ಮತ್ತೋರ್ವ ಜೆಡಿಎಸ್ ಮುಖಂಡಗೆ ಸಚಿವ ಸ್ಥಾನ
ಶೀಘ್ರದಲ್ಲೇ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು ಈ ವೇಳೆ ಇನ್ನೋರ್ವ ಜೆಡಿಎಸ್ ಮುಖಂಡಗೆ ಸಚಿವ ಸ್ಥಾನ ಲಭ್ಯವಾಗಲಿದೆ.
ಧಾರವಾಡ: ತಮಗೆ ಸಚಿವ ಸ್ಥಾನ ನೀಡಿದರೂ ಖುಷಿ, ನೀಡದಿದ್ದರೂ ಸಂತೋಷ. ಈ ವಿಚಾರದಲ್ಲಿ ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ತೀರ್ಮಾನಕ್ಕೆ ನಾನು ಬದ್ಧ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿತಿಳಿಸಿದ್ದಾರೆ.
ಭಾನುವಾರ ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂಬ ಸುದ್ದಿ ಮಾಧ್ಯಮಗಳ ಮೂಲಕ ಕೇಳಿ ಬಂದಿದೆ. ಈ ವಿಷಯವಾಗಿ ಪಕ್ಷದಿಂದ ಯಾವ ಮಾಹಿತಿ ತಮಗಿಲ್ಲ. ನಾನಂತೂ ಸಚಿವ ಸ್ಥಾನ ಬೇಕೆಂದು ಎಂದಿಗೂ ಹಠ ಹಿಡಿದಿಲ್ಲ. ಸಭಾಪತಿ ಸ್ಥಾನಕ್ಕೆ ಸಾಕಷ್ಟುಗೌರವ ಇದ್ದು, ಪಕ್ಷದಿಂದ ದೊರೆತಿರುವ ಈ ಗೌರವವು ಸಮಾಧಾನ ತಂದಿದೆ ಎಂದು ಹೇಳಿದರು.
ತಾವು ಹಾಗೂ ವಿಧಾನಸಭೆ ಸಭಾಧ್ಯಕ್ಷರು ಬೆಳಗಾವಿ ಅಧಿವೇಶ ಕುರಿತು ನ.19ಕ್ಕೆ ಚರ್ಚೆ ಮಾಡಲಿದ್ದೇವೆ. ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಿದ್ದು, ಡಿಸೆಂಬರ್ ತಿಂಗಳಲ್ಲಿ ಅಧಿವೇಶನ ನಡೆಯಲಿದೆ.