ದಾಖಲೆಯ ಪ್ರಕಾರ ಮಲೆನಾಡಿನಲ್ಲಿ ಕಳೆದ 128 ವರ್ಷಗಳಲ್ಲಿ ಮೊದಲ ಬಾರಿಗೆ ಭೀಕರ ಬರ ಎದುರಾಗಲಿದ್ದು, ಅದಕ್ಕೆ ಸಮರೋಪಾದಿಯಲ್ಲಿ ಸಜ್ಜಾಗುವಂತೆ ಸಾರ್ವಜನಿಕರು, ಅಧಿಕಾರಿಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು.  

ಹೊಸನಗರ (ಮಾ.17): ದಾಖಲೆಯ ಪ್ರಕಾರ ಮಲೆನಾಡಿನಲ್ಲಿ ಕಳೆದ 128 ವರ್ಷಗಳಲ್ಲಿ ಮೊದಲ ಬಾರಿಗೆ ಭೀಕರ ಬರ ಎದುರಾಗಲಿದ್ದು, ಅದಕ್ಕೆ ಸಮರೋಪಾದಿಯಲ್ಲಿ ಸಜ್ಜಾಗುವಂತೆ ಸಾರ್ವಜನಿಕರು, ಅಧಿಕಾರಿಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು. ಪಟ್ಟಣದ ಬಸ್ ನಿಲ್ದಾಣ ಆವರಣದಲ್ಲಿ ₹422 ಕೋಟಿ ವೆಚ್ಚದ ಹೊಸನಗರ ಪಟ್ಟಣ ಸೇರಿದಂತೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಮುಂದಿನ ಬೇಸಿಗೆಯ 3 ತಿಂಗಳು ಬರ ಎದುರಿಸಲು ಸರ್ಕಾರ ಸಾಕಷ್ಟು ಏರ್ಪಾಡು ಮಾಡಿದೆ. ಆದರೂ ಸಹ ಜನರು ನೀರನ್ನು ಪೋಲು ಮಾಡಬಾರದು ಎಂದು ಮನವಿ ಮಾಡಿದರು.

Add Asianetnews Kannada as a Preferred SourcegooglePreferred

ತಂದೆ ಎಸ್‌. ಬಂಗಾರಪ್ಪ ಅವರು ರೈತರಿಗೆ ಉಚಿತ ವಿದ್ಯುತ್ ನೀಡಿದರು. ಆದರೆ, ಅದು ಈ ಕಂಟಕ ಆಗುತ್ತಿದೆ. ಬೆಳೆಗೆ ನೀರು ಬೇಕೋ ಬೇಡವೋ, ವಿದ್ಯುತ್ ಇದ್ದಾಗ ಒಂದೇ ಸಮನೆ ನೀರು ಹಾಯಿಸಿ ಅನಗತ್ಯವಾಗಿ ಪೊಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಶಾಸಕ ಗೋಪಾಲಕೃಷ್ಣ ಬೇಳೂರು ಸಭೆ ಅಧ್ಯಕ್ಷತೆ ವಹಿಸಿ, ಚಕ್ರಾ ಅಣೆಕಟ್ಟಿನಿಂದ ಹೊಸನಗರ ಪಟ್ಟಣ ಸೇರಿದಂತೆ 1166 ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಮಹತ್ವದ ಯೋಜನೆಗೆ ಚಾಲನೆ ದೊರೆತಿದೆ. ಈ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಅಭಾವ ಇಲ್ಲವಾಗಬಹುದು ಎಂದು ಆಶಿಸಿದರು.

ಬಿಜೆಪಿಯ ಸುಳ್ಳಿನ ಭರವಸೆಗಳ ಮಂತ್ರ ಬರುವ ಚುನಾವಣೆಯಲ್ಲಿ ನಡೆಯಲ್ಲ: ಮಧು ಬಂಗಾರಪ್ಪ

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಮಕ್ಕಳಿಗೆ ನೀರು ಉಳಿಸುವ, ಸಂರಕ್ಷಣೆ ಕುರಿತಂತೆ ಪಠ್ಯದಲ್ಲಿ ಅಳವಡಿಸಬೇಕು. ನೀರಿನ ಸದ್ಬಳಕೆ ಮಕ್ಕಳ ಮನದ ಆಳಕ್ಕೆ ಇಳಿಸಿದರೆ ಅದರ ಫಲ ಮುಂದಿನ ದಿನಗಳಲ್ಲಿ ದೊರೆಯಬಲ್ಲದು ಎಂದು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ಮಲೆನಾಡು ಅಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ರಾಜ್ಯ ಸಂಬಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಪಲ್ಲವಿ, ತಹಸೀಲ್ದಾರ್ ರಶ್ಮಿ, ಮುಖ್ಯಾಧಿಕಾರಿ ಮಾರುತಿ, ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಈ ಯೋಜನೆಯಡಿ ಬರುವ ಗ್ರಾ.ಪಂ. ಅಧ್ಯಕ್ಷರು ಇದ್ದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಸ್ವಾಗತಿಸಿದರು. ಕಾರ್ಯಾಪಾಲಕ ಎಂಜಿನಿಯರ್ ರಾಜೇಂದ್ರಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.