ಡಿಜಿಟಲ್ ಇಂಡಿಯಾಗೆ ಒತ್ತುನೀಡಿದ ಬಿಜೆಪಿಯನ್ನು ಪಿ ಚಿದಂಬರಂ ಸಂಸತ್ತಿನಲ್ಲಿ ಅಣಕಿಸಿದ್ದರು.ಆದರೆ ಬೆಂಗಳೂರಿನ ಆಟೋ ಚಾಲಕನ ಸ್ಮಾರ್ಟ್‌ವಾಚ್ ಕ್ಯೂಆರ್ ಕೋಡ್ ಪಾವತಿ ಫೋಟೋವನ್ನು ಪೋಸ್ಟ್ ಮಾಡಿದ ಬಿಜೆಪಿ, ತಿರಗೇಟು ನೀಡಿದೆ. 

ಬೆಂಗಳೂರು(ಸೆ.21) ಭಾರತದ ಡಿಜಿಟಲ್ ಇಂಡಿಯಾ ಯೋಜನೆ ಮಹತ್ತರ ಬದಲಾವಣೆಗೆ ಕಾರಣವಾಗಿದೆ. ಆದರೆ ರಾಜಕೀಯ ಹಗ್ಗಜಗ್ಗಾಟಕ್ಕೂ ಇದು ಕಾರಣವಾಗಿದೆ. ಡಿಮಾನಿಟೈಸೇಶನ್, ಡಿಜಿಟಲ್ ಇಂಡಿಯಾವನ್ನು ಸಂಸತ್ತಿನಲ್ಲಿ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅಣಕಿಸಿದ್ದರು. 5 ರೂಪಾಯಿ, 7 ರೂಪಾಯಿಗೆ ತರಕಾರಿ ಖರೀದಿಸಲು ಬೀದಿ ಬದಿ ವ್ಯಾಪಾರಿ ಬಳಿಕ ಪಿಒಎಸ್ ಸ್ವೈಪ್ ಮಶೀನ್ ಇದೆಯಾ, ಇಂಟರ್ನೆಟ್ ಇದೆಯಾ? ಇದೆಲ್ಲಾ ಭಾರತದಲ್ಲಿ ಸಾಧ್ಯ ಎಂದುಕೊಂಡಿದ್ದೀರಾ ಎಂದು ಚಿದಂಬರಂ ನಕ್ಕಿದ್ದರು. ಕಾಂಗ್ರೆಸ್ ಮೇಜು ತಟ್ಟಿ ಬೆಂಬಲ ನೀಡಿತ್ತು. ಇದಾದ ಬಳಿಕ ಹಲವು ಬಾರಿ ಡಿಜಿಟಲ್ ಇಂಡಿಯಾ ಕ್ರಾಂತಿಯನ್ನು ಪಟ್ಟಿ ಮಾಡಿರುವ ಬಿಜೆಪಿ, ಪದೇ ಪದೇ ಕಾಂಗ್ರೆಸ್ ಕಾಲೆಳೆದಿದೆ. ಇದೀಗ ಬೆಂಗಳೂರಿನ ಆಟೋ ಚಾಲಕನ ಫೋಟೋವನ್ನು ಪೋಸ್ಟ್ ಮಾಡಿರುವ ಕರ್ನಾಟಕ ಬಿಜೆಪಿ ಇದನ್ನು ಒಮ್ಮೆ ನೋಡಲು ಸೂಚಿಸಿದೆ. ಆಟೋ ಚಾಲಕ ಬಾಡಿಗೆ ಪಾವತಿಗೆ ಯುಪಿಐ ಕ್ಯೂಆರ್ ಕೋಡ್ ಆಟೋದಲ್ಲಿ ಅಂಟಿಸಿಲ್ಲ, ಬದಲಾಗಿ ಈ ಚಾಲಕನ ಸ್ಮಾರ್ಟ್‌ವಾಚ್‌ನಲ್ಲಿ ಯುಪಿಐ ಕ್ಯೂಆರ್ ಕೋಡ್ ತೋರಿಸಿ ಪಾವತಿ ಮಾಡಿಸಿಕೊಳ್ಳುತ್ತಾನೆ. ಈ ಫೋಟೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.

Add Asianetnews Kannada as a Preferred SourcegooglePreferred

ಬೆಂಗಳೂರು ಐಟಿ ಸಿಟಿ. ಇಲ್ಲಿ ತಂತ್ರಜ್ಞಾನ, ತಾಂತ್ರಿಕ ವಿಚಾರಗಳಲ್ಲಿ ಇತರ ಎಲ್ಲಾ ನಗರಗಳಿಗಿಂತ ಮುಂದಿದೆ. ಇದು ಹಲವು ಬಾರಿ ಸಾಬೀತಾಗಿದೆ. ಈ ಪೈಕಿ ಇದೀಗ ಬೆಂಗಳೂರು ಆಟೋ ಚಾಲಕನ ಸ್ಮಾರ್ಟ್‌ವಾಚ್‌ನಲ್ಲಿ ಯುಪಿಐ ಕ್ಯೂಆರ್ ಕೋಡ್ ಇದೀಗ ಭಾರಿ ಸದ್ದು ಮಾಡುತ್ತಿದೆ. 

ರಾಮ ಮಂದಿರದಿಂದ ಡಿಜಿಟಲ್ ರೂಪಾಂತರಗೊಂಡ ಆಯೋಧ್ಯೆ, QR ಕೋಡ್ ಪಾವತಿ ದುಪ್ಪಟ್ಟು!

ಬೆಂಗಳೂರಿನ ಆಟೋ ಚಾಲಕ ಹೈಟೆಕ್ ತಂತ್ರಜ್ಞಾನ ಬಳಸಿಕೊಂಡಿದ್ದಾನೆ. ಯುಪಿಐ ಪಾವತಿಗೆ ಸಾಮಾನ್ಯವಾಗಿ ಆಟೋ ಚಾಲಕರು ತಮ್ಮ ಆಟೋದಲ್ಲಿ ಕ್ಯೂಆರ್ ಕೋಡ್ ಅಂಟಿಸಿರುತ್ತಾರೆ. ಅಥವಾ ಕ್ಯೂಆರ್ ಕೋಡ್ ಫೋಟೋವನ್ನು ಲ್ಯಾಮಿನೇಷನ್ ಮಾಡಿಸಿಕೊಂಡು, ಪ್ಲಾಸ್ಟಿಕ್ ಒಳಗೆ ಇಟ್ಟುಕೊಂಡಿರುತ್ತಾರೆ. ಆದರೆ ಈ ಆಟೋ ಚಾಲಕ ಹೀಗೆ ಮಾಡಿಲ್ಲ. ತಂತ್ರಜ್ಞಾನವನ್ನು ಮತ್ತಷ್ಟು ಸದುಪಯೋಗ ಪಡಿಸಿಕೊಂಡಿದ್ದಾನೆ.

ತನ್ನಲ್ಲಿರುವ ಸ್ಮಾರ್ಟ್‌ವಾಚ್‌ನಲ್ಲಿ ತನ್ನ ಯುಪಿಐ ಕ್ಯೂಆರ್ ಕೋಡ್ ಬಳಸಿ ಪಾವತಿ ಮಾಡಿಸಿಕೊಳ್ಳುತ್ತಾನೆ. ಕ್ಯೂಆರ್ ಕೋಡ್ ಮೂಲಕ ಪಾವತಿ ಮಾಡುವ ಗ್ರಾಹಕರಿಗೆ ಸ್ಮಾರ್ಟ್‌ವಾಚ್ ಮೂಲಕ ಕೋಡ್ ತೋರಿಸಿ ಪಾವತಿಗೆ ಸುಲಭ ದಾರಿ ಅನುಸರಿಸಿದ್ದಾನೆ. ಈ ಫೋಟೋವನ್ನು ಬಿಜೆಪಿ ಕರ್ನಾಟಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಬಳಿಕ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹಾಗೂ ಇಂಡಿಯಾ ಒಕ್ಕೂಟವನ್ನು ತಿವಿದಿದೆ.

ಪಿ ಚಿದಂಬರಂ ಅಣಕಿಸುವಾಗ ಈ ಬದಲಾವಣೆ ಬಗ್ಗೆ ಯೋಚನೆ ಕೂಡ ಮಾಡಿರಲಿಲ್ಲ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ. ನಮ್ಮ ಬೆಂಗಳೂರಿನ ಆಟೋ ಚಾಲಕರು ಇಂಡಿಯಾ ಒಕ್ಕೂಟ ನಾಯಕರಿಂದ ಸ್ಮಾರ್ಟ್ ಆಗಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

View post on Instagram

ಬೆಂಗಳೂರಿನ ಆಟೋ ಚಾಲಕರು ಹಲವು ಸ್ಮಾರ್ಟ್ ಮಾರ್ಗಗಳನ್ನು ತ್ವರಿತವಾಗಿ ಬಳಸಿ ದೇಶಾದ್ಯಂತ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಕ್ರಿಪ್ಟೋ ಕರೆನ್ಸಿ ಭರಾಟೆ ಜೋರಾಗಿದ್ದ ವೇಳೆ ಬೆಂಗಳೂರಿನ ಆಟೋ ಚಾಲಕನೊಬ್ಬ ಕ್ರಿಪ್ಟೊಕರೆನ್ಸಿ ಸ್ವೀಕರಿಸಲಾಗುತ್ತದೆ ಎಂದು ಬೋರ್ಡ್ ಅಂಟಿಸಿದ್ದ. ಕ್ರಿಪ್ಟೋ ಕರೆನ್ಸಿ ಬಗ್ಗೆ ಜನರು ತಿಳಿದುಕೊಳ್ಳುವ ವೇಳೆ ಆಟೋ ಚಾಲಕ ಬಾಡಿಗೆ ಪಾವತಿ ರೂಪದಲ್ಲಿ ಕ್ರಿಪ್ಟೋಕರೆನ್ಸಿ ಸ್ವೀಕರಿಸಲು ಮುಂದಾಗಿದ್ದ. ಈ ರೀತಿಯ ಹಲವು ತಂತ್ರಜ್ಞಾನ ಬಳಕೆಯಲ್ಲಿ ಬೆಂಗಳೂರು ಆಟೋ ಚಾಲಕರು ಎಲ್ಲರಿಗಿಂತ ಮುಂದಿದ್ದಾರೆ ಅನ್ನೋದು ಸಾಬೀತು ಮಾಡಿದ್ದಾರೆ.

ಹಲವರು ಆಟೋ ಚಾಲಕನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ದೇಶವನ್ನು ನೇರವಾಗಿ 2060ಕ್ಕೆ ಕೊಂಡೊಯ್ದಿದ್ದಾರೆ. ಇದು ಬೆಂಕಿ ಬಿರುಗಾಳಿ ಎಂದು ಕೆಲವರು ಕಮೆಂಟ್ ಮಾಡಿದ್ದರೆ. ಇತ್ತ ಕಾಂಗ್ರೆಸ್ ಬೆಂಬಲಿಗರು ಇಂದಿರಾ ಗಾಂಧಿ, ರಾಜೀವ್ ಗಾಂಧಿಯ ತಂತ್ರಜ್ಞಾನ ಕೊಡುಗೆಯಿಂದ ಇದು ಸಾಧ್ಯವಾಗಿದೆ ಎಂದಿದ್ದಾರೆ

ಗೂಗಲ್ ಪೇ, ಫೋನ್‌ಪೇ ವಿರುದ್ಧ ಸ್ಪರ್ಧೆಗೆ ಭಾರತದ ಸಣ್ಣ ಸಣ್ಣ ಯುಪಿಐ ಆ್ಯಪ್ ರೆಡಿ, NPCI ಸೂಚನೆ!