್ದಾಣ ಮಾದರಿಯ ಹೊರವಿನ್ಯಾಸ
- 250 ನಾಲ್ಕು ಚಕ್ರಗಳ ವಾಹನ ಮತ್ತು 900 ದ್ವಿಚಕ್ರ ವಾಹನಗಳು ನಿಲುಗಡೆ ಸಾಮರ್ಥ್ಯ
- ದೇಶದ ಮೂರನೇ ವಿಶ್ವ ದರ್ಜೆಯ ಟರ್ಮಿನಲ್ ಎಂಬ ಹೆಗ್ಗಳಿಕೆ
- ಸಂಗೊಳ್ಳಿ ರಾಯಣ್ಣ, ಯಶವಂತಪುರ ಟರ್ಮಿನಲ್ ಬಳಿಕ ನಗರದ ಮೂರನೇ ರೈಲ್ವೆ ಟರ್ಮಿನಲ್
- ಮಳೆ ನೀರು ಕೊಯ್ಲು ಮತ್ತು ತ್ಯಾಜ್ಯನೀರು ಸಂಸ್ಕರಣಾ ಘಟಕ ಅಳವಡಿಕೆ
