Reservation Fight: EWS ಹಂಚಿಕೆಯಿಂದ ಮುಸ್ಲಿಮರಿಗೆ ಶೇ.8 ಮೀಸಲಾತಿ ಲಭ್ಯ: ಮಾಧುಸ್ವಾಮಿ
ರಾಜ್ಯದಲ್ಲಿ EWS ಮೀಸಲಾತಿ ಬಳಕೆ ಮಾಡಿಕೊಳ್ಳುವ ಬ್ರಾಹ್ಮಣ ಮತ್ತು ಜೈನ ಸಮುದಾಯದವರು ಶೇ.1.5ರಷ್ಟು ಮಾತ್ರ ಇದ್ದಾರೆ. ಬಾಕಿ ಶೇ.8ಕ್ಕೂ ಅಧಿಕ ಮೀಸಲಾತಿ ಪಡೆಯಲು ಮುಸ್ಲಿಮರನ್ನು ಇಡಬ್ಲ್ಯೂಎಸ್ಗೆ ಸೇರ್ಪಡೆ ಮಾಡಲಾಗಿದೆ.
ತುಮಕೂರು (ಮಾ.26): ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ (EWS) ಮೀಸಲಾತಿಯನ್ನು ಬಳಕೆ ಮಾಡಿಕೊಳ್ಳುವ ಬ್ರಾಹ್ಮಣ ಮತ್ತು ಜೈನ ಸಮುದಾಯದವರು ಶೇ.1.5ರಷ್ಟು ಮಾತ್ರ ಇದ್ದಾರೆ. ಬಾಕಿ ಶೇ.8ಕ್ಕೂ ಅಧಿಕ ಮೀಸಲಾತಿಯನ್ನು ಪಡೆಯಲು ಅನುಕೂಲ ಆಗುವಂತೆ ದೊಡ್ಡ ಸಮುದಾಯ ಮುಸ್ಲಿಮರನ್ನು ಇಡಬ್ಲ್ಯೂಎಸ್ಗೆ ಸೇರ್ಪಡೆ ಮಾಡಲಾಗಿದೆ. ಇದರಿಂದ ಹಿಂದಿನ ಮೀಸಲಾತಿಗಿಂತ ಹೆಚ್ಚು ಅನುಕೂಲ ಆಗಲಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಳ ಮೀಸಲಾತಿ ಹೆಚ್ಚಳ ನಿರ್ಧಾರಕ್ಕೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಅವರು ಟೀಕೆ ಮಾಡುವ ಪಾತ್ರವನ್ನ ಅಭಿನಯಿಸುತ್ತಿದ್ದಾರೆ. ಮುಖ್ಯವಾಗಿ ಸಿದ್ದರಾಮಯ್ಯ ಅವರು ಆತ್ಮಸಾಕ್ಷಿಯಾಗಿ ಮಾತನಾಡಿರುವ ವಿಚಾರ ಅಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಹೇಳಿರೋ ಮಾತು. ಮುಸ್ಲಿಂ ಸಮುದಾಯಕ್ಕೆ ಆರ್ಥಿಕ ಹಿಂದುಳಿದ ವರ್ಗದ ಮೀಸಲಾತಿ ಕಲ್ಪಿಸಿರುವುದರಿಂದ ಒಳ್ಳೆಯದಾಗಿದೆ ಎಂದು ನಾವು ಭಾವಿಸಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಬ್ರಾಹ್ಮಣರು ಮತ್ತು ಜೈನರೊಂದಿಗೆ ಮುಸ್ಲಿಮರ ಪೈಪೋಟಿ ಸಾಧ್ಯವಿಲ್ಲ: ಶಾಫಿ ಸಅದಿ
EWS ಶೇ.10 ಮೀಸಲಾತಿ ಎಸ್ಸಿ-ಎಸ್ಟಿಗೆ ಹಂಚಿಕೆ ಚಿಂತನೆ: ಕೇಂದ್ರ ಸರ್ಕಾರದಿಂದ EWSನಲ್ಲಿ ಶೇ.10 ಮಿಸಲಾತಿ ಕೊಟ್ಟಿದ್ದರು. ಆದರೆ, ಆರ್ಥಿಕ ಹಿಂದುಳಿದ ವರ್ಗಗಳನ್ನು ಮೇಲೆತ್ತುವ ಸಮುದಾಯ (ಲಿಫ್ಟ್ ಓವರ್ ಕಮ್ಯೂನಿಟಿಸ್) ಶೇ.3.5ಗಿಂತ ಹೆಚ್ಚು ಇರಲಿಲ್ಲ. ಇನ್ನು ಆದಾಯ 8 ಲಕ್ಷಕ್ಕಿಂತ ಕಡಿಮೆ ಇರೋರು ಬಹಳ ಕಡಿಮೆ ಇದ್ದರು. ಒಟ್ಟಾರೆ ಕೇಂದ್ರ ಸರ್ಕಾರದ ಈ ಮೀಸಲಾತಿಯಿಂದ ಶೇ.1 ರಿಂದ ಶೇ.1.5 ಇರೋರಿಗೆ ಬರೋಬ್ಬರಿ ಶೇ.10 ಮೀಸಲಾತಿ ನೀಡಲು ಆಗುತ್ತಿರಲಿಲ್ಲ. ಆದ್ದರಿಂದ ನಾವು ಪರಿಶಿಷ್ಟ ಜಾತಿ (ಎಸ್ ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್ ಟಿ) ಮೀಸಲಾತಿ ಹೆಚ್ಚಳ ಮಾಡಿದಾಗ EWSನಲ್ಲಿ ಸ್ವಲ್ಪ ಕೋಟಾನಾ ಬಳಸಿಕೊಳ್ಳೋಣ ಎಂದುಕೊಂಡಿದ್ದೆವು. ಶೇ.10% ಇಡಬ್ಲ್ಯೂಎಸ್ ಮೀಸಲಾತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳದೇ ಸ್ವಲ್ಪ ರೆಡ್ಯೂಸ್ ಮಾಡ್ತಿವಿ ಅಂತಾ ಭಾವಿಸಿದ್ದೆವು. ಆದರೆ, ಅದು ಸಾಧ್ಯವಾಗಲಿಲ್ಲ ಎಂದರು.
ದೊಡ್ಡ ಸಮುದಾಯದ ಸೇರ್ಪಡೆಯಿಂದ ಸದ್ಬಳಕೆ: ಕೇಂದ್ರ ಸರ್ಕಾರದವರು ಇಡಬ್ಲ್ಯೂಎಸ್ ಮೀಸಲಾತಿಯಲ್ಲಿ ಭಾರೀ ಸ್ಪಷ್ಟವಾಗಿ ಇದ್ದರು. ಆರ್ಥಿಕವಾಗಿ ಹಿಂದುಳಿದ ವರ್ಗದ ಶೇ.10 ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ಟಚ್ ಮಾಡಂಗಿಲ್ಲ. ಅದನ್ನು ಹಿಂದುಳಿದ ವರ್ಗ, ಎಸ್ಸಿ, ಎಸ್ಟಿಗೆ ಬಳಸೋಕೆ ಬಿಡಲ್ಲ. ಅದನ್ನು EWS ಆಗಿಯೇ ಉಳಿಸಬೇಕು ಎಂದು ಹೇಳಿದ್ದರು. ಹಾಗಾಗಿ ಅದನ್ನು ನಾವು ಟಚ್ ಮಾಡೊಕೆ ಆಗಿಲ್ಲ. ಆಗ ನಮಗೆ ಆಯ್ಕೆ ಇದ್ದಿದ್ದು ಒಂದೇ, ಯಾವುದಾದರೂ ಒಂದು ದೊಡ್ಡ ಸಮುದಾಯವನ್ನು ಮೀಸಲಾತಿಯಿಂದ ಹೊರತೆಗೆದು EWSನಲ್ಲಿ ಸೇರಿಕೆ ಮಾಡುವುದು. ಆದ್ದರಿಂದ ರಾಜ್ಯದ ಜನಸಂಖ್ಯೆಯಲ್ಲಿ ಶೇ. 8 ರಿಂದ ಶೇ.10 ಇರುವ ಮುಸ್ಲಿಂ ಸಮುದಾಯವನ್ನು 2ಬಿಯಿಂದ ತೆಗೆದು ಇಡಬ್ಲ್ಯೂಎಸ್ಗೆ ಸೇರ್ಪಡೆ ಮಾಡುವುದು ಎಂದು ಮಾಹಿತಿ ನೀಡಿದರು.
ಮುಸ್ಲಿಮರನ್ನು 3 ವರ್ಗದಲ್ಲಿ ಹಂಚಿಕೆ ಮಾಡಲಾಗಿತ್ತು: ಈ ಮೊದಲು ಮುಸ್ಲಿಂ ಸಮುದಾಯವನ್ನು 3 ಕೆಟಗರಿಯಲ್ಲಿ ಹಂಚಿಕೆ ಮಾಡಲಾಗಿತ್ತು. ಕೆಲವು ಮುಸಲ್ಮಾನರು ಪ್ರವರ್ಗ 1ರಲ್ಲಿ ಇದ್ದಾರೆ. ಇನ್ನು ಕೆಲವರು ಪ್ರವರ್ಗ 2ಎ ನಲ್ಲಿ ಇದ್ದಾರೆ. ಇನ್ನು ಬಹುಪಾಲು ಮುಸ್ಲಿಮರನನ್ನು ಪ್ರವರ್ಗ 2ಬಿನಲ್ಲಿ ಇಡಲಾಗಿತ್ತು. ಈಗ 2ಬಿಯಿಂದ ತೆಗೆದಿದ್ದರಿಂದ ಶೇ.4%ಗಾಗಿ ಫೈಟ್ ಮಾಡ್ತಾ ಇದ್ದವರಿಗೆ ಮೀಸಲಾತಿ ಪ್ರಮಾಣ ಹೆಚ್ಚು ಸಿಗಲಿದೆ. ಈಗ ಶೇ.10 ಮೀಸಲಾತಿಯಲ್ಲಿ ಅವರು ಮೀಸಲಾತಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಸಂವಿಧಾನಕ್ಕೆ ವಿರುದ್ಧವಾಗಿ ಮುಸ್ಲಿಮರು 4% ಮೀಸಲಾತಿ ಪಡೆದುಕೊಂಡಿದ್ರು: ಪ್ರತಾಪ್ ಸಿಂಹ
ಬ್ರಾಹ್ಮಣರೊಂದಿಗೆ ಫೈಟ್ ಮಾಡುವಾಗತ್ಯವೇ ಇಲ್ಲ: ಈಗ ಮುಸ್ಲಿಮರಿಗೆ ಇರುವ ಭಾವನೆ ಏನೆಂದರೆ ನಾವು ಬ್ರಾಹ್ಮಣರು ಮತ್ತು ಇತರೆ ಸಮುದಾಯದ ಜೊತೆ ಫೈಟ್ ಮಾಡಿಲ್ಲಿಕೆ ಆಗೊಲ್ಲ ಅನ್ನೋದು. ಆದರೆ, ನಾವು ಅವರಿಗೆ ಕನ್ವಿನ್ಸ್ ಮಾಡ್ತಾ ಇದ್ದೀವಿ. ವಾರ್ಷಿಕ ಆದಾಯದಲ್ಲಿ 8 -10 ಲಕ್ಷ ರೂ. ಆದಾಯ ಇರುವ ಬ್ರಾಹ್ಮಣರು ಕೂಡ ಆರ್ಥಿಕ ಹಿಂದುಳಿದ ವರ್ಗದ (EWS)ಕೆಟಗೆರಿನಲ್ಲಿ ಇಲ್ಲ. ಅವರೆಲ್ಲರೂ ಜನರಲ್ ಕೆಟಗರಿಯಲ್ಲೇ ಬರುತ್ತಾರೆ. ಆದರೂ, ಬಹಳಷ್ಟು ಕಡಿಮೆ ಜನರಿಗೆ ಶೇ.10 ಮೀಸಲಾತಿಯ ಸ್ಕೋಪ್ ಸಿಗ್ತಾ ಇದೆ. ಅದನ್ನು ಮುಸ್ಲಿಮರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮಾಧುಸ್ವಾಮಿ ಹೇಳಿದರು.