ರಸ್ತೆಯಲ್ಲಿ ಹೋಗುವಾಗ ದಾರಿ ಬಿಡುವಂತೆ ಹಾರನ್‌ ಮಾಡಿದ್ದಕ್ಕೆ ಸಾಫ್‌್ಟವೇರ್‌ ಉದ್ಯೋಗಿಯೊಬ್ಬರನ್ನು ಅಡ್ಡಗಟ್ಟಿಪುಂಡಾಟಿಕೆ ನಡೆಸಿದ್ದ ಮೂವರು ಕಿಡಿಗೇಡಿಗಳನ್ನು ವರ್ತೂರು ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬೆಂಗಳೂರು (ಜು.15) :  ರಸ್ತೆಯಲ್ಲಿ ಹೋಗುವಾಗ ದಾರಿ ಬಿಡುವಂತೆ ಹಾರನ್‌ ಮಾಡಿದ್ದಕ್ಕೆ ಸಾಫ್‌್ಟವೇರ್‌ ಉದ್ಯೋಗಿಯೊಬ್ಬರನ್ನು ಅಡ್ಡಗಟ್ಟಿಪುಂಡಾಟಿಕೆ ನಡೆಸಿದ್ದ ಮೂವರು ಕಿಡಿಗೇಡಿಗಳನ್ನು ವರ್ತೂರು ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಸರ್ಜಾಪುರ ರಸ್ತೆಯ ದೊಮ್ಮಸಂದ್ರದ ರವೀಂದ್ರ, ಕೇಶವ ಹಾಗೂ ಗಣೇಶ ಬಂಧಿತರಾಗಿದ್ದು, ಗುಂಜೂರು ಸಮೀಪದ ಡಿಎಸ್‌ಆರ್‌ ರಿವೇರಾ ರಸ್ತೆಯಲ್ಲಿ ಸಾಫ್‌್ಟವೇರ್‌ ಉದ್ಯೋಗಿ ಅಶೋಕ್‌ ಅವರನ್ನು ಗುರುವಾರ ಮಧ್ಯಾಹ್ನ ಅಡ್ಡಗಟ್ಟಿಆರೋಪಿಗಳು ದುಂಡಾವರ್ತನೆ ತೋರಿಸಿದ್ದರು. ಈ ಬಗ್ಗೆ ಟ್ವೀಟರ್‌ನಲ್ಲಿ ಪೊಲೀಸರಿಗೆ ಟೆಕ್ಕಿ ದೂರು ನೀಡಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ವರ್ತೂರು ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗೃಹಜ್ಯೋತಿ ಎಫೆಕ್ಟ್: ಕರೆಂಟ್ ಬಿಲ್ ಕೊಡಲು ಹೋದ ಬೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ

ಸರ್ಜಾಪುರ ರಸ್ತೆಯ ಸಾಫ್‌್ಟವೇರ್‌ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಅಶೋಕ್‌ ಅವರು, ತಮ್ಮ ಕುಟುಂಬದ ಜತೆ ವರ್ತೂರಿನಲ್ಲಿ ನೆಲೆಸಿದ್ದಾರೆ. ಎಂದಿನಂತೆ ಕೆಲಸ ಮುಗಿಸಿಕೊಂಡು ಕಾರಿನಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಡಿಎಸ್‌ಆರ್‌ ರಿವೇರಾ ಹೊಸ ರಸ್ತೆಯಲ್ಲಿ ಅವರು ಮನೆಗೆ ಮರಳುತ್ತಿದ್ದರು. ಆಗ ಗುಂಜೂರು ಸಮೀಪ ಕಾರಿನ ಮುಂದೆ ಸ್ಕೂಟರ್‌ಗಳಲ್ಲಿ ಬಂದ ಆರೋಪಿಗಳಿಗೆ ದಾರಿ ಬಿಡುವಂತೆ ಅಶೋಕ್‌ ಹಾರನ್‌ ಮಾಡಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಆರೋಪಿಗಳು, ಕಾರಿನ ಮುಂದೆ ಸ್ಕೂಟರ್‌ ನಿಲ್ಲಿಸಿ ಗಲಾಟೆ ಶುರು ಮಾಡಿದ್ದಾರೆ. ಕೂಡಲೇ ಕಾರನ್ನು ರಿವರ್ಸ್‌ ತೆಗೆದುಕೊಂಡು ಅಶೋಕ್‌ ಪರಾರಿಯಾಗಿದ್ದರು. ಈ ಘಟನೆ ವಿಡಿಯೋವು ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಾವಳಿ ಆಧರಿಸಿ ಪೊಲೀಸರಿಗೆ ಅಶೋಕ್‌ ದೂರು ಸಲ್ಲಿಸಿದರು. ಈ ಬಂಧಿತ ಆರೋಪಿಗಳು ಡೆಲಿವರಿ ಬಾಯ್‌ಗಳಾಗಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.