Asianet Suvarna News Asianet Suvarna News

ಪಂಚಮಸಾಲಿ ಹೋರಾಟಕ್ಕೆ ಅಡ್ಡಗಾಲು, ಯಡಿಯೂರಪ್ಪಗೆ ಕಪ್ಪು ಬಾವುಟದ ಎಚ್ಚರಿಕೆ ನೀಡಿದ ಸ್ವಾಮೀಜಿ!

ಪಂಚಮಸಾಲಿ ಹೋರಾಟಕ್ಕೆ ಬಿಎಸ್ ಯಡಿಯೂರಪ್ಪ ಅಡ್ಡಗಾಲು ಹಾಕುತ್ತಿದ್ದು, ಬಿ.ಎಸ್.ವೈ ಗೆ ಹೋದಲ್ಲೆಲ್ಲಾ ಕಪ್ಪು ಬಾವುಟ ಪ್ರದರ್ಶನ ಮಾಡಬೇಕಾಗುತ್ತೆ ಹುಷಾರ್ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

Basava Jaya Mruthyunjaya Swamiji Warns BS Yediyurappa about Panchamasali Reservation gow
Author
First Published Sep 20, 2022, 7:27 PM IST

ವರದಿ: ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್  

ಹಾವೇರಿ (ಸೆ.20): ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ನೀಡುವಂತೆ ಆಗ್ರಹಿಸಿ ಶಿಗ್ಗಾವಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಎದುರು ಬೃಹತ್ ಪ್ರತಿಭಟನೆ ನಡೆದಿದೆ. ಪಂಚಮಸಾಲಿ ಸಮಾಜಕ್ಕೆ 2 A ಮೀಸಲಾತಿ ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತು ತಪ್ಪಿದ್ದಾರೆ. ಹೀಗಾಗೇ ಸಿಎಂ ನಿವಾಸದ ಎದುರು ಪ್ರತಿಭಟನೆ ಹಮ್ಮಿಕೊಂಡಿರೋದಾಗಿ ತಿಳಿಸಿದ ಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇಂದು ಮದ್ಯಾಹ್ನ 12 ಗಂಟೆಗೆ ಶಿಗ್ಗಾವಿಯ ಚೆನ್ನಮ್ಮ ಸರ್ಕಲ್ ಗೆ ಆಗಮಿಸಿದ ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಚೆನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿಸರು. ಮಾಜಿ ಸಚಿವ ವಿನಯ್ ಕುಲಕರ್ಣಿ, ವಿಜಯಾನಂದ ಕಾಶೆಪ್ಪನವರ, ಸೇರಿದಂತೆ ಹಲವು ಮುಖಂಡರು ಸ್ವಾಮೀಜಿಗೆ ಸಾಥ್ ನೀಡಿದರು. ಬಳಿಕ ಸಿಎಂ ನಿವಾಸದ ವರಗೆ ಪಾದಯಾತ್ರೆ ನಡೆಸಿದ ಸ್ವಾಮೀಜಿ ಈಗ ಧರಣಿ ನಿರತರಾಗಿದ್ದಾರೆ. ಪ್ರತಿಭಟನಾ ಧರಣಿಯಲ್ಲಿ ಮಾತನಾಡಿದ ಸ್ವಾಮೀಜಿ, ಬೊಮ್ಮಾಯಿಯವರು ಮೀಸಲಾತಿ ನೀಡಿದರೆ 101 ಲೀಟರ್ ಹಾಲಿನ ಅಭಿಷೇಕ ಮಾಡುತ್ತೇವೆ.ಸೂರ್ಯ ಚಂದ್ರ ಇರೋವರೆಗೆ ಹೇಗೇ ಚೆನ್ನಮ್ಮನ ಸ್ಮರಣೆ ಮಾಡ್ತೀವೋ ಹಾಗೆ ನಿಮ್ಮ ಸ್ಮರಣೆ ಮಾಡ್ತೀವಿ. ಸವಣೂರು ಖಾರಾ ತುಲಾಭಾರ ಮಾಡಿಸ್ತೀವಿ ಎಂದರು.

ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡದಿದ್ದರೆ ಸರ್ಕಾರಕ್ಕೆ ತಕ್ಕ ಪಾಠ: ಕೂಡಲ ಶ್ರೀ

ಯಡಿಯೂರಪ್ಪನಿಗೆ ಹೊಟ್ಟೆ ಕಿಚ್ಚು: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡದಂತೆ ಯಡಿಯೂರಪ್ಪ ಸಾಹೇಬ್ರು ಒತ್ತಡ ಹಾಕ್ತಿದ್ದಾರೆ ಅಂತ ಕೆಲವರು ನಮಗೆ ಹೇಳಿದ್ದಾರೆ. ಬೊಮ್ಮಾಯಿ ಮೀಸಲಾತಿ ನೀಡಿದರೆ ಎಲ್ಲಿ ಲಿಂಗಾಯತ ಲೀಡರ್ ಆಗ್ತಾರೋ ಅಂತ ಯಡಿಯೂರಪ್ಪನಿಗೆ ಹೊಟ್ಟೆ ಕಿಚ್ಚು ಇರಬಹುದು. ಹೋರಾಟಕ್ಕೆ ನೀವೆನಾದರೂ ತೊಂದರೆ ಮಾಡಿದರೆ ನೀವು ಹೋದಲ್ಲೆಲ್ಲಾ ಕಪ್ಪು ಬಾವುಟ ಹಾರಿಸ್ತೀವಿ. ಶಿಕಾರಿಪುರದ ವರೆಗೆ ಪಾದಯಾತ್ರೆ ಮಾಡೋಕೂ ಸಿದ್ದರಿದ್ದೇವೆ ಎಂದು ಯಡಿಯೂರಪ್ಪ  ಅವ್ರಿಗೆ ಎಚ್ಚರಿಕೆ ನೀಡಿದರು.

ವಿಜಯೇಂದ್ರ ಸಣ್ಣ ಹುಡುಗ ಮೊದಲು ನಮ್ಮ ಮೀಸಲಾತಿ ಹೋರಾಟಕ್ಕೆ ತೊಂದರೆ ನೀಡಿದ. ಆ ಮೇಲೆ ತಪ್ಪಿನ ಅರಿವಾಗಿ ಸುಮ್ಮನೆ ಕುಳಿತ. ನಮ್ಮ ಹೋರಾಟ ಇಲ್ಲಿಗೆ ನಿಲ್ಲಲ್ಲ. ಪಂಚಮಸಾಲಿ ರಥಯಾತ್ರೆ ಮಾಡಿ  ಸಮಾಜದ ಜನರನ್ನು ಸಂಘಟನೆ ಮಾಡುತ್ತೇನೆ. ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡ್ತೀವಿ. ಶಾಸಕ ಯತ್ನಾಳ ಬೆಂಗಳೂರಿನಿಂದ ಆಗಮಿಸಿ ಮುಂದಿನ ಹೋರಾಟದ ರೂಪರೇಶೆ ಘೋಷಣೆ ಮಾಡ್ತಾರೆ ಎಂದರು.

ಬೆಟ್ಟ ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಕಲ್ಪಿಸಿರುವ ಕೇಂದ್ರ ಸರ್ಕಾರಕ್ಕೆ ಈಶ್ವರಪ್ಪ ಕೃತಜ್ಞತೆ

ಬಸವರಾಜ ಬೊಮ್ಮಾಯಿ ಅವರಿಗೆ ಅಧಿಕಾರ ಕೊಟ್ಟ ಸಮುದಾಯಗಳಲ್ಲಿ ಪಂಚಮಸಾಲಿಗಳ ಪಾತ್ರವೂ ಇದೆ. ಈ ಹಿಂದೆ ಅವರೇ ಸಮಾಜಕ್ಕೆ ಬೆಂಬಲ ನೀಡಿದ್ದರು. ಅವರೇ ಸಿಎಂ ಆಗಿದ್ದರಿಂದ ಅವರ ಮೇಲೆ ಒತ್ತಡ ಹಾಕುತ್ತಿದ್ದೇವೆ. ಹಿಂದೆ ಮೀಸಲಾತಿ ವಿಚಾರದ ಹೋರಾಟದ ಸಮಯದಲ್ಲಿ ಭಾಗವಹಿಸಿ ಭರವಸೆ ಕೊಟ್ಟಿದ್ದರು. ಅವರು ಶಿಗ್ಗಾಂವಿ ಕ್ಷೇತ್ರಕ್ಕೆ ಬಂದಾಗ ನಮ್ಮ ಸಮಾಜದವರು ತ್ಯಾಗ ಮಾಡಿದ್ದಾರೆ. ನಮ್ಮ ಸಮಾಜದ ಭಾವನೆಗಳ ಬಗ್ಗೆ ಅವರು ಮಾತನಾಡಿದ್ದರು. ಆದರೆ, ಮೀಸಲಾತಿ ನೀಡುವ ವಿಚಾರದಲ್ಲಿ ಅವರು ವಿಳಂಬ ಮಾಡುತ್ತಿದ್ದಾರೆ.

 

 ಮೀಸಲಾತಿ ಹೋರಾಟಕ್ಕೆ ಸಮುದಾಯದ ಮಹಾನ್‌ ವ್ಯಕ್ತಿಯೊಬ್ಬರು ಅಡ್ಡಿ, ಕೂಡಲ ಸಂಗಮ ಸ್ವಾಮೀಜಿ ಆರೋಪ!

ಯಾರೋ ಒಬ್ಬ ವ್ಯಕ್ತಿ ಇದರ ಹಿಂದಿದ್ದಾರೆ. ಸೆ. 20ರ ಹೋರಾಟದ ಸಂದರ್ಭದಲ್ಲಿ ಆ ವ್ಯಕ್ತಿಯ ಹೆಸರನ್ನು ಬಹಿರಂಗ ಮಾಡುತ್ತೇನೆ ಎಂದು ಸ್ವಾಮೀಜಿ ಈ ಹಿಂದೆ ಹೇಳಿದ್ದರು ಅದರಂತೆ ಬಿಎಸ್‌ವೈ ಹೆಸರನ್ನು ಬಹಿರಂಗ ಮಾಡಿದ್ದಾರೆ. ಮೀಸಲಾತಿ ವಿಚಾರವಾಗಿ ಸದನದ ಒಳಗೂ ಹೋರಾಟ ನಡೆಯಲಿದೆ. ಸಮಾಜದ ಶಾಸಕರು ಸದನದಲ್ಲಿ ಈ ವಿಚಾರ ಪ್ರಸ್ತಾಪಿಸಲಿದ್ದಾರೆ. ನಾವು ಹೊರಗೆ ಹೋರಾಟ ಮಾಡುತ್ತೇವೆ ಎಂದು ಸ್ವಾಮೀಜಿ ಈಗಾಗಲೇ ಹೇಳಿದ್ದಾರೆ.

Follow Us:
Download App:
  • android
  • ios