ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸದ ಎದುರು ನಡೆದ ಗುಂಡಿನ ಚಕಮಕಿ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಸತೀಶ್ ರೆಡ್ಡಿ ಜೊತೆಗಿದ್ದ ಪಂಜಾಬ್ ಮೂಲದ ಇಬ್ಬರು ಗನ್ಮ್ಯಾನ್ಗಳೇ ಗುಂಡು ಹಾರಿಸಿದ್ದು, ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಬಳ್ಳಾರಿ (ಜ.04): ಗಣಿ ನಾಡು ಬಳ್ಳಾರಿಯ ಸಿರುಗುಪ್ಪ ರಸ್ತೆಯಲ್ಲಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸದ ಎದುರು ನಡೆದ ಬ್ಯಾನರ್ ಗಲಾಟೆ ಮತ್ತು ಗುಂಡಿನ ಚಕಮಕಿ ಪ್ರಕರಣಕ್ಕೆ ಈಗ ಮಹತ್ವದ ತಿರುವು ಸಿಕ್ಕಿದೆ. ಈ ಘರ್ಷಣೆಯಲ್ಲಿ ಗುಂಡು ಹಾರಿಸಿದ್ದು ಸತೀಶ್ ರೆಡ್ಡಿ ಜೊತೆಗಿದ್ದ ಗನ್ ಮ್ಯಾನ್ಗಳೇ ಎಂಬ ಸಂಶಯ ಇದೀಗ ಖಚಿತವಾಗುತ್ತಿದೆ. ಇದರ ಬೆನ್ನಲ್ಲಿಯೇ ಪಂಜಾಬ್ ಮೂಲದ ಇಬ್ಬರು ಗನ್ ಮ್ಯಾನ್ಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಸತೀಶ್ ರೆಡ್ಡಿ ಶಾಸಕ ಭರತ್ ರೆಡ್ಡಿಯ ಪರಮಾಪ್ತನಾಗಿದ್ದಾನೆ. ಈತ ಯಾವುದೇ ಜನಪ್ರತಿನಿಧಿ ಅಲ್ಲದಿದ್ದರೂ ಅಷ್ಟೊಂದು ಜನ ಗನ್ ಮ್ಯಾನ್ಗಳನ್ನು ಇಟ್ಟುಕೊಂಡಿದ್ದೇಕೆ ಎಂಬುದು ಭಾರೀ ಚರ್ಚೆಯಾಗುತ್ತಿದೆ.
ತನಿಖೆಯಲ್ಲಿ ಬಯಲಾದ ಸತ್ಯ
ಈ ಘಟನೆ ನಡೆದ ಸಂದರ್ಭದಲ್ಲಿ ಯಾರ ಗನ್ನಿಂದ ಬುಲೆಟ್ ಹಾರಿತು ಎಂಬ ಯಕ್ಷಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಂತಾಗಿದೆ. ಬಲಜಿತ್ ಸಿಂಗ್ ಮತ್ತು ಗುರುಚರಣ್ ಸಿಂಗ್ ಎಂಬ ಇಬ್ಬರು ಗನ್ ಮ್ಯಾನ್ಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು. ಇವರಿಬ್ಬರೂ ಪಂಜಾಬ್ ಮೂಲದವರಾಗಿದ್ದು, ಇವರ ಹಿನ್ನೆಲೆ ಹಾಗೂ ಯಾವ ಉದ್ದೇಶಕ್ಕಾಗಿ ಗುಂಡು ಹಾರಿಸಲಾಯಿತು ಎಂಬ ಬಗ್ಗೆ ತನಿಖೆ ತೀವ್ರಗೊಂಡಿದೆ. ಸತೀಶ್ ರೆಡ್ಡಿ ಅವರ ಜೊತೆಗಿದ್ದ ಒಟ್ಟು 6 ಜನ ಗನ್ ಮ್ಯಾನ್ಗಳಲ್ಲಿ ನಾಲ್ವರು ಘಟನಾ ಸ್ಥಳದಲ್ಲಿ ಹಾಜರಿದ್ದರು ಎನ್ನಲಾಗಿದೆ.
45 ಜನರ ತೀವ್ರ ವಿಚಾರಣೆ
ನಗರ ಡಿವೈಎಸ್ಪಿ ಚಂದ್ರಕಾಂತ ನಂದಾರೆಡ್ಡಿ ಹಾಗೂ ಬ್ರೂಸ್ಪೇಟೆ ಸಿಪಿಐ ಮಹಾಂತೇಶ್ ನೇತೃತ್ವದಲ್ಲಿ ತನಿಖೆ ಚುರುಕುಗೊಳಿಸಿತ್ತು. ಗನ್ ಮ್ಯಾನ್ಗಳೂ ಸೇರಿದಂತೆ ಘಟನೆಯಲ್ಲಿ ಭಾಗಿಯಾಗಿದ್ದ ಸುಮಾರು 45 ಜನರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ಎದುರಿಸುತ್ತಿರುವವರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಬೆಂಬಲಿತ ಯುವಕರಿದ್ದರು. ಸತೀಶ್ ರೆಡ್ಡಿ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಬಳಿ ಇರುವ ಉಳಿದ ಇಬ್ಬರು ಗನ್ ಮ್ಯಾನ್ಗಳ ಮೇಲೂ ಪೊಲೀಸರು ನಿಗಾ ಇಟ್ಟಿದ್ದರು.
ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ದುರ್ಘಟನೆ
ವಿಶೇಷವೆಂದರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪವನ್ ನೆಜ್ಜೂರ್ ಅವರು ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಈ ಅಹಿತಕರ ಘಟನೆ ನಡೆದಿತ್ತು. ಶಿಸ್ತಿನ ಅಧಿಕಾರಿಯೆಂದೇ ಹೆಸರಾದ ಪವನ್ ಅವರು ಘಟನೆ ನಡೆದ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದರೂ, ಅವರನ್ನು ಅಮಾನತು ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸದ್ಯ ಬಂಧಿತ ಗನ್ ಮ್ಯಾನ್ಗಳಿಂದ ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದ್ದು, ಅಧಿಕೃತ ಪೊಲೀಸ್ ಪ್ರಕಟಣೆ ಹೊರಬೀಳುವುದೊಂದೇ ಬಾಕಿ ಇದೆ.


