ಅಯೋಧ್ಯೆಯ ಬಾಲರಾಮನಿಗೆ ಪ್ರಾಣಪ್ರತಿಷ್ಠೆ ಬಳಿಕ ಮಂಡಲ ಪೂಜೆ ಮುಗಿಸಿ ಬಂದ ಪೇಜಾವರಶ್ರೀಗಳಿಗೆ ಉಡುಪಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಮಂಗಳೂರು ವಿಮಾನ ನಿಲ್ದಾಣದಿಂದ ಉಡುಪಿಯವರೆಗೂ ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ನೂರಾರು ಬೈಕ್‌ಗಳಲ್ಲಿ ರಾಲಿಯ ಮೂಲಕ ಬರಮಾಡಿಕೊಂಡ ಭಕ್ತರು.

ಉಡುಪಿ (ಮಾ.17): ಅಯೋಧ್ಯೆಯ ಬಾಲರಾಮನಿಗೆ ಪ್ರಾಣಪ್ರತಿಷ್ಠೆ ಬಳಿಕ ಮಂಡಲ ಪೂಜೆ ಮುಗಿಸಿ ಬಂದ ಪೇಜಾವರಶ್ರೀಗಳಿಗೆ ಉಡುಪಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಮಂಗಳೂರು ವಿಮಾನ ನಿಲ್ದಾಣದಿಂದ ಉಡುಪಿಯವರೆಗೂ ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ನೂರಾರು ಬೈಕ್‌ಗಳಲ್ಲಿ ರಾಲಿಯ ಮೂಲಕ ಕರೆದುಕೊಂಡ ಬಂದ ನಾಗರಿಕರು. ದಾರಿಯುದ್ದಕ್ಕೂ ಅಲ್ಲಲ್ಲಿ ಭಕ್ತರಿಂದ ಶ್ರೀಗಳಿಗೆ ಸನ್ಮಾನಿಸಿ ಗೌರವರ್ಪಣೆ ಸಲ್ಲಿಸಲಾಯಿತು. ಸಂಸ್ಕೃತ ಕಾಲೇಜಿನಿಂದ ರಥ ಬೀದಿಯವರೆಗೆ ವಿಶೇಷ ಮೆರವಣಿಗೆ ಮೂಲಕ ಕರೆತರಲಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಷ್ಠೆಯಾದ ಎರಡು ತಿಂಗಳ ಬಳಿಕ ಉಡುಪಿಗೆ ಬಂದ ಶ್ರೀಗಳು ಕೃಷ್ಣ ದರ್ಶನ ಮಾಡಿದರು. ಅನಂತೇಶ್ವರ, ಚಂದ್ರಮೌಳೇಶ್ವರ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಪರ್ಯಾಯ ಪುತ್ತಿಗೆ ಶ್ರೀಗಳು ವಿಶೇಷವಾಗಿ ಗೌರವಿಸಿದರು.

ಕೃಷ್ಣಮಠದಲ್ಲಿ ಶ್ರೀಗಳಿಗೆ ಸನ್ಮಾನ:

ಎರಡು ತಿಂಗಳ ಬಳಿಕ ಅಯೋಧ್ಯೆಯಿಂದ ಉಡುಪಿಗೆ ಬಂದ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥರಿಗೆ ಕೃಷ್ಣಮಠದ ರಾಜಾಂಗಣದಲ್ಲಿ ಅದ್ದೂರಿ ಕಾರ್ಯಕ್ರಮದಲ್ಲಿ ಅಭಿನವ ಆಂಜನೇಯ ಬಿರುದು ನೀಡಿ ಸನ್ಮಾನಿಸಲಾಯಿತು. ರಾಮಮಂದಿರದ ಕನಸು ಈಡೇರುತ್ತಿದ್ದಂತೆ ಕೃಷ್ಣನ ಮೂಲಸ್ಥಾನ ಮಥುರಾವೂ ಮುಕ್ತವಾಗಲಿ ಎಂದು ಸಮಾರಂಭದಲ್ಲಿ ಭಾಗವಹಿಸಿದ್ದ ಮಠಾಧೀಶರು ಆಶಯ ವ್ಯಕ್ತಪಡಿಸಿದರು. 

ರಾಮಮಂದಿರ ನಿರ್ಮಾಣದಲ್ಲಿ ಪೇಜಾವರ ಶ್ರೀಗಳ ಪ್ರಯತ್ನ ಬಹಳ ಇದೆ: ಕಾಣಿಯೂರು ಶ್ರೀ

ರಾಮಮಂದಿರ ನಿರ್ಮಾಣ, ಹೋರಾಟದಲ್ಲಿ ಉಡುಪಿ ಕೃಷ್ಣಮಠ ಮಹತ್ವದ ಪಾತ್ರವಹಿಸಿತ್ತು. ತಾಲಾಖೋಲೋ ಅಭಿಯಾನ ಹಾಗೂ ರಾಮಮಂದಿರ ನಿರ್ಮಾಣದ ಮಹತ್ವದ ನಿರ್ಣಯ ಕೈಗೊಂಡಿದ್ದು ಉಡುಪಿಯಲ್ಲಿ. ಇಲ್ಲಿ ನಡೆದ ಎರಡು ಧರ್ಮ ಸಂಸತ್ತುಗಳಲ್ಲಿ ರಾಮಮಂದಿರ ಕಟ್ಟುವ ಕುರಿತು ಮಹತ್ವದ ನಿರ್ಣಯ ಕೈಗೊಂಡಿತು. ಸಮಾರಂಭದಲ್ಲಿ ಪೇಜಾವರ ಮಠದ ವಿಶ್ವೇಶ ತೀರ್ಥರನ್ನು ನೆನದ ಮಠಾಧೀಶರು.

ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಬಳಿಕ ಮಾತನಾಡಿದ ಪೇಜಾವರ ಶ್ರೀಗಳು, ಅಯೋಧ್ಯೆಯ ಎಲ್ಲಾ ಬೆಳವಣಿಗೆಗಳಿಗೆ ಉಡುಪಿ ಕೃಷ್ಣನೇ ಮೂಲ ಪ್ರೇರಣೆ. ಅಯೋದ್ಯೆಯಲ್ಲಿ ನಡೆಸಿದ ಎಲ್ಲಾ ಸತ್ಕಾರ್ಯಗಳನ್ನು ಕೃಷ್ಣನಿಗೆ ಅರ್ಪಿಸಿದ್ದೇನೆ. ಮಥುರಾ ವಿಮೋಚನೆಗೂ ಕೃಷ್ಣನ ಪ್ರೇರಣೆಯಾಗಲಿ. ಮುಖ್ಯಪ್ರಾಣ ದೇವರ ಶಕ್ತಿ ಮಥುರಾ ವಿಚಾರದಲ್ಲೂ ಕೆಲಸ ಮಾಡಲಿ. ಆದಷ್ಟು ಬೇಗ ಮಥುರ ಕ್ಷೇತ್ರದ ವಿಮೋಚನೆಯಾಗಲಿಎಂದು ಆಶಿಸಿದರು.

ರಾಮಮಂದಿರ ಚುನಾವಣಾ ವಿಚಾರ ಪ್ರಸ್ತಾಪಿಸಿದ ಶ್ರೀಗಳು, ಎಲ್ಲ ಪಕ್ಷದವರು ರಾಮಮಂದಿರ ವಿಚಾರದಲ್ಲಿ ಪ್ರಚಾರ ತೆಗೆದುಕೊಳ್ಳಲಿ. ವಿಶ್ವೇಶ ತೀರ್ಥರು ಉಡುಪಿ ಹಾಗೂ ಅಯೋಧ್ಯೆಯಲ್ಲಿ ವಿಶೇಷ ಸೇವೆ ಮಾಡಿದ್ದಾರೆ ಅದರ ಫಲವನ್ನು ನಾವು ಅನುಭವಿಸುತ್ತಿದ್ದೇವೆ ಎಂದರು.

ಪರ್ಯಾಯ ಮಠದ ಪುತ್ತಿಗೆ ಶ್ರೀಗಳು ಮಾತನಾಡಿ, ಪೇಜಾವರ ಶ್ರೀಗಳು ಅಯೋಧ್ಯ ಪೂಜೆ ಕೈಗೊಂಡಿರುವುದು ಸಂತ ಸಮಾಜಕ್ಕೆ ಸಂತೋಷದ ವಿಚಾರವಾಗಿದೆ. ಪರ್ಯಾಯ ಮಠದಿಂದ ಅವರಿಗೆ ಸನ್ಮಾನ ಮಾಡುತ್ತಿದ್ದೇವೆ. ಅಯೋಧ್ಯೆಯ ಎಲ್ಲಾ ಘಟನೆಗಳಿಗೂ ಉಡುಪಿಯಲ್ಲಿ ಮುಹೂರ್ತ ನಿಗದಿಯಾಗಿದ್ದು. ಉಡುಪಿಯಿಂದಲೇ ಸಾಲ ಕೋಲೋ ಅಭಿಯಾನ ಪ್ರಾರಂಭವಾಗಿತ್ತು. ಜೈಲಿನಲ್ಲಿದ್ದ ರಾಮದೇವರ ಕೊಠಡಿಯ ಬೀಗವನ್ನು ಒಡೆಯುವ ಸೌಭಾಗ್ಯ ನಮ್ಮದಾಗಿತ್ತು. ಈ ಧಾರ್ಮಿಕ ಕ್ರಾಂತಿಗೆ ಮೂಲ ಉಡುಪಿಯಲ್ಲಿದೆ. ಅಯೋಧ್ಯೆಯ ಹನುಮಂತ ಉಡುಪಿಯಲ್ಲಿ ಪ್ರತಿಷ್ಠಾಪಿತನಾಗಿದ್ದಾನೆ, ಅವನ ಪ್ರೇರಣೆಯಿಂದಲೇ ಉಡುಪಿಯ ಶ್ರೀಗಳು ರಾಮಮಂದಿರ ಹೋರಾಟದಲ್ಲಿ ಸಕ್ರಿಯರಾಗಿದ್ದಾರೆ. ವಿಶ್ವ ಪ್ರಸನ್ನ ತೀರ್ಥರ ಮುಖಾಂತರ ಪ್ರಾಣ ಪ್ರತಿಷ್ಠೆಯಾಗಿದೆ ಎಂದರು.

ಮನೆಯಲ್ಲಿ ಶ್ರೀರಾಮ ಉತ್ಸವ ನಿತ್ಯ ನಡೆಯಲಿ: ಪೇಜಾವರ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ

ರಾಮಮಂದಿರದಲ್ಲಿ ಕರ್ನಾಟಕದ ಕೊಡುಗೆ ದೊಡ್ಡದು. ಕರ್ನಾಟಕದ ಶಿಲ್ಪಿಗಳೇ ರಾಮದೇವರ ವಿಗ್ರಹ ರಚಿಸಿದ್ದಾರೆ. ಈ ಎಲ್ಲಾ ಕಾರ್ಯದ ಹಿಂದೆ ಆಂಜನೇಯನ ಶಕ್ತಿಯಿದೆ. ಆಂಜನೇಯ ಕನ್ನಡಿಗ ಕರ್ನಾಟಕದಲ್ಲಿ ಅವತರಿಸಿದ ದೇವರು. ಎಲ್ಲಾ ಕಾರ್ಯಗಳು ಕನ್ನಡಿಗರಿಂದ ಆಗುವಂತೆ ಆಂಜನೇಯ ಹರಸಿದ್ದಾನೆ. ಉಡುಪಿಯಲ್ಲಿ ಅಯೋಧ್ಯೆಯಿಂದ ಬಂದ ಮುಖ್ಯ ಪ್ರಾಣ ದೇವರಿದ್ದಾರೆ ವಿಶ್ವೇಶ ತೀರ್ಥರಿಗೂ ವಿಶ್ವ ಪ್ರಸನ್ನ ತೀರ್ಥರಿಗೂ ಇದೇ ಆಂಜನೇಯನ ಪ್ರೇರಣೆ. ಹೀಗಾಗಿ ವಿಶ್ವ ಪ್ರಸನ್ನ ತೀರ್ಥರಿಗೆ ಅಭಿನವ ಆಂಜನೇಯ ಬಿರುದು ನೀಡುತ್ತಿದ್ದೇವೆ. ಆಂಜನೇಯ ಹೋಗಿ ರಾಮದೇವರ ಪ್ರತಿಷ್ಠೆ ಮಾಡಿ ಬಂದಂತಾಗಿದೆ ಎಂದರು.