ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಆಟೋ ಗ್ಯಾಸ್ ಕೊರತೆ ತೀವ್ರಗೊಂಡಿದೆ. ಗ್ಯಾಸ್‌ಗಾಗಿ ಚಾಲಕರು ಗಂಟೆಗಟ್ಟಲೆ ಕಾಯುತ್ತಿದ್ದು, ಈ ಸಂಕಷ್ಟದಿಂದಾಗಿ ಆಟೋ ಪ್ರಯಾಣ ದರವನ್ನು ಶೇ.10ರಷ್ಟು ಹೆಚ್ಚಿಸಿ ಗ್ರಾಹಕರಲ್ಲಿ ಮನವಿ ಮಾಡುತ್ತಿದ್ದಾರೆ.

 ಬೆಂಗಳೂರು (ಏ.4) ಮಧ್ಯಪ್ರಾಚ್ಯ ಯುದ್ಧದಿಂದಾಗಿ ಪೂರೈಕೆ ವ್ಯತ್ಯಯ ಉಂಟಾಗಿ ಆಟೋ ರಿಕ್ಷಾಗಳ ಗ್ಯಾಸ್‌ಗೆ ತೀವ್ರ ಸಮಸ್ಯೆ ಮುಂದುವರಿದಿದೆ. ಗ್ಯಾಸ್‌ ಬಂಕ್‌ಗಳ ಮುಂದೆ ಆಟೋಗಳ ಸರದಿ ಸಾಲು ಇನ್ನೂ ಮುಂದುವರಿದಿದೆ.

ಗ್ಯಾಸ್‌ ಲಭ್ಯವಿರುವ ಬಂಕ್‌ಗಳಲ್ಲಿ ಆಟೋಗಳಿಗೆ ಗ್ಯಾಸ್‌ ಮಿತಿ ಹೇರಲಾಗಿದೆ. ಗ್ಯಾಸ್‌ ಸಿಗದೆ ಬದುಕು ನಡೆಸುವುದು ದುಸ್ತರ ಎಂದು ಆಟೋ ಚಾಲಕರು ಅಳಲು ತೊಡಿಕೊಂಡಿದ್ದಾರೆ. ಈ ನಡುವೆ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರವನ್ನು ಶೇ.10ರಷ್ಟು ಹೆಚ್ಚಿಸಿರುವ ಆಟೋ ಚಾಲಕರು, ಹೆಚ್ಚುವರಿ ಹಣವನ್ನು ನೀಡುವಂತೆ ಗ್ರಾಹಕರಲ್ಲಿ ಮನವಿ ಮಾಡುತ್ತಿದ್ದಾರೆ.

ಬೆಂಗಳೂರು, ಮೈಸೂರು, ತುಮಕೂರು, ರಾಯಚೂರು, ರಾಮನಗರ ಸೇರಿದಂತೆ ಹಲವು ನಗರಗಳಲ್ಲಿ ಆಟೋ ಗ್ಯಾಸ್‌ ಸಿಗುತ್ತಿಲ್ಲ. ಗ್ಯಾಸ್‌ಗಾಗಿ ಆಟೋಗಳು ಬಂಕ್‌ಗಳ ಮುಂದೆ ಕಿಲೋ ಮೀಟರ್‌ಗಟ್ಟಲೇ ನಿಲ್ಲುತ್ತಿವೆ.

ಆಟೋಗಳಿಗೆ ಗ್ಯಾಸ್‌ ತುಂಬಿಸಿಕೊಳ್ಳಲು ಚಾಲಕರು ನಾಲ್ಕೈದು ತಾಸು ಕಾಯುವಂತಾಗಿದೆ. ಅರ್ಧಕ್ಕರ್ಧ ಆಟೋ ಗ್ಯಾಸ್‌ ಬಂಕ್‌ಗಳು ‘ನೋ ಸ್ಟಾಕ್‌’ ಬೋರ್ಡ್‌ ಹಾಕಿವೆ. ತುಮಕೂರಿನ 8 ಬಂಕ್‌ಗಳಲ್ಲಿ 6 ಬಂಕ್‌ಗಳು ಬಾಗಿಲು ಮುಚ್ಚಿವೆ. ಇನ್ನು ರಾಮನಗರದಲ್ಲಿ ಒಂದು ಬಂಕ್‌ 2 ದಿನದಿಂದ ಬಂದ್‌ ಆಗಿದೆ. ಮೈಸೂರಿನಲ್ಲಿ ಬಹುತೇಕ ಬಂಕ್‌ಗಳು ಬಂದ್‌ ಆಗಿವೆ. ಕೆಲ ಆಟೋ ಚಾಲಕರು ಬಂಕ್‌ಗಳಿಗೆ ಬಂದು ಗ್ಯಾಸ್ ಸಿಗದೆ, ಆಟೋವನ್ನೂ ವಾಪಸ್‌ ತೆಗೆದುಕೊಂಡು ಹೋಗಲು ಆಗದೆ ಬಂಕ್‌ಗಳ ಬಳಿಯೇ ಆಟೋ ಪಾರ್ಕ್‌ ಮಾಡಿ ಹೋಗುತ್ತಿದ್ದಾರೆ.

ಆಟೋ ದರ ಏರಿಕೆ:

ಬೆಂಗಳೂರಿನಲ್ಲಿ ಆಟೋ ಗ್ಯಾಸ್‌ ಸಿಗುತ್ತಿಲ್ಲ. ಇರುವ ಬಂಕ್‌ಗಳಲ್ಲಿ ಪ್ರತಿ ಆಟೋಗೆ ₹400 ಮೌಲ್ಯದ ಗ್ಯಾಸ್ ಮಾತ್ರ ತುಂಬಿಸುವುದಾಗಿ ಬಂಕ್‌ಗಳಲ್ಲಿ ಬ್ಯಾನರ್‌ ಅಳವಡಿಸಲಾಗಿದ್ದು, ಚಾಲಕರು ಸಹಕರಿಸುವಂತೆ ಮನವಿ ಮಾಡಲಾಗಿದೆ. ಇನ್ನು ಗ್ಯಾಸ್‌ ದೊರೆಯದೆ ಸಮಸ್ಯೆ ಆಗಿರುವುದು ಹಾಗೂ ಸಿಗುವ ಗ್ಯಾಸ್‌ನ ದರ ಏರಿಕೆ ಆಗಿರುವುದರಿಂದ ಆಟೋ ಚಾಲಕರು ಆಟೋ ಪ್ರಯಾಣಿಕ ದರವನ್ನು ಏರಿಸಿದ್ದಾರೆ. ಶೇಕಡ 10 ಹೆಚ್ಚುವರಿ ಹಣ ನೀಡುವಂತೆ ಚಾಲಕರು ಆಟೋಗಳಲ್ಲಿ ಬೋರ್ಡ್‌ ಹಾಕಿಕೊಂಡಿದ್ದಾರೆ. ಇನ್ನು ಕೆಲವರು ವಿಷಯವನ್ನು ನೇರವಾಗಿ ಗ್ರಾಹಕರಿಗೆ ಹೇಳಿ ಹಣ ಪಡೆಯುತ್ತಿದ್ದಾರೆ.

ಗ್ಯಾಸ್‌ ಸಿಗದೆ ಬದುಕು ನಡೆಸುವುದು ಕಷ್ಟ. ಗ್ಯಾಸ್‌ ಇಲ್ಲದೆ ಆಟೋ ಓಡಿಸಲು ಆಗುತ್ತಿಲ್ಲ. ಹಣ ಇಲ್ಲದೆ ಬದುಕು ಸಾಗಿಸಲು ಆಗುತ್ತಿಲ್ಲ. ಬೇರೆ ಕೆಲಸ ನೋಡಿಕೊಳ್ಳುವುದೇ ಸೂಕ್ತ ಎಂದು ಆಟೋ ಚಾಲಕರು ಅಳಲು ತೋಡಿಕೊಂಡಿದ್ದಾರೆ.