ಕೊರೋನಾ ಟೆಸ್ಟ್‌ಗೆ ಒಪ್ಪದಿದ್ದರೆ 3 ವರ್ಷ ಜೈಲು, ಭಾರೀ ದಂಡ!| ಸೋಂಕು ನಿಯಂತ್ರಣಕ್ಕೆ ಕಾನೂನು ಅಸ್ತ್ರ ಪ್ರಯೋಗ| ಸರ್ಕಾರ ಸೂಚಿಸಿದವರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ| ಮಹತ್ವದ ಆದೇಶ| ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ ಬಳಕೆ

ಬೆಂಗಳೂರು(ಅ.07): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಹ​ತ್ವದ ಕಠಿಣ ಆದೇ​ಶ​ವೊಂದನ್ನು ಹೊರ​ಡಿ​ಸಿ​ದೆ. ಸರ್ಕಾ​ರ​ದಿಂದ ಗುರು​ತಿ​ಸ​ಲ್ಪ​ಡುವ ವ್ಯಕ್ತಿ​ಗಳು ಕೊರೋನಾ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿ​ಸಿ​ಕೊ​ಳ್ಳ​ಬೇಕು ಎಂದು ಮಂಗಳವಾರ ಆದೇಶಿಸಿದೆ. ಆದೇಶ ಪಾಲಿಸದವರಿಗೆ 50 ಸಾವಿರ ರು.ವರೆಗೆ ದಂಡ ಹಾಗೂ 6 ತಿಂಗಳಿಂದ 3 ವರ್ಷದವರೆಗೆ ಶಿಕ್ಷೆ ವಿಧಿ​ಸುವ ಅವ​ಕಾಶ ಕಲ್ಪಿ​ಸ​ಲಾ​ಗಿ​ದೆ.

Add Asianetnews Kannada as a Preferred SourcegooglePreferred

ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಹೊಸ ಆದೇಶ ಹೊರ​ಡಿ​ಸಿದೆ. ಆದೇ​ಶದ ಪ್ರಕಾರ, ‘ಕೋವಿಡ್‌ ಧೃಢವಾಗಿರುವ ವ್ಯಕ್ತಿಯ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಿತರು, ಜ್ವರದ ಲಕ್ಷಣವಿರುವ ವ್ಯಕ್ತಿಗಳು, ಉಸಿರಾಟ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರು, ಕೋವಿಡ್‌-19 ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ಸಿಬ್ಬಂದಿ, ಕಂಟೈನ್‌ಮೆಂಟ್‌ ಮತ್ತು ಬಫರ್‌ ವಲಯದಲ್ಲಿನ ವ್ಯಕ್ತಿಗಳು ಮತ್ತು ಆರೋಗ್ಯ ಇಲಾಖೆಯಿಂದ ಗುರುತಿಸಲ್ಪಟ್ಟವ್ಯಕ್ತಿಗಳು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಬೇಕು’ ಎಂದು ತಿಳಿಸಲಾಗಿದೆ.

ಡಿಸಿ​ಗ​ಳಿಗೆ ಜಾರಿಯ ಹೊಣೆ:

ಈ ಆದೇಶವನ್ನು ಕರ್ನಾಟಕ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ - 2020ರ 4ನೇ ವಿಧಿಯಡಿ ಹೊರಡಿಸಲಾಗಿದ್ದು, ಆದೇಶ ಜಾರಿಯ ಹೊಣೆಯನ್ನು ಜಿಲ್ಲಾಧಿಕಾರಿಗಳು ಅಥವಾ ಮುನಿಸಿಪಲ್‌ ಕಮಿಷನರ್‌ ಅವರಿಗೆ ವಹಿಸಲಾಗಿದೆ. ಈ ಸುಗ್ರೀ​ವಾಜ್ಞೆ ಪ್ರಕಾರ, ಸರ್ಕಾರ ಸೂಚಿ​ಸಿ​ದರೂ ಕೊರೋನಾ ಟೆಸ್ಟ್‌ ಮಾಡಿ​ಸಿ​ಕೊ​ಳ್ಳ​ದ​ವ​ರಿಗೆ 50 ಸಾವಿರ ರು.ವರೆಗೆ ದಂಡ ಹಾಗೂ 6 ತಿಂಗಳಿಂದ 3 ವರ್ಷದವರೆಗೆ ಶಿಕ್ಷೆ ವಿಧಿ​ಸುವ ಅವ​ಕಾಶವಿದೆ.

ನಿರಾ​ಕ​ರ​ಣೆ​ಯಿಂದ ಹಿನ್ನ​ಡೆ:

ಕೊರೋನಾ ಸೋಂಕು ಪತ್ತೆ ಹಚ್ಚುವ ಪರೀಕ್ಷೆಗೆ ಕೆಲವರು ನಿರಾಕರಿಸುತ್ತಿರುವುದು ರಾಜ್ಯದ ಕೊರೋನಾ ನಿಯಂತ್ರಣ ಕ್ರಮಕ್ಕೆ ತೀವ್ರ ಹಿನ್ನಡೆ ತಂದಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಸರಿಯಾದ ಸಮಯದಲ್ಲಿ ಕೊರೋನಾ ಸೋಂಕನ್ನು ಪತ್ತೆ ಹಚ್ಚುವುದರಿಂದ ಸೋಂಕಿತನ ಕುಟುಂಬ ಸದಸ್ಯರು ಮತ್ತು ಸಹೋದ್ಯೋಗಿಗಳಿಗೆ ಸೋಂಕು ಹರಡುವುದನ್ನು ತಡೆಯಬಹುದು. ಹಾಗೆಯೇ ಸೋಂಕು ಪತ್ತೆ ಹಚ್ಚಲು ಮತ್ತು ಸೋಂಕಿತರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ. ಇದರಿಂದ ಮರಣದ ದರ ಕಡಿಮೆಯಾಗಲಿದೆ ಎಂದು ಸರ್ಕಾರವು ತನ್ನ ಆದೇ​ಶ​ದಲ್ಲಿ ತಿಳಿ​ಸಿ​ದೆ.