Asianet Suvarna News Asianet Suvarna News

ಬಿಜೆಪಿ ಕಾರ್ಯಕರ್ತನ ಮೇಲೆ ಹೆಬ್ಬಾಳ್ಕರ್ ಸಹೋದರ ಹಲ್ಲೆ ಪ್ರಕರಣ; ಸದನದಲ್ಲಿ ಬಿಜೆಪಿ ಗದ್ದಲ!

ಬೆಳಗಾವಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರಿಗೆ ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಬೆಂಬಲಿಗರು ಚಾಕು ಇರಿದಿದ್ದರೂ ಕೊಲೆಯತ್ನ ಪ್ರಕರಣ ದಾಖಲಿಸದೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ ಘಟನೆ ನಡೆಯಿತು.

Belagavi Assembly sesseon 2023 Lakshmi Hebbalkar brother assault case on BJP worker Pritvi singha at belagavi rav
Author
First Published Dec 7, 2023, 6:23 AM IST

ವಿಧಾನಸಭೆ (ಡಿ.7) : ಬೆಳಗಾವಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರಿಗೆ ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಬೆಂಬಲಿಗರು ಚಾಕು ಇರಿದಿದ್ದರೂ ಕೊಲೆಯತ್ನ ಪ್ರಕರಣ ದಾಖಲಿಸದೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ ಘಟನೆ ನಡೆಯಿತು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ವಿಜಯೇಂದ್ರ, ಶತಾಯಗತಾಯ ಪ್ರಕರಣದ ಆರೋಪಿಗಳ ಮೇಲೆ ಕೊಲೆ ಯತ್ನ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದರಿಂದ ಕೆಲ ಕಾಲ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಜಟಾಪಟಿ ನಡೆಯಿತು.

ನನಗೆ, ಕುಟುಂಬಕ್ಕೆ ಈಗಲೂ ಜೀವ ಬೆದರಿಕೆಯಿದೆ-ಬಿಜೆಪಿ ಕಾರ್ಯಕರ್ತ ಪೃಥ್ವಿಸಿಂಗ್‌ ಗಂಭೀರ ಆರೋಪ

ಈ ವೇಳೆ ಸರ್ಕಾರದ ಪರ ಉತ್ತರಿಸಿದ ಸಚಿವ ಎಚ್.ಕೆ. ಪಾಟೀಲ್‌, ಗೃಹ ಸಚಿವರು ಬೆಂಗಳೂರಿನಲ್ಲಿದ್ದಾರೆ. ಅವರು ಬಂದ ಬಳಿಕ ಗುರುವಾರದ ಒಳಗಾಗಿ ಉತ್ತರ ಕೊಡಿಸುತ್ತೇವೆ ಎಂದು ಹೇಳಿದರು.

ಇದಕ್ಕೆ ಒಪ್ಪದ ವಿಜಯೇಂದ್ರ, ಗೃಹ ಸಚಿವರು ಇಲ್ಲದಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದ್ದಾರೆ. ಅವರಿಂದಲೇ ಉತ್ತರ ಕೊಡಿಸಿ. ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಸಹೋದರನ ಬೆಂಬಲಿಗರಿಂದ ಕೃತ್ಯ ನಡೆದಿದೆ. ದಲಿತ ಮುಖಂಡ ಪೃಥ್ವಿ ಸಿಂಗ್‌ ಅವರಿಗೆ ಮಾರಣಾಂತಿಕವಾಗಿ ಚಾಕುವಿನಲ್ಲಿ ಇರಿದ್ದಾರೆ. ಆರೋಪಿಗಳು ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ಬಲಗೈ ಭಂಟ ಹಾಗೂ ಇಬ್ಬರು ಗನ್‌ ಮ್ಯಾನ್‌ಗಳೂ ಇದ್ದಾರೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ ಕೊಲೆ ಆರೋಪದಡಿ ಪ್ರಕರಣ ದಾಖಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಶೂನ್ಯ ವೇಳೆಯಡಿ ಪ್ರಸ್ತಾಪಿಸಿರುವ ವಿಷಯಗಳಿಗೆ ಉತ್ತರಿಸಲು ಎರಡು ದಿನಗಳವರೆಗೆ ನಿಯಮಾವಳಿಯಲ್ಲೇ ಕಾಲಾವಕಾಶ ಇದೆ. ಹೀಗಾಗಿ ಈ ಕ್ಷಣವೇ ಉತ್ತರ ಬೇಕು ಎಂದು ಪಟ್ಟು ಹಿಡಿಯುವುದು ಬೇಡ. ಗೃಹ ಸಚಿವರು ಬಂದ ಬಳಿಕ ಉತ್ತರ ಕೊಡಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ಕಲಾಪ ಮುಂದೂಡಿಕೆ:

ಬಿಜೆಪಿ ಸದಸ್ಯರು, ತಮ್ಮ ಬೇಡಿಕೆ ಈಡೇರಿಕೆಗೆ ಪಟ್ಟು ಹಿಡಿದು ಸದನದ ಬಾವಿಗಿಳಿದು ತೀವ್ರ ಗಲಾಟೆ ನಡೆಸಿದ ಹಿನ್ನೆಲೆಯಲ್ಲಿ, ‘ರಾಜಕೀಯ ಅಜೆಂಡಾ ಇಟ್ಟುಕೊಂಡು ಚರ್ಚೆ ಮಾಡಬೇಡಿ’ ಎಂದು ತರಾಟೆಗೆ ತೆಗೆದುಕೊಂಡ ಸ್ಪೀಕರ್‌ ಯು.ಟಿ. ಖಾದರ್‌ ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.

ಸಂಧಾನಸಭೆ ಯಶಸ್ವಿ:

ಬಳಿಕ ತಮ್ಮ ಕಚೇರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್‌, ಪ್ರತಿಪಕ್ಷದ ನಾಯಕ ಆರ್. ಅಶೋಕ್‌, ಬಿಜೆಪಿಯ ವಿಜಯೇಂದ್ರ, ಅರಗ ಜ್ಞಾನೇಂದ್ರ, ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕರೆಸಿ ಸ್ಪೀಕರ್‌ ಸಂಧಾನ ಸಭೆ ನಡೆಸಿದರು.

ಬೆಳಗಾವಿಯಲ್ಲಿ ಬಿಜೆಪಿಗನಿಗೆ ಇರಿತ: ಸಚಿವೆ ಹೆಬ್ಬಾಳಕರ ಸಹೋದರ, ಬೆಂಬಲಿಗರಿಂದ ಹಲ್ಲೆ

ಸಂಧಾನದ ಬಳಿಕವೂ ಸದನದ ಬಾವಿಯಲ್ಲೇ ಮುಂದುವರೆದ ಬಿಜೆಪಿ ಸದಸ್ಯರು, ಸ್ಪೀಕರ್‌ ನೇತೃತ್ವದಲ್ಲಿ ನಡೆದ ಸಭೆಯ ನಿರ್ಣಯದಂತೆ ಗೃಹ ಸಚಿವರೊಂದಿಗೆ ಉತ್ತರ ಕೊಡಿಸುವ ಜತೆಗೆ ನಿಷ್ಪಕ್ಷಪಾತ ಕ್ರಮ ಕೈಗೊಳ್ಳುವುದಾಗಿ ಸಚಿವ ಕೃಷ್ಣಬೈರೇಗೌಡ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿ ಹಿಂಪಡೆದರು.

Latest Videos
Follow Us:
Download App:
  • android
  • ios