ಚಿತ್ರ ನಟ ಅಂಬರೀಶ್‌ ಅವರು ರಾಜಕಾರಣದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ‘ಕಾಂಗ್ರೆಸ್‌ಗೆ ಕುಮಾರಸ್ವಾಮಿ ಅನಿವಾರ್ಯವೇ ಹೊರತು, ಕುಮಾರಸ್ವಾಮಿಗೆ ಕಾಂಗ್ರೆಸ್‌ ಅನಿವಾರ್ಯವಲ್ಲ’ ಎಂದು ಹೇಳುವ ಮೂಲಕ ಪಕ್ಷದ ಹೈಕಮಾಂಡ್‌ಗೆ ಪರೋಕ್ಷವಾಗಿ ಚುಚ್ಚಿದ್ದಾರೆ.

ಮಂಡ್ಯ : ವಿಧಾನಸಭೆ ಚುನಾವಣೆ ಹಾಗೂ ಸಕ್ರಿಯ ರಾಜಕೀಯದಿಂದ ದೂರ ಸರಿದ ತಿಂಗಳುಗಳ ಬಳಿಕ ಚಿತ್ರ ನಟ ಅಂಬರೀಶ್‌ ಅವರು ರಾಜಕಾರಣದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ‘ಕಾಂಗ್ರೆಸ್‌ಗೆ ಕುಮಾರಸ್ವಾಮಿ ಅನಿವಾರ್ಯವೇ ಹೊರತು, ಕುಮಾರಸ್ವಾಮಿಗೆ ಕಾಂಗ್ರೆಸ್‌ ಅನಿವಾರ್ಯವಲ್ಲ’ ಎಂದು ಹೇಳುವ ಮೂಲಕ ಪಕ್ಷದ ಹೈಕಮಾಂಡ್‌ಗೆ ಪರೋಕ್ಷವಾಗಿ ಚುಚ್ಚಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚೆಗೆ ನಗರದಲ್ಲಿ ನಡೆದ ಭೀಕರ ಅಫಘಾತದಲ್ಲಿ ಮೃತಪಟ್ಟತಮ್ಮ ಅಭಿಮಾನಿ ರಫೀಕ್‌ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಶುಕ್ರವಾರ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮುಖ್ಯಮಂತ್ರಿ ಕುಮಾರಸ್ವಾಮಿಗೆ ಕಾಂಗ್ರೆಸ್‌ನ ಕೆಲವು ನಾಯಕರು ಅಡ್ಡಿಯಾಗುತ್ತಿದ್ದಾರೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಪರ ಬ್ಯಾಟ್‌ ಬೀಸಿ ಕೈ ನಾಯಕರಿಗೆ ಟಾಂಗ್‌ ನೀಡಿದರು. ‘ಕುಮಾರಸ್ವಾಮಿಗೆ ಕಾಂಗ್ರೆಸ್‌ ಅನಿವಾರ್ಯವಲ್ಲ ರೀ. ಕಾಂಗ್ರೆಸ್‌ಗೆ ಈಗ ಕುಮಾರಸ್ವಾಮಿ ಅನಿವಾರ್ಯವಾಗಿದ್ದಾರೆ. ಒಂದು ವೇಳೆ ಅವರನ್ನು ನಾವು ಕೈ ಬಿಟ್ಟರೆ ಸರ್ಕಾರ ಉಳಿಯಲ್ಲ’ ಎಂದು ಹೇಳಿದರು.

ರಮ್ಯಾ ಟೀಕೆ ಸಲ್ಲ:  ಮಾಜಿ ಸಂಸದೆ ರಮ್ಯಾ ಅವರ ಕಾರ್ಯವೈಖರಿಯನ್ನು ಹೊಗಳಿದ ಅಂಬರೀಶ್‌, ಅವರನ್ನು ಟೀಕೆ ಮಾಡುವುದು ಸಲ್ಲ ಎಂದು ಅಭಿಪ್ರಾಯಪಟ್ಟರು. ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಹುದ್ದೆಗೆ ರಾಜೀನಾಮೆ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ, ‘ಈ ವಿಚಾರ ನಂಗೆ ಗೊತ್ತಿಲ್ಲ. ಅವರು ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಎನ್ನುವುದು ಮಾತ್ರ ನಂಗೆ ಗೊತ್ತು. ಅವರ ಕೆಲಸವೇ ಎದುರಾಳಿಗಳ ಕಾಲೆಳೆದು ನಮ್ಮ ಪಕ್ಷವನ್ನ ಮೇಲೆತ್ತುವುದು. ಅದನ್ನು ನಾವೇ ಟೀಕೆ ಮಾಡಿದರೆ ಹೇಗೆ’ ಎಂದು ಮರು ಪ್ರಶ್ನೆ ಮಾಡಿದರು.

ಪುತ್ರ ರಾಜಕೀಯಕ್ಕಿಲ್ಲ: ಪುತ್ರ ಅಭಿಷೇಕ್‌ ರಾಜಕೀಯ ಪ್ರವೇಶದ ಬಗ್ಗೆ ಕೇಳಿದ ಪ್ರಶ್ನೆಗೆ, ನಾನಿರುವವರೆಗೂ ಅಭಿಷೇಕ್‌ ರಾಜಕೀಯಕ್ಕೆ ಬರಲ್ಲ. ಈ ಸಂಗತಿಯನ್ನು ನಾನು ಹಿಂದೆ ಹಲವಾರು ಬಾರಿ ಹೇಳಿದ್ದೇನೆ. ಆ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದರು.

ಮಂಡ್ಯಕ್ಕೂ ನಾಯಕರು ಬರ್ತಾರೆ

ನನ್ನ ಅನುಪಸ್ಥಿತಿಯಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸ್‌ ನಾವಿಕನಿಲ್ಲದ ದೋಣಿಯಂತಾಗಿದೆ ಎಂಬ ವಾದವನ್ನು ನಾನು ಸುತಾರಾಂ ಒಪ್ಪುವುದಿಲ್ಲ ಎಂದು ಅಂಬರೀಶ್‌ ಹೇಳಿದರು. ರಾಜಕಾರಣ ಮತ್ತು ಬದುಕಿಗೆ ಯಾರೂ ಅನಿವಾರ್ಯವಲ್ಲ ಮತ್ತು ಅನಿವಾರ್ಯ ಆಗಲೂಬಾರದು. ಜವಾಹರ್‌ಲಾಲ… ನೆಹರು ನಿಧನದ ಬಳಿಕ ನಾಯಕರು ಹುಟ್ಟಿಕೊಳ್ಳಲಿಲ್ವ? ದೇಶ ಅಭಿವೃದ್ಧಿ ಆಗಲಿಲ್ವ? ಹಾಗೆಯೇ ಮಂಡ್ಯಕ್ಕೂ ನಾಯಕರು ಬರ್ತಾರೆ ಎಂದರು.