ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಪವನ್ ನೆಜ್ಜೂರು ಆತ್ಮ*ಹತ್ಯೆ ಯತ್ನ ಮಾಡಿಲ್ಲವೆಂದು ಅವರ ತಂದೆ ಉದಯಶಂಕರ್ ನೆಜ್ಜೂರು ಸ್ಪಷ್ಟಪಡಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ನಡೆದ ಗಲಭೆ ಮತ್ತು ಅನಿರೀಕ್ಷಿತ ಅಮಾನತಿನಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು/ಬಳ್ಳಾರಿ (ಜ.04): ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಪವನ್ ನೆಜ್ಜೂರು ಅವರ ಕುರಿತು ಸಾಮಾಜಿಕ ಜಾಲತಾಣ ಹಾಗೂ ಕೆಲವು ಮಾಧ್ಯಮಗಳಲ್ಲಿ ಹರಡುತ್ತಿರುವ ಆತ್ಮ*ಹತ್ಯೆ ಯತ್ನದ ಸುದ್ದಿಗಳು ಸಂಪೂರ್ಣ ಸುಳ್ಳು ಮತ್ತು ಕಪೋಲಕಲ್ಪಿತ ಎಂದು ಅವರ ತಂದೆ ಶ್ರೀ ಉದಯಶಂಕರ್ ನೆಜ್ಜೂರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, 'ನನ್ನ ಮಗ 2016ನೇ ಸಾಲಿನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದು, ಇಲಾಖೆಯಲ್ಲಿ ಶಿಸ್ತು ಮತ್ತು ದಕ್ಷತೆಗೆ ಹೆಸರಾಗಿದ್ದಾನೆ. ಬಳ್ಳಾರಿಯಲ್ಲಿ ನಡೆದ ಅಹಿತಕರ ಘಟನೆಯ ನಂತರ ಆತನ ಬಗ್ಗೆ ಇಲ್ಲಸಲ್ಲದ ವದಂತಿಗಳನ್ನು ಹರಡುತ್ತಿರುವುದು ನಮ್ಮ ಕುಟುಂಬಕ್ಕೆ ತೀವ್ರ ಬೇಸರ ಮೂಡಿಸಿದೆ' ಎಂದು ತಿಳಿಸಿದ್ದಾರೆ.
ಘಟನೆಯ ಸತ್ಯಾಂಶ:
ಪವನ್ ನೆಜ್ಜೂರು ಅವರು ಜನವರಿ 1ರಂದು ಬಳ್ಳಾರಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಸಂಪ್ರದಾಯದಂತೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ, ಲೋಕಾಯುಕ್ತ ಪೊಲೀಸರು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ನಗರದಲ್ಲಿ ಗಲಭೆ ಸಂಭವಿಸಿತು. ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪವನ್, ಪರಿಸ್ಥಿತಿ ನಿಭಾಯಿಸಲು ಶ್ರಮಿಸಿದರು. ಬೆಳಗಿನ ಜಾವದವರೆಗೂ ಮೃತರ ಅಂತ್ಯಕ್ರಿಯೆಯ ಬಂದೋಬಸ್ತ್ನಲ್ಲಿ ಸಕ್ರಿಯರಾಗಿದ್ದರು ಎಂಬುದು ಅಲ್ಲಿನ ಜನರಿಗೆ ತಿಳಿದಿದೆ ಎಂದು ಉದಯಶಂಕರ್ ನೆಜ್ಜೂರು ವಿವರಿಸಿದ್ದಾರೆ.
ವದಂತಿಗಳಿಗೆ ಕಿವಿಗೊಡಬೇಡಿ
'ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಇಂತಹ ಘಟನೆ ನಡೆದದ್ದು ಮತ್ತು ಅನಿರೀಕ್ಷಿತವಾಗಿ ಅಮಾನತು ಶಿಕ್ಷೆ ಎದುರಿಸಬೇಕಾಗಿ ಬಂದದ್ದು ಆತನಿಗೆ ಆಘಾತ ತಂದಿರುವುದು ನಿಜ. ಆದರೆ, ಆತ ಯಾವುದೇ ಕಾರಣಕ್ಕೂ ಆತ್ಮ*ಹತ್ಯೆಯಂತಹ ಹೇಡಿತನದ ಪ್ರಯತ್ನ ಮಾಡಿಲ್ಲ. ಅತೀವ ಮಾನಸಿಕ ಒತ್ತಡದ ಕಾರಣ ಆತನಿಗೆ ಸದ್ಯ ವಿಶ್ರಾಂತಿಯ ಅಗತ್ಯವಿದೆ. ಆದರೆ ಮಾಧ್ಯಮಗಳಲ್ಲಿ ಬರುತ್ತಿರುವ ಸುಳ್ಳು ಸುದ್ದಿಗಳು ಆತನ ಭವಿಷ್ಯ ಮತ್ತು ಮರ್ಯಾದೆಗೆ ಧಕ್ಕೆ ತರುತ್ತಿವೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಕಾರಕ್ಕೆ ಮನವಿ
ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೂ ಅಮಾನತು ಶಿಕ್ಷೆ ಅನುಭವಿಸುತ್ತಿರುವ ತನ್ನ ಮಗನ ಪ್ರಕರಣವನ್ನು ಸರ್ಕಾರ ಮರುಪರಿಶೀಲಿಸಬೇಕು ಎಂದು ಉದಯಶಂಕರ್ ವಿನಂತಿಸಿದ್ದಾರೆ. ಸಾರ್ವಜನಿಕರು ಮತ್ತು ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಹರಡದೆ, ಒಬ್ಬ ದಕ್ಷ ಅಧಿಕಾರಿಯ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕೆಂದು ಈ ಮೂಲಕ ಮನವಿ ಮಾಡಿದ್ದಾರೆ.


