ಕೊರೋನಾ ಲಾಕ್ಡೌನ್: ನರೇಗಾ ಕೂಲಿ ಕಾರ್ಮಿಕರಿಗೆ ಗುಡ್ನ್ಯೂಸ್
ಕೊರೋನಾದಿಂದ ದೇಶದ್ಯಾಂತ ಆರ್ಥಿಕ ನಷ್ಟ ಉಂಟಾಗಿದೆ. ಇನ್ನೂ ಲಾಕ್ಡೌನ್ನಿಂದಾಗಿ ಬಡವರು, ಕೂಲಿ ಕಾರ್ಮಿಕರು ಮತ್ತು ನಿರ್ಗತಿಕರು ಸೇರಿದಂತೆ ಅನೇಕರು ಊಟವಿಲ್ಲದೆ ಪರಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನರೇಗಾ ಯೋಜನೆಗೆ ಚುರುಕು ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಬೆಂಗಳೂರು, (ಏ.24): ಕೊರೋನಾ ಲಾಕ್ಡೌನ್ ಪರಿಣಾಮ ಕೂಲಿ ಕಾರ್ಮಿಕರ ಮೇಲೆ ದೊಡ್ಡ ಹೊಡೆತ ಬಿದ್ದಿದ್ದು, ದಿನವೂ ಕೂಲಿ ಮಾಡಿ ತುತ್ತಿನ ಚೀಲವನ್ನು ತುಂಬಿಸಿಕೊಳ್ಳುತ್ತಿದ್ದ ಜನರಿಗೆ ಗುರುವಾರ ಯಾವ ಕೂಲಿಯೂ ದೊರಕದೆ ಹೊಟ್ಟೆಗೆ ತಣ್ಣೀರು ಬಟ್ಟೆ ಬೀಳುವಂತಾಗಿದೆ.
ಆದ್ರೆ, ಇದೀಗ ರಾಜ್ಯ ಸರ್ಕಾರ ನರೇಗಾ ಯೋಜನೆಯನ್ನು ಚುರುಕು ಮಾಡುವ ಮೂಲಕ ಕೂಲಿ ಕಾರ್ಮಿಕರ ನೆರವಿಗೆ ನಿಂತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಮಹತ್ವದ ಯೋಜನೆ ಅನುಷ್ಠಾನ: ರಾಜ್ಯದಲ್ಲಿಯೇ ಬಾಗಲಕೋಟೆ ನಂ.1
ಈ ಕುರಿತು ಇಂದು (ಶುಕ್ರವಾರ) ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೋರೋನಾ ಹಿನ್ನೆಲೆಯಲ್ಲಿ ನರೇಗಾ ಯೋಜನೆ ಚುರುಕು ಮಾಡಲು ಸರ್ಕಾರ ತಿರ್ಮಾನಿಸಿದ್ದು, ನರೇಗಾ ಕಾಮಗಾರಿಯಲ್ಲಿ ತಾಂತ್ರಿಕ ನೆರವು ನೀಡಲು ಸರ್ಕಾರೇತರ ಸಂಸ್ಥೆಗಳು ಮುಂದಾಗಿವೆ ಎಂದು ಹೇಳಿದರು.
ಆರ್ಟ್ ಆಫ್ ಲೀವಿಂಗ್ ಸಹ ಸರ್ಕಾರದ ಜೊತೆಗೆ ಕೈಜೋಡಿಸಲು ಮುಂದಾಗಿದೆ. ಉದ್ಯೋಗ ಖಾತ್ರಿ ಯೋಜನೆಯ ದಿನಗೂಲಿಯನ್ನು 275 ರೂ ಗಳಿಗೆ ಏರಿಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಈಗ ರಾಜ್ಯದಲ್ಲಿ 1.76 ಲಕ್ಷ ಕೂಲಿ ಕಾರ್ಮಿಕರು ಪ್ರತಿನಿತ್ಯ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಕೂಲಿ ಕಾರ್ಮಿಕರಿಗೆ ಕೆಲಸ ಮುಗಿಸಿದ 15 ದಿನಗಳಲ್ಲಿ ಬ್ಯಾಂಕ್ ಖಾತೆಗಳಿಗೆ ಕೂಲಿಯನ್ನು ಪಾವತಿ ಮಾಡಲಾಗುವುದು ಎಂದು ತಿಳಿಸಿದರು.
ಉದ್ಯೋಗ ಖಾತ್ರಿ ಕೆಲಸ ಮಾಡುವಾಗ ಕಾರ್ಮಿಕರು ಮಾಸ್ಕ್ ಧರಿಸೋದು ಕಡ್ಡಾಯ. ಅಷ್ಟೇ ಅಲ್ಲದೇ ಕೆಲಸದ ಸ್ಥಳಗಳಲ್ಲಿ ಕನಿಷ್ಟ 1 ಮೀಟರ್ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಮಾಡಿದ್ದರಿಂದ 3 ರಿಂದ 5 ಜನರ ಗುಂಪು ಮಾಡಿ ಕೆಲಸ ಮಾಡಿಸುತ್ತಿದ್ದೇವೆ ಎಂದು ವಿವರಿಸಿದರು.