ಅನಂತ್ ಕುಮಾರ್ ಹೆಗಡೆ ಹೆಂಡ್ತಿ ಯಾವ ಧರ್ಮದವರು?
ದಿನೇಶ್ ಗುಂಡೂರಾವ್ ಪತ್ನಿಯ ಧರ್ಮದ ಬಗ್ಗೆ ಮಾತನಾಡಿದ್ದ ಬಿಜೆಪಿ ಮುಖಂಡ ಅನಂತ್ ಕುಮಾರ್ ಹೆಗಡೆ ವಿರುದ್ಧ ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: 'ದಿನೇಶ್ ಗುಂಡೂರಾವ್ ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡುವ ಅನಂತಕುಮಾರ್ ಹೆಗಡೆ ಪತ್ನಿ ಯಾವ ಧರ್ವಕ್ಕೆ ಸೇರಿದವರು? ಯಾವ ಜಾತಿಗೆ ಸೇರಿದವರು ಎನ್ನುವುದರ ಬಗ್ಗೆ ಡಿಎನ್ಎ ಪರೀಕ್ಷೆ ಮಾಡಿಸಲಿ ಎಂದು ಸಾಗರ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕುಹಕವಾಡಿದ್ದಾರೆ.
"
ಮಹಾತ್ಮ ಗಾಂಧೀಜಿಗೆ ಅಪಮಾನ ಮಾಡಿದ ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ವಿರುದ್ಧ ಕಾಂಗ್ರೆಸ್ ಮುಖಂಡರು ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಪ್ರತಿಭಟಿಸುತ್ತಿದ್ದು, ಈ ವೇಳೆ ಅವರು ಮಾತನಾಡಿದರು.
'ನೀವಷ್ಟೇ ಹಿಂದುಗಳೇ ಅಲ್ಲ. ನಾವೂ ಹಿಂದುಗಳೇ. ಮಹಿಳೆಯರಿಗೆ ಅವಮಾನ ಮಾಡಿದವರ, ಬ್ಲೂ ಫಿಲ್ಮ್ ನೋಡಿದವರ, ಹೆಣ್ಣು ಮಕ್ಕಳ ಮೇಲೆ ಹಲ್ಲೆ ಮಾಡಿದವರ ಎಷ್ಟು ಮಂದಿ ಕೈ ಕತ್ತರಿಸಿದ್ದೀರಿ?' ಎಂದು ಹೆಗಡೆಯವರ ಕೈ ಕತ್ತರಿಸಿ ಎನ್ನುವ ಹೇಳಿಕೆಯನ್ನು ಅವರು ಪ್ರಸ್ತಾಪಿಸಿದರು. 'ಪ್ರಧಾನಿ ಮೋದಿಯವರು ರಾಮ ಮಂದಿರವನ್ನು ಕಟ್ಟಿ ಬಿಡುತ್ತೇವೆ ಎಂದರು.
ಆದರೆ ಇದುವರೆಗೂ ನಿರ್ಮಿಸಿಲ್ಲ. ಹಾಗಿದ್ದರೆ ಮೋದಿಯವರನ್ನು ಕೊಂದು ಬಿಡುತ್ತೀರಾ..?' ಎಂದು ಹಿಂದೂ ಮಹಾಸಭಾ ಹಾಗೂ RSSಗೆ ಗೋಪಾಲಕೃಷ್ಣ ಸವಾಲು ಹಾಕಿದರು. ಹೇಳಿಕೆ ಸಮರ್ಥಿಸಿಕೊಂಡ ಬೇಳೂರು: 'ಕೇಂದ್ರ ಸಚಿವರಾಗಿ ಕೈ ಕಡಿಯುವ ಮಾತನಾಡುತ್ತಾರೆ. ಮಹಿಳೆಯರ ವಿರುದ್ಧದ ಕಾರ್ಯಗಳಲ್ಲಿ ತೊಡಗುವವರು ವಿರುದ್ಧ ಯಾವ ಕ್ರಮವೂ ಕೈಗೊಂಡಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಇಂಥ ಮಾತುಗಳನ್ನು ಆಡಬಾರದು...' ಎನ್ನುವ ಮೂಲಕ ಗೋಪಾಲಕೃಷ್ಣ ತಮ್ಮ ಹೇಳಿಕೆಯನ್ನು ಪ್ರತಿಭಟನೆ ನಂತರವೂ ಸಮರ್ಥಿಸಿಕೊಂಡಿದ್ದಾರೆ.
'ಬೇರೆ ಜಾತಿ ಧರ್ಮದವರನ್ನು ಮದುವೆಯಾಗಬಾರದೆಂಬ ಕಾನೂನು ಇದೆಯೇ? ಹೆಗಡೆಯವರ ಪತ್ನಿ DNA ಪರೀಕ್ಷೆ ಮಾಡಿಸಿದರೆ, ಯಾವ ಜಾತಿಯವರು ಗೊತ್ತಾಗುತ್ತೆ. ನಮ್ಮ ಅಧ್ಯಕ್ಷರ ಹೆಂಡ್ತಿ ಬಗ್ಗೆ ಅವರಿಗೆ ಮಾತನಾಡುವ ಅವಶ್ಯಕತೆ ಇತ್ತಾ? ಅವರು ನಾಲಿಗೆ ಹರಿಬಿಟ್ಟರೆ ನಾವೂ ಹರಿಬಿಡಬೇಕಾಗುತ್ತೆ..' ಎಂದು ಬೇಳೂರು ಎಚ್ಚರಿಸಿದರು.