ಇಂದು ಇಡೀ ದಿನ ಸಿಎಂ ಸಿದ್ದರಾಮಯ್ಯ ಜನತಾ ದರ್ಶನ ವೆಬ್ಸೈಟ್, ಮೊಬೈಲ್ ನಿಂದಲೂ ಅಹವಾಲು ಸಲ್ಲಿಸಬಹುದು!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕರ ಅಹವಾಲುಗಳಿಗೆ ತ್ವರಿತ ಪರಿಹಾರ ಒದಗಿಸುವ ಆಶಯದೊಂದಿಗೆ ಸೋಮವಾರ ಬೆಳಿಗ್ಗೆ 9.30 ರಿಂದ ಇಡೀ ದಿನ ಗೃಹ ಕಚೇರಿ ಕೃಷ್ಣಾದಲ್ಲಿ ‘ಜನಸ್ಪಂದನ’ ಕಾರ್ಯಕ್ರಮ ನಡೆಸಲಿದ್ದಾರೆ.
![All day today CM Siddaramaiahs Janata Darshan is being prepared lavishly at Bengaluru rav All day today CM Siddaramaiahs Janata Darshan is being prepared lavishly at Bengaluru rav](https://static-ai.asianetnews.com/images/01hg70dqfgn9523zjxk0mf1k02/1_363x203xt.jpg)
ಬೆಂಗಳೂರು (ನ.27): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕರ ಅಹವಾಲುಗಳಿಗೆ ತ್ವರಿತ ಪರಿಹಾರ ಒದಗಿಸುವ ಆಶಯದೊಂದಿಗೆ ಸೋಮವಾರ ಬೆಳಿಗ್ಗೆ 9.30 ರಿಂದ ಇಡೀ ದಿನ ಗೃಹ ಕಚೇರಿ ಕೃಷ್ಣಾದಲ್ಲಿ ‘ಜನಸ್ಪಂದನ’ ಕಾರ್ಯಕ್ರಮ ನಡೆಸಲಿದ್ದಾರೆ.
ಎರಡನೇ ಬಾರಿ ಮುಖ್ಯಮಂತ್ರಿ ಆದ ಬಳಿಕ ನಡೆಯುತ್ತಿರುವ ಮೊದಲ ಪೂರ್ಣಾವಧಿ ಜನತಾ ದರ್ಶನ ಆಗಿರುವುದರಿಂದ ಸಕಲ ಮುನ್ನೆಚ್ಚರಿಕೆಗಳೊಂದಿಗೆ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಸ್ಥಳದಲ್ಲೇ ಪರಿಹಾರ ಕಲ್ಪಿಸುವುದಕ್ಕೆ ಆದ್ಯತೆ ನೀಡಿ ಎಲ್ಲಾ ಇಲಾಖೆಗಳ ಅಧಿಕಾರಿ, ಸಿಬ್ಬಂದಿಯನ್ನು ಹಾಜರಿರುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಹೆಚ್ಚು ಹೊತ್ತು ಸರತಿ ಸಾಲುಗಳಲ್ಲಿ ನಿಲ್ಲದಂತೆ ಮಾಡಲು 20 ಕೌಂಟರ್ಗಳನ್ನು ಸ್ಥಾಪಿಸಿ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ನೆರಳಿಗೆ ಟೆಂಟ್ ವ್ಯವಸ್ಥೆ, ನೂಕು ನುಗ್ಗಲು ಆಗದಂತೆ ಬ್ಯಾರಿಕೇಡ್ ವ್ಯವಸ್ಥೆ ಕಲ್ಪಿಸಲಾಗಿದೆ.
ಅನ್ನಭಾಗ್ಯ ಯೋಜನೆ ಅಕ್ಕಿಯಿಂದ ಹೊಟ್ಟೆ ತುಂಬ್ತಿಲ್ಲ: 10 ಕೆಜಿ ಅಕ್ಕಿ ಕೊಡುವಂತೆ ಸಚಿವರ ಮುಂದೆ ಮಂಡಿಯೂರಿದ ರೈತ
ಇನ್ನು ವೃದ್ಧರು ಹಾಗೂ ವಿಶೇಷ ಚೇತನರಿಗೆ ಪ್ರತ್ಯೇಕ ಕೌಂಟರ್ಗಳನ್ನು ತೆರೆಯಲಾಗಿದೆ. ಜತೆಗೆ ಕೃಷ್ಣಾ ಸುತ್ತಮುತ್ತಲೂ ಕುಡಿಯುವ ನೀರು, ಆಹಾರ ಹಾಗೂ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್ ಅವರು ಭಾನುವಾರ ಸಂಜೆ ಗೃಹ ಕಚೇರಿ ಕೃಷ್ಣಾಕ್ಕೆ ಭೇಟಿ ನೀಡಿ ಅಂತಿಮ ಸಿದ್ಧತೆಗಳನ್ನು ವೀಕ್ಷಿಸಿದರು ಎಂದು ತಿಳಿದುಬಂದಿದೆ.
ಇಲಾಖಾ ಮುಖ್ಯಸ್ಥರ ಕಡ್ಡಾಯ ಹಾಜರಿ:
ಸಾರ್ವಜನಿಕರಿಂದ ಸ್ವೀಕರಿಸಿದ ಅಹವಾಲುಗಳನ್ನು ಇಲಾಖಾವಾರು ವಿಂಗಡಿಸಿ ತಂತ್ರಾಂಶದಲ್ಲಿ ದಾಖಲಿಸಿ ಅರ್ಜಿದಾರರಿಗೆ ಸ್ವೀಕೃತಿ ಪತ್ರ ನೀಡಿದ ನಂತರ ಮುಖ್ಯಮಂತ್ರಿಯವರು ಅಹವಾಲುಗಳನ್ನು ಆಲಿಸಿ ಪರಿಹಾರ ಸೂಚಿಸಲಿದ್ದಾರೆ.
ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಈಗಾಗಲೇ ಸುತ್ತೋಲೆ ಹೊರಡಿಸಿ ಸರ್ಕಾರದ ಎಲ್ಲ ಕಾರ್ಯದರ್ಶಿಗಳು / ಇಲಾಖಾ ಮುಖ್ಯಸ್ಥರು ಖುದ್ದು ಹಾಜರಿರುವಂತೆ ಹಾಗೂ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಎಲ್ಲಾ ಜಿಲ್ಲಾ/ ಉಪವಿಭಾಗ/ ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಹಾಜರಿರುವಂತೆ ಸೂಚಿಸಿದ್ದಾರೆ ಎಂದು ಸೂಚಿಸಿದ್ದಾರೆ.
ಆನ್ಲೈನಲ್ಲೂ ಅಹವಾಲು ಸಲ್ಲಿಕೆ:
ಸಾರ್ವಜನಿಕರು ದೂರು ಅಥವಾ ಅಹವಾಲು ಸಲ್ಲಿಕೆ ಮಾಡುವ ವ್ಯವಸ್ಥೆ ಸರಳೀಕರಣಗೊಳಿಸುವ ಸಲುವಾಗಿ ಕ್ಯೂಆರ್ ಕೋಡ್ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಕಚೇರಿಯು ಕ್ಯೂಆರ್ ಕೋಡ್ ಬಿಡುಗಡೆ ಮಾಡಿದ್ದು, ಸಾರ್ವಜನಿಕರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಆನ್ಲೈನ್ ಮೂಲಕ ದೂರು ಸಲ್ಲಿಸಬಹುದು. ಜತೆಗೆ 1902 ಗೆ ಕರೆ ಮಾಡಿ ದೂರವಾಣಿ ಮೂಲಕವೂ ಅಹವಾಲು ಸಲ್ಲಿಸಬಹುದು.
ರಾಜ್ಯದ ಮೂಲೆ ಮೂಲೆಗಳಿಂದ ಜನರು ಆಗಮನ:
ಇಂದು ಸಿಎಂ ಸಿದ್ದರಾಮಯ್ಯ ಜನತಾ ದರ್ಶನ ನಡೆಸುತ್ತಿರುವ ಹಿನ್ನೆಲೆ ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ಜನರು. ರೈತರು, ಮಹಿಳೆಯರು, ವೃದ್ಧರು ಆಗಮಿಸಿ ಗೃಹ ಕಚೇರಿ ಕೃಷ್ಣಾ ಎದುರು ಜಮಾಯಿಸಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಕಾಯುತ್ತಿರುವ ಸಾರ್ವಜನಿಕರು. ಬೆಳಗ್ಗೆ 9.30ರಿಂದ ಆರಂಭ ವಾಗಲಿರುವ ಜನತಾ ದರ್ಶನ.
ಅಹವಾಲು ಆಲಿಕೆಗೆ 1000 ಸಿಬ್ಬಂದಿ: ಭದ್ರತೆಗೆ 550 ಪೊಲೀಸ್ ನಿಯೋಜನೆ
ಜನಸ್ಪಂದನ ಕಾರ್ಯಕ್ರಮದ ಭದ್ರತೆಗೆ ಒಬ್ಬರು ಡಿಸಿಪಿ, ಮೂರು ಮಂದಿ ಎಸಿಪಿ, 10 ಮಂದಿ ಇನ್ಸ್ಪೆಕ್ಟರ್, 15 ಮಂದಿ ಪಿಎಸ್ಐ, ಪಿಸಿ-ಗೃಹರಕ್ಷಕ ಸಿಬ್ಬಂದಿ ಸೇರಿದಂತೆ 550 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಜತೆಗೆ ಅಹವಾಲು ಸ್ವೀಕಾರ ಹಾಗೂ ಪರಿಶೀಲನೆಗೆ ವಿವಿಧ ಇಲಾಖೆಗಳಿಂದ 350 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನೇಮಿಸಿದ್ದು, ಸಹಾಯಕ ಸಿಬ್ಬಂದಿ ಸೇರಿದಂತೆ ಒಟ್ಟು 1,000 ಸಿಬ್ಬಂದಿ ಕರ್ತವ್ಯದಲ್ಲಿ ಇರಲಿದ್ದಾರೆ ಎಂದು ತಿಳಿದುಬಂದಿದೆ.
ಗಂಗಾವತಿಯಲ್ಲಿ ಜನತಾ ದರ್ಶನ: ಬರುವ ದಿನಗಳಲ್ಲಿ “ನಿಮ್ಮೊಂದಿಗೆ ನಾನು” ಕಾರ್ಯಕ್ರಮ, ಜನಾರ್ಧನ ರೆಡ್ಡಿ
ವೆಬ್ಸೈಟ್, ಫೋನ್ನಲ್ಲೂ ಅಹವಾಲು ಸಲ್ಲಿಸಬಹುದು
ಜನತಾದರ್ಶನ ಕುರಿತು ಹೆಚ್ಚಿನ ಮಾಹಿತಿಗೆ https://ipgrs.karnataka.gov.in ವೆಬ್ಸೈಟ್ಗೆ ಭೇಟಿ ನೀಡಬಹುದು ಎಂದು ಮುಖ್ಯಮಂತ್ರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.
* ದೂರು ಸಲ್ಲಿಸಲು ಸಹಾಯವಾಣಿ: 1902
ಹೆಚ್ಚಿನ ಮಾಹಿತಿಗೆ : https://ipgrs.karnataka.gov.in
ಆಧಾರ್ ಕಾರ್ಡ್, ಪಡಿತರ ಚೀಟಿ ತನ್ನಿ
ಜನಸ್ಪಂದನ ಕಾರ್ಯಕ್ರಮದಲ್ಲಿ ಅಹವಾಲು ಸಲ್ಲಿಸಲು ಆಗಮಿಸುವ ನಾಗರಿಕರು ತಮ್ಮ ಗುರುತಿಗಾಗಿ ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿಯನ್ನು ತರುವಂತೆ ಕೋರಲಾಗಿದೆ. ಇದರಿಂದ ತಂತ್ರಾಂಶದಲ್ಲಿ ದಾಖಲಿಸುವ ಅರ್ಜಿಗಳ ಸ್ಥಿತಿಗತಿಯನ್ನು ಪತ್ತೆಹಚ್ಚಲು ಅನುಕೂಲವಾಗಲಿದೆ.