ಮತ್ತೊಬ್ಬ ನಟನಿಗೂ ಅರುಣಾ ವಂಚನೆ: 'ಹೀರೋ ಮಾಡೋದಾಗಿ ಭರವಸೆ ನೀಡಿ ಮೋಸ'
* ಅರುಣಾ ಕುಮಾರಿ ಬಗ್ಗೆ ದರ್ಶನ್ ಹಾಗೂ ಉಮಾಪತಿಗೆ ಹೇಳಿದ್ದೇನೆ: ಪ್ರಸಾದ್
* ಅರುಣಾ ಮಾತು ನಂಬಿ ನಾನು ಮೋಸ ಹೋಗಿದ್ದೆ: ನಾಗವರ್ಧನ್
* ಈ ಬಗ್ಗೆ ಪೊಲೀಸರಿಗೆ ದೂರು
ಬೆಂಗಳೂರು(ಜು.14): ನಟ ದರ್ಶನ್ ಅವರಿಗೆ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಸಾಲದ ಹೆಸರಿನಲ್ಲಿ ವಂಚನೆ ಯತ್ನಿಸಿದ್ದ ಅರುಣಾ ಕುಮಾರಿ, ಸಿನಿಮಾ ಹೀರೋ ಮಾಡಿಸುವುದಾಗಿ ನಟರೊಬ್ಬರಿಗೆ ಮೋಸ ಮಾಡಿದ್ದರು ಎಂದು ಖ್ಯಾತ ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್ ಆರೋಪಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಹದಿನೈದು ವರ್ಷಗಳಿಂದ ಪರಿಚಯವಿರುವ ನಾಗವರ್ಧನ್ ಅವರಿಗೆ ಸಹ ಹೀರೋ ಮಾಡುತ್ತೇನೆಂದು ನಂಬಿಸಿ ಆಕೆ ಮೋಸ ಮಾಡಿದ್ದಳು ಎಂದರು.
ಈ ಮೋಸದ ವಿಚಾರವನ್ನು ದರ್ಶನ್ ಹಾಗೂ ಉಮಾಪತಿ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದ್ದೇವೆ. ಆಕೆಯ ವಂಚನೆಗಳ ಬಗ್ಗೆ ಸಮಗ್ರ ತನಿಖೆಗೆ ಇಬ್ಬರು ಸಹಮತ ವ್ಯಕ್ತಪಡಿಸಿದ್ದಾರೆ. ನೀಡುತ್ತೇವೆ ಎಂದು ಹೇಳಿದರು.
'ನನ್ನನ್ನು ಬೀದಿಗೆ ತಂದವರನ್ನು ಸುಮ್ಮನೆ ಬಿಡಲ್ಲ: ನಿರ್ಮಾಪಕ ನನ್ನನ್ನು ಬಳಸಿಕೊಂಡಿದ್ದಾರೆ'
ಈ ಬಗ್ಗೆ ಪೊಲೀಸರಿಗೆ ದೂರು
ಇದೇ ವೇಳೆ ಮಾತನಾಡಿದ ವಂಚನೆಗೊಳದಾದ ನಾಗವರ್ಧನ್ ಅವರು, ನನಗೆ 2015ರಲ್ಲಿ ಫೇಸ್ಬುಕ್ ಮೂಲಕ ಅರುಣಾ ಕುಮಾರಿ ಸ್ನೇಹವಾಯಿತು. ನಿಮ್ಮನ್ನು ಸಿನಿಮಾ ಹೀರೋ ಮಾಡಿಸುತ್ತೇನೆ. ನನಗೆ ಚಲನಚಿತ್ರ ರಂಗದಲ್ಲಿ ಸ್ನೇಹಿತರಿದ್ದಾರೆ ಎಂದು ಆಕೆ ಹೇಳಿದ್ದಳು. ಆ ಮಾತು ನಂಬಿ ನಾನು ಮೋಸ ಹೋಗಿದ್ದೆ. ನನ್ನ ತಂದೆ ನಂದಿನಿ ಡೈರಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಆಕೆ ಹೇಳಿಕೊಂಡಿದ್ದಳು. ಮೊದಲು ಸಿನಿಮಾದಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ಹೇಳಿದ್ದ ಆಕೆ, ಬಳಿಕ ಕನಕಪುರ ರಸ್ತೆಯಲ್ಲಿ ಆಸ್ತಿ ಇದೆ. ನಿಮಗೆ 10 ರಿಂದ 12 ಕೋಟಿ ರು ಮೌಲ್ಯದ ಕನ್ಸ್ಟ್ರಕ್ಷನ್ ಕೆಲಸ ಕೊಡಿಸುತ್ತೇನೆ ಎಂದಳು. ಆಗ ತನ್ನ ಹೆಸರು ನಂದಿತಾ ಅಂತ ಹೇಳಿದ್ದಳು. ಈಗ ಅರುಣಾ ಕುಮಾರಿ ಅಂತ ಹೆಸರು ಬದಲಾಯಿಸಿಕೊಂಡಿದ್ದಾಳೆ ಎಂದು ನಾಗವರ್ಧನ್ ಆರೋಪಿಸಿದರು.
ತನಗೆ ಪರಿಚಯವಾದ ಬಳಿಕ ಸ್ನೇಹಿತರು ಹಾಗೂ ಕುಟುಂಬದ ಬಗ್ಗೆ ಆಕೆ ತಿಳಿದುಕೊಳ್ಳುತ್ತಾಳೆ. ಒಂದು ಫ್ಲ್ಯಾಟ್ ಮಾರಾಟದ ವಿಚಾರವಾಗಿ ನಾಗೇಂದ್ರ ಪ್ರಸಾದ್ ಅವರನ್ನು ಆಕೆಗೆ ನಾನು ಪರಿಚಯ ಮಾಡಿಸಿದ್ದೆ. ಆ ಮೇಲೆ ನಮ್ಮಿಬ್ಬರ ಮಧ್ಯೆ ವೈಮನಸ್ಸು ಮೂಡಿಸಿ ಪ್ರತ್ಯೇಕ ಮಾಡಿದ್ದಳು. ನಾಲ್ಕೈದು ವರ್ಷಗಳಿಂದ ನಾವಿಬ್ಬರು ಮಾತನಾಡುತ್ತಿರಲಿಲ್ಲ. ನನ್ನಿಂದ 6 ಲಕ್ಷ ರು ಹಣ ವಸೂಲಿ ಮಾಡಿದ್ದಳು. ಏನೇನೋ ಸುಳ್ಳು ಹೇಳಿ ನನ್ನಿಂದ ಚಿನ್ನ ಸಹ ಪಡೆದಿದ್ದಳು. ಈ ಬಗ್ಗೆ ವಿಚಾರಿಸಿದರೆ ಸಬೂಬು ಹೇಳಿ ತಪ್ಪಿಸಿಕೊಂಡಳು. ಕೊನೆಗೆ ಸಂಪರ್ಕ ಕಡಿತಗೊಳಿಸಿದ್ದಳು ಎಂದು ದೂರಿದರು.
ನನಗೆ 15 ವರ್ಷಗಳಿಂದ ಪರಿಚಯವಿರುವ ನಾಗವರ್ಧನ್ಗೆ ಹೀರೋ ಮಾಡುತ್ತೇನೆಂದು ನಂಬಿಸಿ ಆಕೆ ಮೋಸ ಮಾಡಿದ್ದಳು. ಇದನ್ನು ದರ್ಶನ್ ಹಾಗೂ ಉಮಾಪತಿ ಅವರಿಗೆ ಹೇಳಿದ್ದೇನೆ. ಆಕೆಯ ವಂಚನೆಗಳ ಬಗ್ಗೆ ಸಮಗ್ರ ತನಿಖೆಗೆ ಇಬ್ಬರೂ ಸಹಮತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇವೆ ಎಂದು ನಿರ್ದೇಶಕ ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.