ಸರ್ಕಾರಿ ಆಹ್ವಾನ ಪತ್ರಿಕೆಯಲ್ಲಿ ಉರ್ದು ಭಾಷೆ ಬಳಸಿದ್ದಕ್ಕೆ ವಿಪಕ್ಷಗಳು ಮತ್ತು ಕನ್ನಡ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಆರೋಪಗಳನ್ನು ತಳ್ಳಿಹಾಕಿದ್ದು, ತಾವು ಯಾರನ್ನೂ ಓಲೈಕೆ ಮಾಡುತ್ತಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರು (ಫೆ.25): ಸರ್ಕಾರಿ ಆಹ್ವಾನ ಪತ್ರಿಕೆಯಲ್ಲಿ ಉರ್ದು ಭಾಷೆ ಬಳಕೆ ವಿಚಾರವಾಗಿ ಭಾರಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ರಾಜ್ಯ ಸರ್ಕಾರದ ಈ ನಡೆಯನ್ನು ವಿರೋಧ ಪಕ್ಷದ ನಾಯಕರು ತೀವ್ರವಾಗಿ ಖಂಡಿಸಿದ್ದು, ಇದು ಒಲೈಕೆ ರಾಜಕಾರಣದ ಪರಮಾವಧಿ ಎಂದು ಕಿಡಿಕಾರಿದ್ದಾರೆ. ಒಂದು ಕಡೆ ಕನ್ನಡವೇ ಮೊದಲು ಎಂದು ಘೋಷಿಸುವ ಸರ್ಕಾರ, ಇನ್ನೊಂದು ಕಡೆ ಸರ್ಕಾರಿ ಪತ್ರಿಕೆಯಲ್ಲೇ ಉರ್ದು ಬಳಸುತ್ತಿದೆ. ಈ ಹಿಂದೆ ಕೇಂದ್ರದ ಕಾರ್ಯಕ್ರಮಗಳಲ್ಲಿ ಹಿಂದಿ ಬಳಸಿದ್ದಕ್ಕೆ ಆಕ್ಷೇಪ ಎತ್ತಿದ್ದ ಸರ್ಕಾರಕ್ಕೆ ಈಗ ಉರ್ದು ಬಳಸಿರುವುದು ಸರಿ ಎನಿಸುತ್ತಿದೆಯೇ? ಎಂದು ವಿಪಕ್ಷಗಳು ನೇರ ಪ್ರಶ್ನೆ ಹಾಕಿವೆ.

ವಿಪಕ್ಷಗಳದ್ದು ಟೀಕಿಸುವುದೇ ಚಾಳಿ; ಯಾರನ್ನೂ ಓಲೈಕೆ ಮಾಡಿಲ್ಲ ಎಂದ ಸಿಎಂ

ವಿರೋಧ ಪಕ್ಷಗಳ ಟೀಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು, 'ಎಲ್ಲದಕ್ಕೂ ಪ್ರತಿಭಟನೆ ಮಾಡುವುದು ವಿರೋಧ ಪಕ್ಷಗಳಿಗೆ ಒಂದು ಚಾಳಿಯಾಗಿದೆ, ನಾವು ಯಾರನ್ನೂ ಓಲೈಕೆ ಮಾಡುತ್ತಿಲ್ಲ' ಎಂದು ಸಮರ್ಥಿಸಿಕೊಂಡರು. ಇದೇ ವೇಳೆ ಉರ್ದು ಬಳಕೆಯ ನೇರ ಪ್ರಶ್ನೆಯಿಂದ ನುಣುಚಿಕೊಂಡ ಸಿಎಂ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 'ನರೇಂದ್ರ ಮೋದಿಯವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದರು, ಹತ್ತು ವರ್ಷಗಳಲ್ಲಿ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ?' ಎಂದು ಪ್ರಶ್ನಿಸಿದ ಅವರು, ಒಳಮೀಸಲಾತಿ ಕಾರಣದಿಂದ ಉದ್ಯೋಗ ನೀಡಿಕೆ ವಿಳಂಬವಾಗುತ್ತಿದೆಯೇ ಹೊರತು ನಾವು ಕೊಟ್ಟ ಭರವಸೆಯಂತೆ ಉದ್ಯೋಗ ನೀಡಿಯೇ ತೀರುತ್ತೇವೆ ಎಂದರು.

ಉರ್ದು ಭಾಷೆ ಬಳಕೆಗೆ ಕನ್ನಡ ಸಂಘಟನೆಗಳ ಗರಂ

ಸರ್ಕಾರಿ ಆಹ್ವಾನ ಪತ್ರಿಕೆಯಲ್ಲಿ ಉರ್ದು ಬಳಕೆ ವಿಚಾರದಲ್ಲಿ ಕೇವಲ ರಾಜಕೀಯವಲ್ಲದೆ, ಈಗ ಕನ್ನಡ ಸಂಘಟನೆಗಳು ಸಹ ಅಖಾಡಕ್ಕಿಳಿದಿವೆ. 'ಕರ್ನಾಟಕದ ಆಡಳಿತ ಭಾಷೆ ಕನ್ನಡವಾಗಿರುವಾಗ ಉರ್ದು ಬಳಕೆಯ ಅಗತ್ಯವೇನಿತ್ತು? ಯಾರು ಬಂದು ಉರ್ದು ಬೇಕೆಂದು ಕೇಳಿದ್ದರು?' ಎಂದು ಕನ್ನಡ ಪರ ಹೋರಾಟಗಾರರು ಪ್ರಶ್ನಿಸಿದ್ದಾರೆ. ಕೇವಲ ರಾಜ್ಯೋತ್ಸವದಂದು ಮಾತ್ರ ಕನ್ನಡದ ಬಗ್ಗೆ ಮಾತನಾಡಿ, ಉಳಿದ ದಿನಗಳಲ್ಲಿ ಇಲಾಖೆ ಕೆಲಸಗಳಲ್ಲಿ ಕನ್ನಡವನ್ನು ಮರೆಯುತ್ತಿರುವುದು ಖಂಡನೀಯ. ಯಾವುದೇ ಧರ್ಮದವರಿದ್ದರೂ ಅವರನ್ನು ಕನ್ನಡಿಗರನ್ನಾಗಿ ಮಾಡುವುದು ಸರ್ಕಾರದ ಕೆಲಸವೇ ಹೊರತು ಅವರಿಗೆ ಕನ್ನಡ ಬರುವುದಿಲ್ಲ ಎಂದು ಉರ್ದು ಭಾಷೆ ಬಳಸುವುದಲ್ಲ ಎಂದು ಕಿಡಿಕಾರಿವೆ.

ಉಗ್ರ ಹೋರಾಟದ ಎಚ್ಚರಿಕೆ: ಆರೋಗ್ಯ ಇಲಾಖೆಗೆ ಗಡುವು

ಸರ್ಕಾರಿ ಆಹ್ವಾನ ಪತ್ರಿಕೆಯಲ್ಲಿ ಉರ್ದು ಬಳಸಿದ ಕ್ರಮವನ್ನು ಸರ್ಕಾರ ತಕ್ಷಣವೇ ವಾಪಸ್ ಪಡೆಯಬೇಕು ಎಂದು ಕನ್ನಡ ಸಂಘಟನೆಗಳು ಒತ್ತಾಯಿಸಿವೆ. ಆರೋಗ್ಯ ಇಲಾಖೆಯು ಕೂಡಲೇ ಕೇವಲ ಕನ್ನಡದಲ್ಲಿ ಮಾತ್ರ ಆಹ್ವಾನ ಪತ್ರಿಕೆ ಸಿದ್ಧಪಡಿಸಬೇಕು. 'ನಾವು ಯಾವುದೇ ಭಾಷೆಯ ವಿರೋಧಿಗಳಲ್ಲ, ಆದರೆ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ' ಎಂದು ಎಚ್ಚರಿಕೆ ನೀಡಿವೆ.

YouTube video player