ಸೋಂಕು ಏರುತ್ತಿದ್ದರೂ ಪಾಠ ಕಲಿಯದ ಜನರು: 2700 ವಾಹನಗಳ ಜಪ್ತಿ!
ಸೋಂಕು ಏರುತ್ತಿದ್ದರೂ ಪಾಠ ಕಲಿಯದ ಜನರು| ಜನತಾ ಕರ್ಫ್ಯೂ ಇದ್ದರೂ ಅನಾವಶ್ಯಕ ಸುತ್ತಾಟ| ನಿಯಮಾವಳಿ ಮೀರಿದ 2700 ವಾಹನಗಳ ಜಪ್ತಿ
ಬೆಂಗಳೂರು(ಮೇ.01): ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕೊರೋನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಇದರ ಗಂಭೀರತೆ ಜನಕ್ಕೆ ಅರ್ಥವಾದಂತಿಲ್ಲ. ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ರಾಜ್ಯ ಸರ್ಕಾರ ಘೋಷಿಸಿರುವ ಜನತಾ ಕರ್ಫ್ಯೂಗೆ ಮೊದಲ ದಿನ ಉತ್ತಮ ಸ್ಪಂದನೆ ದೊರೆತರೂ ಆ ಬಳಿಕ ಅನವಶ್ಯಕವಾಗಿ ರಸ್ತೆಗಿಳಿಯುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಜೊತೆಗೆ ಜನ ಮಾರುಕಟ್ಟೆಗಳಲ್ಲಿ ಕೋವಿಡ್ ನಿಯಮಾವಳಿಯನ್ನು ಗಾಳಿಗೆ ತೂರಿ ವ್ಯವಹರಿಸುತ್ತಿರುವುದು ಈ ಹಿಂದಿನಂತೆಯೇ ಮುಂದುವರಿದಿದೆ. ಈ ಹಂತದಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಿ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದರೂ ಜನರು ಹೊಣೆಗಾರಿಕೆ ಮರೆತು ಬಿಂದಾಸ್ ಆಗಿ ವರ್ತಿಸುತ್ತಿರುವುದು ಅಪಾಯಕಾರಿಯಾಗಿ ಗೋಚರಿಸಿದೆ.
ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ ನಾಲ್ಕು ಗಂಟೆಗಳ ಕಾಲ ಮಾರುಕಟ್ಟೆಗಳು ಮತ್ತು ದಿನಸಿ ಪದಾರ್ಥಗಳ ಖರೀದಿಗೆ ಅವಕಾಶ ನೀಡಿರುವುದನ್ನೇ ಜನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಸಂಗ ಬೆಂಗಳೂರು, ಮೈಸೂರು, ಬೆಳಗಾವಿ ಸೇರಿದಂತೆ ಹೆಚ್ಚಿನ ಎಲ್ಲ ಜಿಲ್ಲಾ, ತಾಲೂಕು, ಹೋಬಳಿ ಕೇಂದ್ರಗಳಲ್ಲಿ ಹಿಂದಿನಂತೆಯೇ ಮುಂದುವರಿದಿದೆ. ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಪೊಲೀಸರು, ಅಧಿಕಾರಿಗಳು ಎಷ್ಟೇ ತಿಳಿಹೇಳಿದರೂ ಜನ ಕ್ಯಾರೇ ಎನ್ನುತ್ತಿಲ್ಲ. ನಿತ್ಯವೂ ಬೆಳಗ್ಗೆ 10 ಗಂಟೆಯವರೆಗೆ ತರಕಾರಿ, ಹಣ್ಣು, ದಿನಸಿಗಳನ್ನು ಜನತೆ ಮುಗಿಬಿದ್ದು ಖರೀದಿಸುತ್ತಿದ್ದು, ತರಕಾರಿ, ಎಪಿಎಂಸಿ ಮಾರುಕಟ್ಟೆಗಳಲ್ಲಂತೂ ಜನಜಾತ್ರೆಯೇ ಕಂಡು ಬರುತ್ತಿದೆ. ಗ್ರಾಹಕರು, ವ್ಯಾಪಾರಿಗಳು, ದಲ್ಲಾಳಿಗಳು ಯಾರೂ ಮಾಸ್ಕ್ ಧರಿಸುತ್ತಿಲ್ಲ. ಮಾಸ್ಕ್ ಇದ್ದರೂ ಮುಖದ ಕೆಳಗೆ ಕುತ್ತಿಗೆಗೆ ಜೋತು ಬಿದ್ದಿರುತ್ತದೆ. ಸಾಮಾಜಿಕ ಅಂತರವಂತೂ ನಗೆಪಾಟಿಲಿಗೆ ಈಡಾಗಿದೆ. ಇಂತಹ ಸಂದರ್ಭದಲ್ಲಿ ಪೊಲೀಸರು ಲಾಠಿ ಬೀಸಿರುವ ಮಾಡಿರುವ ಪ್ರಸಂಗ ಮಡಿಕೇರಿಯಿಂದ ವರದಿಯಾಗಿದೆ. ಗದಗದಲ್ಲಂತೂ ಉಪವಿಭಾಗಾಧಿಕಾರಿಯೇ ಲಾಠಿ ಹಿಡಿದು ಜನರನ್ನು ಚದುರಿಸಿದ ಪ್ರಸಂಗ ನಡೆದಿದೆ.
ಯ ಭೂ ಸೇನೆಯ ಮುಖ್ಯಸ್ಥ ಜನರಲ್ ಎಂ. ಎಂ. ನರವಣೆ ಬಳಿ ಮಾಹಿತಿ ಪಡೆದುಕಜೊಂಡಿದ್ದಾರೆ. ಈ ವೇಳೆ ಕೋವಿಡ್ ನಿರ್ವಹಣೆಗೆ ಸೇನೆ ಕೈಗೊಳ್ಳುತ್ತಿರುವ ವಿವಿಧ ಕ್ರಮಗಳ ಕುರಿತಾಗಿಯೂ ಚರ್ಚೆ ನಡೆದಿದೆ.
"
ಇನ್ನು ಹತ್ತು ಗಂಟೆ ಬಳಿಕ ಮಾರುಕಟ್ಟೆಗಳು ಬಂದ್ ಆದರೂ ಅನಗತ್ಯವಾಗಿ ರಸ್ತೆಯಲ್ಲಿ ಕಾಣಿಸಿಕೊಳ್ಳುವವರ ಸಂಖ್ಯೆ ಈ ಮೊದಲಿನಂತೆ ಕಡಿಮೆಯಾಗುತ್ತಿಲ್ಲ. ಪೊಲೀಸರು ಅಲ್ಲಲ್ಲಿ ಲಾಠಿ ಎತ್ತಿದರೂ ಜನ ಕೇಳುತ್ತಿಲ್ಲ. ದಂಡ ಹಾಕಿದರೂ, ವಾಹನ ಜಪ್ತಿ ಮಾಡುತ್ತಿದ್ದರೂ ಜಗ್ಗುತ್ತಿಲ್ಲ. ಏನಾದರೂ ನೆಪಹೇಳಿ ಮಧ್ಯಾಹ್ನ 2 ಗಂಟೆವರೆಗೂ ಬೇಕಾಬಿಟ್ಟಿಸುತ್ತಾಡುತ್ತಿದ್ದಾರೆ. ಚಾಮರಾಜನಗರದಲ್ಲಿ ಸ್ವತಃ ಜಿಲ್ಲಾಧಿಕಾರಿಯೇ ಬೀದಿಗಿಳಿದು ಪೊಲೀಸರು ಮತ್ತು ಸಾರ್ವಜನಿಕರಿಗೆ ಕ್ಲಾಸ್ ತೆಗೆದುಕೊಂಡ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು. ಬೆಂಗಳೂರು, ಬೆಳಗಾವಿ, ಮಂಗಳೂರು ಮಹಾನಗರಗಲ್ಲಂತೂ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಪರದಾಡಿದರು.
2718 ವಾಹನ ಜಪ್ತಿ: ಗುರುವಾರದಂದು ನಿಯಮ ಮೀರಿ ರಸ್ತೆಗಿಳಿದಿದ್ದ 3120ಕ್ಕೂ ಅಧಿಕ ವಾಹನಗಳನ್ನು ಜಪ್ತಿ ಮಾಡಿದ್ದ ಪೊಲೀಸರು ಶುಕ್ರವಾರವೂ ಕಟ್ಟುನಿಟ್ಟಿನ ಕಾರ್ಯಾಚರಣೆ ಮುಂದುವರಿಸಿ ಮತ್ತೆ 2718ಕ್ಕೂ ಅಧಿಕ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡರು. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 1610 ವಾಹನಗಳನ್ನು ಜಪ್ತಿ ಮಾಡಿದರೆ, ವಿಜಯಪುರ 300, ಮೈಸೂರು 281, ಶಿವಮೊಗ್ಗ 152, ಉಡುಪಿ 99, ಗದಗ 78, ಬಳ್ಳಾರಿ 77, ಮದ್ದೂರು 50, ಚಿಕ್ಕಬಳ್ಳಾಪುರ 46, ಬೆಳಗಾವಿ 25 ವಾಹನಗಳನ್ನು ವಶಪಡಿಸಿಕೊಂಡರು. ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ 535 ವಾಹನಗಳ ಮೇಲೆ ಒಟ್ಟು .53500 ದಂಡ ವಿಧಿಸಲಾಗಿದೆ. ಇನ್ನು ನಿಯಮ ಉಲ್ಲಂಘಿಸಿದ ಅಂಗಡಿ ಮುಂಗಟ್ಟುಗಳು ಸೇರಿದಂತೆ ಒಟ್ಟು 47 ಪ್ರಕರಣಗಳನ್ನು ದಾಖಲಿಸಲಾಗಿದೆ. ವಿಜಯಪುರದಲ್ಲಿ ಮಾಸ್ಕ್ ಧರಿಸದ್ದಕ್ಕೆ 353 ಕೇಸ್ ದಾಖಲು ಮಾಡಿದ್ದರೆ, ಬಳ್ಳಾರಿಯಲ್ಲಿ 113 ಮಂದಿಗೆ ದಂಡ ವಿಧಿಸಲಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona