ರಾಜ್ಯಾದ್ಯಂತ ನ.12ರಂದು ನಡೆದ ‘ರಾಷ್ಟ್ರೀಯ ಲೋಕ ಅದಾಲತ್‌’ನಲ್ಲಿ ಒಟ್ಟು 14.77 ಲಕ್ಷ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ, ಸಾರ್ವಜನಿಕರಿಗೆ 1,282 ಕೋಟಿ ರು. ಪರಿಹಾರ ಕೊಡಿಸಲಾಗಿದೆ. 

ಬೆಂಗಳೂರು (ನ.15): ರಾಜ್ಯಾದ್ಯಂತ ನ.12ರಂದು ನಡೆದ ‘ರಾಷ್ಟ್ರೀಯ ಲೋಕ ಅದಾಲತ್‌’ನಲ್ಲಿ ಒಟ್ಟು 14.77 ಲಕ್ಷ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ, ಸಾರ್ವಜನಿಕರಿಗೆ 1,282 ಕೋಟಿ ರು. ಪರಿಹಾರ ಕೊಡಿಸಲಾಗಿದೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕರ್ನಾಟಕ ಕಾನೂನು ಸೇವಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್‌ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ಜಿಲ್ಲಾ ನ್ಯಾಯಾಲಯಗಳ 1,013 ಪೀಠಗಳು ಹಾಗೂ ಹೈಕೋರ್ಟ್‌ನ 8 ಪೀಠಗಳು ಸೇರಿ ರಾಜ್ಯಾದ್ಯಂತ ಒಟ್ಟು 1,021 ಪೀಠಗಳು ಅದಾಲತ್‌ ನಡೆಸಿವೆ. 

Add Asianetnews Kannada as a Preferred SourcegooglePreferred

ಹೈಕೋರ್ಟ್‌ ಹಾಗೂ ವಿವಿಧ ನ್ಯಾಯಾಲಯಗಳಲ್ಲಿ ಬಾಕಿಯಿದ್ದ ಒಟ್ಟು 1,76,501 ಪ್ರಕರಣ ಹಾಗೂ 13,00,784 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ 14,77,285 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಈ ಸಂಖ್ಯೆ ಈವರೆಗಿನ ಲೋಕ ಅದಾಲತ್‌ ಇತಿಹಾಸದಲ್ಲಿ ದಾಖಲೆಯಾಗಿದೆ ಎಂದು ವಿವರಿಸಿದರು. ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 4,18,775 ಪ್ರಕರಣಗಳನ್ನು ವಿಲೇವಾರಿ ಮಾಡಿ, ಒಟ್ಟು 23,89,38,021 ರು. ದಂಡ ಸಂಗ್ರಹಿಸಲಾಗಿದೆ. 

ಓಲಾ, ಉಬರ್ ಆಟೋ ಬಿಕ್ಕಟ್ಟು: ಇಂದು ಆರ್‌ಟಿಒ ಅಧಿಕಾರಿಗಳಿಂದ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ

ಒಟ್ಟು 3,384 ಮೋಟಾರು ಅಪಘಾತ ಪ್ರಕರಣಗಳನ್ನು ಇತ್ಯರ್ಥಪಡಿಸಿ, 324,37,74,172 ರು. ಪರಿಹಾರ ಕೊಡಿಸಲಾಗಿದೆ. 10,994 ಚೆಕ್‌ ಬೌನ್ಸ್‌ ಪ್ರಕರಣಗಳನ್ನು ವಿಲೇವಾರಿ ಮಾಡಿ, ಒಟ್ಟು 328,94,26,020 ರು. ಪರಿಹಾರ ಕಲ್ಪಿಸಲಾಗಿದೆ. ಬೆಂಗಳೂರಿನ ನ್ಯಾಯಾಲಯದಲ್ಲಿ ಬಾಕಿಯಿದ್ದ ಪ್ರಕರಣವೊಂದರಲ್ಲಿ 32 ಕೋಟಿ ಪರಿಹಾರ ಕೊಡಿಸಿ ಇತ್ಯರ್ಥಪಡಿಸಲಾಗಿದೆ ಎಂದರು.

ಹಾಗೆಯೇ, ಒಟ್ಟು 1,460 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಸುಮಾರು 174 ಪ್ರಕರಣಗಳಲ್ಲಿ ದಂಪತಿ ಮತ್ತೆ ಒಂದಾಗಿದ್ದಾರೆ. ಬೆಂಗಳೂರಿನ 32, ಮೈಸೂರಿನ 29, ಬೆಳಗಾವಿಯ 18 ಹಾಗೂ ಧಾರವಾಡದ 17 ದಂಪತಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಂಪತಿಗಳು ರಾಜೀ ಸಂಧಾನದಿಂದ ಮತ್ತೆ ಒಂದಾಗಿ ಜೀವನ ಮುಂದುವರಿಸಲು ನಿರ್ಧರಿಸಿದ್ದಾರೆ. ಮುರಿದು ಹೋಗುತ್ತಿದ್ದ ಸಂಬಂಧಗಳನ್ನು ಮತ್ತೆ ಒಂದಾಗಿಸಿದ ಸಂತೋಷ ತಮಗಿದೆ ಎಂದು ನ್ಯಾ.ವೀರಪ್ಪ ಹರ್ಷ ವ್ಯಕ್ತಪಡಿಸಿದರು.

PSI Recruitment Scam: 20 ಲಕ್ಷ ಪಡೆದು ಉತ್ತರ ಹೇಳಿದ್ದವ ಸೆರೆ

ಖಾತೆ ಬದಲಾವಣೆ, ಗುರುತಿನ ಚೀಟಿ ವಿತರಣೆ, ಪಿಂಚಣಿ ಮುಂತಾದ ಕಂದಾಯ ಅಧಿಕಾರಿಗಳ ಮುಂದೆ ಬಾಕಿಯಿರುವ ಒಟ್ಟು 2,65,391 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಅದಕ್ಕೆ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ಕಂದಾಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದ್ದರು ಎಂದು ನ್ಯಾಯಮೂರ್ತಿಗಳು ತಿಳಿಸಿದರು.