ಎಐ ತಂತ್ರಜ್ಞಾನ ಬಳಸಿ ಹುಲಿಯ ಇರುವಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಗಳನ್ನು ಹರಿಬಿಡುತ್ತಿರುವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.
ಚಾಮರಾಜನಗರ (ನ.14): ಎಐ ತಂತ್ರಜ್ಞಾನ ಬಳಸಿ ಹುಲಿಯ ಇರುವಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಗಳನ್ನು ಹರಿಬಿಡುತ್ತಿರುವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ. ಬಂಡೀಪುರ ಹುಲಿ ಸಂರಕ್ಷಿತ ಪುದೇಶದ ವಿವಿಧ ವಲಯಗಳ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಸರಹದ್ದಿನಲ್ಲಿ ಹುಲಿಗಳು ಕಾಣಿಸಿಕೊಂಡು ಉಪಟಳ ನೀಡುತ್ತಿದ್ದ ಹಿನ್ನೆಲೆಯಲ್ಲಿ, ಈಗಾಗಲೇ ಸತತ ಕಾರ್ಯಚರಣೆ ಮೂಲಕ ಹೆಡಿಯಾಲ ಉಪ-ವಿಭಾಗದ ವ್ಯಾಪ್ತಿಯಲ್ಲಿ 05 ಹುಲಿಗಳನ್ನು ಸುರಕ್ಷಿತವಾಗಿ ಸೆರೆಹಿಡಿದು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಇದಾದ ಬಳಿಕ ಬರುತ್ತಿರುವ ಮಾಹಿತಿಗಳನ್ನು ಆಧರಿಸಿ ಸ್ಥಳಕ್ಕೆ ತೆರಳುವ ಸಿಬ್ಬಂದಿ ತಂಡ ಪರಿಶೀಲನೆ ನಡೆಸಿದರೂ ಯಾವುದೇ ಸಣ್ಣ ಕುರುಹುಗಳು ಪತ್ತೆಯಾಗಿರುವುದಿಲ್ಲ. ಹೀಗಿದ್ದರೂ ಎಐ ತಂತ್ರಜ್ಞಾನ ಬಳಸಿ ಹುಲಿಯ ಇರುವಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ಕಿಡಿಕಾರಿದೆ. ಎಐ ಹುಲಿ ಫೋಟೋ ಹಂಚಿಕೆ ಆಗುತ್ತಿರುವುದರಿಂದ ಭಯಬೀತರಾಗುವ ರೈತರು ಹೊಲ ಗದ್ದೆ, ಮನೆಗಳಿಗೆ ತೆರಳಲು ಹಿಂಜರಿಯುತ್ತಿದ್ದಾರೆ.
ಸುಳ್ಳು ಮಾಹಿತಿ ಹಂಚಿಕೊಳ್ಳಬಾರದು
ಅಲ್ಲದೇ ನಾವು ಸುಳ್ಳು ಮಾಹಿತಿಗಳಿಂದ ಸಮರ್ಪಕವಾಗಿ ಕೆಲಸ ನಿರ್ವಹಿಸಲು ತೊಂದರೆಯಾಗುತ್ತಿದೆ. ಅಲ್ಲದೇ ನೈಜ ಸಮಸ್ಯೆ ಇರುವ ಕಡೆ ಗಮನ ಹರಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಸುಳ್ಳು ಸಂದೇಶ ಕಳುಹಿಸುವ ಮತ್ತು ಹಂಚಿಕೊಳ್ಳುವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲು ಕ್ರಮವಹಿಸಲಾಗಿರುತ್ತದೆ ಎಂದು ಎಚ್ಚರಿಸಿದೆ. ಸುಳ್ಳು ಸಂದೇಶ ಮತ್ತು ಇದಕ್ಕೆ ಪುಷ್ಟಿಕರಣ ನೀಡುವ ಸುಳ್ಳು ಮಾಹಿತಿ ಹಂಚಿಕೊಳ್ಳಬಾರದು ಎಂದು ಇಲಾಖೆಯು ಎಚ್ಚರಿಕೆ ಸಂದೇಶ ನೀಡಿದೆ.
