ಕಿರಿಯ ಸಿವಿಲ್ ಎಂಜಿನಿಯರ್ಗಳಿಗೆ ಬಡ್ತಿ ನೀಡುವ ಮೂಲಕ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಹುದ್ದೆಗಳಲ್ಲಿ ಶೇ.25ರಷ್ಟುಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ರಾಜ್ಯ ಸರ್ಕಾರವು 2011ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
ಬೆಂಗಳೂರು (ಜು.20) : ಕಿರಿಯ ಸಿವಿಲ್ ಎಂಜಿನಿಯರ್ಗಳಿಗೆ ಬಡ್ತಿ ನೀಡುವ ಮೂಲಕ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಹುದ್ದೆಗಳಲ್ಲಿ ಶೇ.25ರಷ್ಟುಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ರಾಜ್ಯ ಸರ್ಕಾರವು 2011ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ಹೈ ಹೈಕೋರ್ಟ್ ರದ್ದುಪಡಿಸಿದೆ.
ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಎಂ.ಆರ್.ರಂಗರಾಮು ಸೇರಿದಂತೆ ರಾಜ್ಯದ ವಿವಿಧ ನಗರಸಭೆ ಮತ್ತು ನಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಏಳು ಮಂದಿ ಸಹಾಯಕ ಸಿವಿಲ್ ಎಂಜಿನಿಯರ್ಗಳು ಸಲ್ಲಿಸಿದ್ದ ತಕರಾರು ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.
ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪ್ರಾಪ್ತನ ಬಿಡುಗಡೆಗೆ ತಾಯಿಗೆ ಹೈಕೋರ್ಟ್ ಷರತ್ತು
ಕಿರಿಯ ಸಿವಿಲ್ ಎಂಜಿನಿಯರ್ಗಳಿಗೆ ಬಡ್ತಿ ನೀಡಿ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಹುದ್ದೆಯನ್ನು ಭರ್ತಿ ಮಾಡಲು ಅವಕಾಶವಾಗುವಂತೆ ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ (ಅಧಿಕಾರಿಗಳ ಮತ್ತು ಸಿಬ್ಬಂದಿ ಸಾಮಾನ್ಯ ನೇಮಕಾತಿ) ಅಧಿನಿಯಮಗಳು-2011ರ ಶೆಡ್ಯೂಲ್-3ಕ್ಕೆ ಮಾರ್ಪಾಡು ಮಾಡಿ ಸರ್ಕಾರ 2011ರ ಏ.11ರಂದು ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯು ಅಸಂವಿಧಾನಿಕವಾಗಿದೆ ಹಾಗೂ ಸಂವಿಧಾನದ ಪರಿಚ್ಛೇದ 14 (ಸಮಾನತೆ) ಮತ್ತು 16ರ (ಸಮಾನ ಅವಕಾಶ) ಸ್ಪಷ್ಟಉಲ್ಲಂಘನೆ ಎಂದು ಹೈಕೋರ್ಟ್ ಘೋಷಿಸಿದೆ.
ಅಲ್ಲದೆ, ಅಧಿಸೂಚನೆಯನ್ನು ರದ್ದುಪಡಿಸಿರುವ ಹೈಕೋರ್ಟ್, ಸಹಾಯಕ ಕಾರ್ಯಕಾರಿ ಎಂಜಿನಿಯರ್ ಹುದ್ದೆಗೆ ಫೀಡರ್/ಕೆಳ ಶ್ರೇಣಿಯ ಅಧಿಕಾರಿಗಳು ಅಂದರೆ ಸಹಾಯಕ ಎಂಜಿನಿಯರ್ಗಳಿ ಬಡ್ತಿ ನೀಡಿ ಹುದ್ದೆಯನ್ನು ಭರ್ತಿ ನೀಡಬೇಕು. ಈ ಪ್ರಕ್ರಿಯೆಯನ್ನು ಆದೇಶ ಪ್ರತಿ ದೊರೆತ ಎಂಟು ವಾರಗಳ ಒಳಗೆ ಪೂರ್ಣಗೊಳಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ.
ಕಾನೂನುಬದ್ಧ ಹಕ್ಕು ಮೊಟಕು
2011ರ ಅಧಿಸೂಚನೆಯ ಪ್ರಕಾರ ಕಿರಿಯ ಎಂಜಿನಿಯರ್ ಹುದ್ದೆಯು ಸಹಾಯಕ ಕಾರ್ಯಕಾರಿ ಎಂಜಿನಿಯರ್ ಹುದ್ದೆಯ ಕೆಳ ಶ್ರೇಣಿಯದ್ದಲ್ಲ. ಸಹಾಯಕ ಎಂಜಿನಿಯರ್ ಹುದ್ದೆಯೇ ಕೆಳ ಶ್ರೇಣಿಯದ್ದಾಗಿರುತ್ತದೆ. ಒಂದು ವೇಳೆ 2011ರ ನಿಯಮಗಳನ್ನು ಜಾರಿಗೆ ತಂದು ಕಿರಿಯ ಎಂಜಿನಿಯರ್ಗಳನ್ನು ಸಹಾಯಕ ಕಾರ್ಯಕಾರಿ ಎಂಜಿನಿಯರ್ಗೆ ಬಡ್ತಿ ನೀಡಿದರೆ ಬಡ್ತಿಗೆ ಮುಂಚೂಣಿಯಲ್ಲಿರುವ ಶೇ.25ರಷ್ಟುಸಹಾಯಕ ಎಂಜಿನಿಯರ್ಗಳ ಕಾನೂನುಬದ್ಧ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಸಹಾಯಕ ಎಂಜಿನಿಯರ್ಗಳನ್ನು ಸಹಾಯಕ ಕಾರ್ಯಕಾರಿ ಎಂಜಿನಿಯರ್ ಹುದ್ದೆಗೆ ಭರ್ತಿ ನೀಡಬೇಕಾಗುತ್ತದೆ. ಇದಕ್ಕಿಂತ ಕಡಿಮೆ ಶ್ರೇಣಿಯ ಕಿರಿಯ ಎಂಜಿನಿಯರ್ ಅವರಿಗೆ ಬಡ್ತಿ ನೀಡಿ ನೇರವಾಗಿ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಹುದ್ದೆಗೆ ಭರ್ತಿ ನೀಡುವುದು ಅಸಂವಿಧಾನಿಕ ಕ್ರಮ ಎಂದು ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಎಂ.ಎಸ್. ಭಾಗವತ್, ಕೆ.ಎನ್.ಫಣೀಂದ್ರ, ವಕೀಲರಾದ ಎಂ.ಪಿ. ಶ್ರೀಕಾಂತ್, ಅನೀಶ್ ಆಚಾರ್ಯ ಮತ್ತು ಕೆ.ಸತೀಶ್ ವಾದ ಮಂಡಿಸಿದ್ದರು.
ರಾಗಾ ವಿರುದ್ಧ ಟ್ವೀಟ್: ಮಾಳವಿಯ ವಿರುದ್ಧ ವಿಚಾರಣೆಗೆ ಹೈಕೋರ್ಟ್ ತಡೆ
