* ಕೊರೋನದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ “ಚಿಣ್ಣರ ಧಾಮ” * ಬೆಟ್ಟಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2 ಎಕರೆಯಲ್ಲಿ ತಲೆ ಎತ್ತಲಿದೆ ಕೇಂದ್ರ* ಬೆಂಗಳೂರು ವಿಮಾನ ನಿಲ್ದಾಣ ಫೌಂಡೇಶನ್‌ನಿಂದ ನಿರ್ಮಾಣ

ಬೆಂಗಳೂರು, (ಅ.21): ಕೋವಿಡ್ ಸಾಂಕ್ರಮಿಕದಿಂದ (Coroanvirus) ಪೋಷಕರನ್ನು ಕಳೆದುಕೊಂಡ ಮಕ್ಕಳ ಆರೈಕೆಗಾಗಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Bangalore Airport Foundation), ಫೇರ್‌ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ಹಾಗೂ ಸ್ಪರ್ಶಾ ಟ್ರಸ್ಟ್ ವತಿಯಿಂದ “ಚಿಣ್ಣರ ಧಾಮ” ನಿರ್ಮಾಣ ಮಾಡಲಾಗುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದೆರಡು ವರ್ಷಗಳಿಂದ ಕೋವಿಡ್-19 ದಾಳಿಯಿಂದಾಗಿ ಲಕ್ಷಾಂತರ ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ. ರಾಜ್ಯದಲ್ಲೂ ಕೂಡ ಇಬ್ಬರೂ ಪೋಷಕರು ಅಥವಾ ಒಬ್ಬ ಪೋಷಕರನ್ನು ಕಳೆದುಕೊಂಡ ಮಕ್ಕಳು ಸಂಕಷ್ಟದಲ್ಲಿದ್ದಾರೆ. ಅಂತಹ ಮಕ್ಕಳ ಭವಿಷ್ಯವೀಗ ಆತಂಕದಲ್ಲಿದ್ದು, ಹಣಕಾಸು ನೆರವು, ಮಾನಸಿಕ ಸ್ಥೈರ್ಯ ಈ ಮಕ್ಕಳಿಗೆ ಬೇಕಾಗಿದೆ. ಈ ದೃಷ್ಟಿಯಿಂದ ರಾಜ್ಯ ವಿವಿಧ ಜಿಲ್ಲೆಗಳಿಂದ ಆಯ್ದ 300 ಹೆಣ್ಣುಮಕ್ಕಳಿಗೆ 12ನೇ ತರಗತಿವರೆಗೆ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ತರಬೇತಿಯನ್ನು ನೀಡಲು ‘ಚಿಣ್ಣರ ಧಾಮ' (Chinara Dhama )ಎಂಬ ಸುಸಜ್ಜಿತ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ.

ಕೊರೋನಾದಿಂದ ಹೆತ್ತವರನ್ನ ಕಳೆದುಕೊಂಡ ಮಕ್ಕಳಿಗೆ ಮಹತ್ವದ ಯೋಜನೆ ಘೋಷಿಸಿದ ಸಿಎಂ

ಈ ಧಾಮದಲ್ಲಿ ವಸತಿ, ಕಲಿಕೆಗೆ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಕೂಡ ಅಭಿವೃದ್ಧಿಪಡಿಸಲಾಗುತ್ತಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನ (ಬಿಐಎಎಲ್) ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ವಿಭಾಗವಾದ ಕೆಐಎಎಫ್ ಈ ಧಾಮ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದೆ. ಕೆಐಎಫ್‌ನ ಮಹತ್ವಾಕಾಂಕ್ಷಿ ಮತ್ತು ಯಶಸ್ವಿ ಕಾರ್ಯಕ್ರಮಗಳಲ್ಲಿ ಒಂದಾದ 'ನಮ್ಮ ಶಿಕ್ಷಣ ' (Namma Education) ಅಡಿಯಲ್ಲಿ ಚಿಣ್ಣರ ಧಾಮವನ್ನು ನಿರ್ವಹಿಸಲಾಗುತ್ತಿದೆ.

ಈ ಬಗ್ಗೆ ವಿವರಿಸಿರುವ ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್ ಅವರು, " ಎಷ್ಟೋ ಮಕ್ಕಳ ಜೀವನ ಕೊರೊನಾ ಸಾಂಕ್ರಮಿಕದಿಂದ ಅತಂತ್ರವಾಗಿದೆ. ಅವರಿಗೆ ನೆರವಾಗುವ ದೃಷ್ಟಿಯಿಂದ ಚಿಣ್ಣರ ಧಾಮ ನಿರ್ಮಿಸುತ್ತಿದ್ದೇವೆ. ಬೆಂಗಳೂರು ಏರ್‌ಪೋರ್ಟ್ ಬಳಿಯ ಬೆಟ್ಟಕೋಟೆ ಎಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಎಕರೆ ಪ್ರದೇಶದಲ್ಲಿ ಚಿಣ್ಣರ ಧಾಮ ನಿರ್ಮಾಣಗೊಳ್ಳಲಿದೆ. ಇದರ ನಿರ್ವಹಣೆಯನ್ನು ಕಾರ್ಪೊರೇಟ್ ಅಧಿಕಾರಿಗಳು, ಮಾಜಿ ಸೇನಾಧಿಕಾರಿಗಳು, ಸಮಾಜಸೇವಕರ ತಂಡವೊಂದು ವಹಿಸಿಕೊಳ್ಳಲಿದೆ ಎಂದರು.

 46,000 ಚ.ಅಡಿಗಳಲ್ಲಿ ನಿರ್ಮಾಣವಾಗುತ್ತಿರುವ ಈ ಧಾಮವು ಮೊದಲ ಹಂತದ ನಿರ್ಮಾಣ ಕಾಮಗಾರಿ 2021ರ ಅಕ್ಟೋಬರ್ ಅಂತ್ಯಕ್ಕೆ ಪೂರ್ಣಗೊಳ್ಳುತ್ತಿದೆ. ಶಿಕ್ಷಣ ಕೇಂದ್ರ, ಆರೋಗ್ಯ ಸೇವೆಗಳು, ಕೌಶಲ ಅಭಿವೃದ್ಧಿ ತರಬೇತಿಗೆ ಅಗತ್ಯ ಮೂಲಸೌಕರ್ಯವನ್ನು ಈ ಧಾಮದಲ್ಲಿ ಒದಗಿಸಿಕೊಡಲಾಗುವುದು ಎಂದು ತಿಳಿಸಿದರು.

ಸ್ಟರ್ಶಾ ಟ್ರಸ್ಟ್‌ನ ಆಡಳಿತ ಮಂಡಳಿ ಸದಸ್ಯರಾದ ಜಿ. ರಾಘವನ್ ಮಾತನಾಡಿ, ತಮ್ಮ ಮಕ್ಕಳ ಜೀವನವನ್ನು ಉಜ್ವಲವಾಗಿ ರೂಪಿಸಬೇಕು ಎಂದು ಕನಸು ಕಟ್ಟಿದ್ದ ಪೋಷಕರು ಕನಸನ್ನು ನನಸು ಮಾಡಲು ನಮ್ಮ ಸಂಸ್ಥೆ ನೆರವಾಗುತ್ತಿದೆ ಎಂದರು.