ನಗರದ ರಸ್ತೆ, ಪಾದಚಾರಿ ಮಾರ್ಗ, ಆಸ್ಪತ್ರೆ ಆವರಣ, ನರ್ಸಿಂಗ್‌ ಹೋಂ, ಶಾಲಾ-ಕಾಲೇಜಿನ ಒಳ ಮತ್ತು ಹೊರಾಂಗಣ, ಆಟದ ಮೈದಾನ, ಉದ್ಯಾನ, ದೇವಸ್ಥಾನ, ಮಸೀದಿ, ಇತರೆ ಧಾರ್ಮಿಕ ಸ್ಥಳಗಳ ಆವರಣ, ಸಾರ್ವಜನಿಕ ಪ್ರದೇಶಗಳಲ್ಲಿ ಅನಧಿಕೃತವಾಗಿ ಪ್ರಾಣಿವಧೆ ಮತ್ತು ಬಲಿ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಬೆಂಗಳೂರು (ಜೂ.27) : ನಗರದ ರಸ್ತೆ, ಪಾದಚಾರಿ ಮಾರ್ಗ, ಆಸ್ಪತ್ರೆ ಆವರಣ, ನರ್ಸಿಂಗ್‌ ಹೋಂ, ಶಾಲಾ-ಕಾಲೇಜಿನ ಒಳ ಮತ್ತು ಹೊರಾಂಗಣ, ಆಟದ ಮೈದಾನ, ಉದ್ಯಾನ, ದೇವಸ್ಥಾನ, ಮಸೀದಿ, ಇತರೆ ಧಾರ್ಮಿಕ ಸ್ಥಳಗಳ ಆವರಣ, ಸಾರ್ವಜನಿಕ ಪ್ರದೇಶಗಳಲ್ಲಿ ಅನಧಿಕೃತವಾಗಿ ಪ್ರಾಣಿವಧೆ ಮತ್ತು ಬಲಿ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

Add Asianetnews Kannada as a Preferred SourcegooglePreferred

ಪಾಲಿಕೆ ವ್ಯಾಪ್ತಿಯಲ್ಲಿ ಬಕ್ರೀದ್‌, ಜಾತ್ರೆ, ಹಬ್ಬದ ದಿನಗಳು ಹಾಗೂ ಧಾರ್ಮಿಕ ಚಟುವಟಿಕೆ ವೇಳೆ ನಡೆಯುವ ಪ್ರಾಣಿವಧೆ ಮತ್ತು ಬಲಿ ಪ್ರಕ್ರಿಯೆ ಸಂಬಂಧಪಟ್ಟಂತೆ ಬಿಬಿಎಂಪಿ ಈ ಸಂಬಂಧ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.

ಅಕ್ರಮ ಜಾನುವಾರು ಸಾಗಾಟ: ವಾಹನ ಸಮೇತ ಪೊಲೀಸ್ ಠಾಣೆಗೆ ಕರೆತಂದ ಹಿಂದುಪರ ಸಂಘಟನೆಗಳು

2020ರ ಅಧಿನಿಯಮ ಪ್ರಕಾರ ಅನಧಿಕೃತ ಪ್ರಾಣಿವಧೆ ನಿರ್ಬಂಧಿಸಿದ್ದು, ಕಾನೂನು ಉಲ್ಲಂಘಿಸುವವರ ವಿರುದ್ದ ಕ್ರಮ ಜರುಗಿಸಲಾಗುವುದು. ಕರ್ನಾಟಕ ರಾಜ್ಯ ಪ್ರಾಣಿ ಬಲಿ ತಡೆಕಾಯ್ದೆ 1959ರ ಸೆಕ್ಷನ್‌ 3ರ ಪ್ರಕಾರ ಪ್ರಾಣಿ ಬಲಿ ಶಿಕ್ಷರ್ಹ ಅಪರಾಧವಾಗಿದ್ದು, 6 ತಿಂಗಳ ಸಜೆ ಮತ್ತು ದಂಡ ವಿಧಿಸಲಾಗುವುದು. ಕಾಯ್ದೆ ಪ್ರಕಾರ ಸಾರ್ವಜನಿಕರು ವಧೆಗೆ ಅರ್ಹ ಮತ್ತು ಆಹಾರಕ್ಕೆ ಯೋಗ್ಯ ಪ್ರಾಣಿಗಳನ್ನು ಅಧಿಕೃತ ಕಸಾಯಿಖಾನೆಗಳಲ್ಲಿ ಮಾತ್ರ ವಧೆ ಮಾಡಬೇಕು. ಭಾರತೀಯ ದಂಡ ಸಂಹಿತೆ ಸೆಕ್ಷನ್‌ 429ರ ಪ್ರಕಾರ ಯಾವುದೇ ಪ್ರಾಣಿಗಳನ್ನು ಅನಧಿಕೃತವಾಗಿ ಕೊಂದರೆ 5 ವರ್ಷ ಜೈಲು ಶಿಕ್ಷೆ ಇರಲಿದೆ ಎಂದು ಪಾಲಿಕೆ ಎಚ್ಚರಿಕೆ ನೀಡಿದೆ.

ಯಾದಗಿರಿ: ಅಕ್ರಮವಾಗಿ ಸಾಗಿಸುತ್ತಿದ್ದ 25 ಹಸುಗಳ ರಕ್ಷಣೆ, ಆರೋಪಿಗಳು ವಶಕ್ಕೆ

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020ರಂತೆ ಯಾವುದೇ ವಯಸ್ಸಿನ ದನ, ಆಕಳು, ಎತ್ತು, ಹೋರಿ, ಕರುಗಳ ಬಲಿ, ಕುರ್ಬಾನಿ ಮತ್ತು ವಧೆ ನಿಷೇಧಿಸಲಾಗಿದೆ. ಬಲಿ, ಕುರ್ಬಾನಿ, ವಧೆಗಾಗಿ ಯಾವುದೇ ವಯ ಸ್ಸಿನ ದನ, ಆಕಳು, ಎತ್ತು, ಹೋರಿ, ಕರುಗಳ ಸಾಗಾಟವೂ ಅಪರಾಧವಾಗಿದೆ. ಇಂತಹ ಚಟುವಟಿಕೆ ಕಂಡು ಬಂದರೆ ಸಾರ್ವಜನಿಕರು ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿ ಸಂಖ್ಯೆ 82771 00200ಕ್ಕೆ ಕರೆ ಮಾಡಿ ದೂರು ಅಥವಾ ಮಾಹಿತಿ ನೀಡಬಹುದು ಎಂದು ಬಿಬಿಎಂಪಿಯ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕ ಡಾಕೆ.ಪಿ.ರವಿಕುಮಾರ್‌ ಪ್ರಕಟಣೆಯಲ್ಲಿ ಹೇಳಿದ್ದಾರೆ.