ಪ್ರಾಣಿ ಕಲ್ಯಾಣ ಸಹಾಯವಾಣಿಗೆ ಸಿಎಂ ಚಾಲನೆ 24 ತಾಸೂ ಕಾರ್ಯನಿರ್ವಹಣೆ: ಸಚಿವ ಚವ್ಹಾಣ್‌ 8277100200 ಕರೆ ಮಾಡಿದರೆ ಎಲ್ಲ ಮಾಹಿತಿ ಲಭ್ಯ

ಬೆಂಗಳೂರು(ಜೂ.24): ರಾಜ್ಯದ ರೈತರು ಹಾಗೂ ಪಶುಸಾಕಣೆದಾರರು ಪಶು ಸಂಬಂಧಿ ಮಾಹಿತಿಯನ್ನು ಒಂದು ಕರೆಯ ಅಂತರದಲ್ಲಿ ಪಡೆಯುವ ಸಾಧ್ಯತೆ ಸಾಕಾರ ಮಾಡುವ ದೇಶದ ಮೊಟ್ಟಮೊದಲ ಸುಸಜ್ಜಿತ ಪ್ರಾಣಿ ಕಲ್ಯಾಣ ಸಹಾಯವಾಣಿ (ವಾರ್‌ ರೂಮ್‌) ಬುಧವಾರದಿಂದ ಕಾರ್ಯಾರಂಭ ಮಾಡಿದೆ.

"

ಬೆಂಗಳೂರಿನ ಹೆಬ್ಬಾಳದ ಪಶುಪಾಲನಾ ಭವನದಲ್ಲಿ ಕಾರ್ಯಾರಂಭ ಮಾಡಿರುವ ಈ ಸಹಾಯವಾಣಿಯನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬುಧವಾರ ಲೋಕಾರ್ಪಣೆ ಮಾಡಿದರು. ಇಂತಹದೊಂದು ಸಹಾಯವಾಣಿ ಆರಂಭಿಸಿದ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದ ಮುಖ್ಯಮಂತ್ರಿಯವರು ದೇಶದಲ್ಲಿಯೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ಆರಂಭಗೊಂಡಿರುವ ಸುಸಜ್ಜಿತ ಪ್ರಾಣಿ ಕಲ್ಯಾಣ ಸಹಾಯವಾಣಿ (ವಾರ್‌ ರೂಮ್‌) ರೈತರು, ಸಾಕಾಣಿಕೆದಾರರನ್ನು ತಲುಪಲು ಮತ್ತು ಜಾನುವಾರುಗಳ ಆರೋಗ್ಯ ಹಾಗೂ ಉತ್ಪಾದಕತೆ ಹೆಚ್ಚಿಸಲು ಪ್ರಮುಖ ಪಾತ್ರವಹಿಸಲಿದೆ ಎಂದರು.

‘ಪಶುಸಂಗೋಪನೆಯನ್ನೇ ಬಹಳಷ್ಟು ಜನರು ಆದಾಯದ ಮೂಲ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಸಮಸ್ಯೆಗಳು ಉದ್ಭವಿಸಿದಾಗ ಸಹಾಯವಾಣಿಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದು. ದೇಶದ ಜಿಡಿಪಿಗೆ ಪಶುಸಂಗೋಪನೆ ಕೊಡುಗೆಯೂ ಹೆಚ್ಚಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

SSLC ಪರೀಕ್ಷೆ ಸಿಬ್ಬಂದಿಗೆ ಕೋವಿಡ್‌ ಲಸಿಕೆ ಕಡ್ಡಾಯ, ಹೊಸ ಮಾರ್ಗಸೂಚಿ ಹೀಗಿದೆ

ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಮಾತನಾಡಿ, ‘ಸಹಾಯವಾಣಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ. ಇಲಾಖೆಯಿಂದ ಜಾನುವಾರು ಆರೋಗ್ಯ ಸೇವೆಗಳು ರೈತರ ಮನೆ ಬಾಗಿಲನ್ನು ತಲುಪಲಿವೆ’ ಎಂದರು.

‘ಪಶು ಸಂಗೋಪನಾ ಇಲಾಖೆಯು ಜಾನುವಾರು ಆರೋಗ್ಯ ಸೇವೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಿದೆ. ಜಾನುವಾರು ಆರೋಗ್ಯ ಕಾಪಾಡುವಲ್ಲಿ ಹೆಚ್ಚು ಶ್ರಮ ವಹಿಸುತ್ತಿದೆ. ಇದೀಗ ಈ ಸಹಾಯವಾಣಿಯ ಮೂಲಕ ಪಶುಪಾಲಕರಿಗೆ ಮಹತ್ತರ ಕೊಡುಗೆ ನೀಡಿದೆ’ ಎಂದರು.

ಸಹಾಯವಾಣಿ ವಿಶೇಷತೆ

  • ಯಾವುದೇ ರೈತರು, ಪಶುಪಾಲಕರು ಪ್ರಾಣಿ ಕಲ್ಯಾಣ ಸಹಾಯವಾಣಿ ಸಂಖ್ಯೆ (8277100200)ಗೆ ಕರೆ ಮಾಡಿ ಪಶು ಆರೈಕೆ ಸಂಬಂಧ ಯಾವುದೇ ಮಾಹಿತಿ ಪಡೆಯಬಹುದು.
  • ಮುಖ್ಯವಾಗಿ ಕುರಿ, ಮೇಕೆ, ಮೊಲ, ಹಂದಿ, ಕೋಳಿ ಸಾಕಾಣಿಕೆ, ಹೈನುಗಾರಿಕೆ ಬಗ್ಗೆ ಮಾಹಿತಿ ಪಡೆಯಬಹುದು.
  • ಸಾಂಕ್ರಾಮಿಕ ರೋಗಗಳ ಹತೋಟಿ ಹಾಗೂ ಚಿಕಿತ್ಸೆ, ಸ್ಥಳೀಯ ಹಾಗೂ ವಿದೇಶಿ ತಳಿಗಳು, ಚುಚ್ಚುಮದ್ದು, ಬ್ಯಾಂಕುಗಳ ಸಾಲ ಸೌಲಭ್ಯ, ಮೇವಿನ ಲಭ್ಯತೆ ಕುರಿತ ವಿವರ ಲಭ್ಯ.
  • ತುರ್ತು ಸಮಯದಲ್ಲಿ ಅಪಘಾತ ಹಾಗೂ ಇತರೆ ಕಾಯಿಲೆಗಳಿಂದ ನರಳುತ್ತಿರುವ ರಾಸುಗಳಿಗೆ ತಕ್ಷಣಕ್ಕೆ ಪಶು ವೈದ್ಯರು ದೊರೆಯದಿದ್ದಾಗ ಚಿಕಿತ್ಸೆ ಬಗ್ಗೆ ಸಲಹೆ.
  • ಕರ್ನಾಟಕ ಗೋ ಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ ಜಾರಿಗೊಳಿಸುವ ಸಂಬಂಧ್ತ ಸಲಹೆ ಹಾಗೂ ಮಾಹಿತಿಯನ್ನು ಈ ಸಹಾಯವಾಣಿಯಿಂದ ಪಡೆಯಬಹುದು.