Covid 19 Variant: ಒಮಿಕ್ರೋನ್ ಚಿಕಿತ್ಸೆಗೆ 7,051 ಐಸಿಯು ಬೆಡ್: ಸುಧಾಕರ್
* 30 ಸಾವಿರ ಆಕ್ಸಿಜನ್ ಬೆಡ್ಗೂ ವ್ಯವಸ್ಥೆ
* ಒಮಿಕ್ರೋನ್ ಎದುರಿಸಲು ರಾಜ್ಯ ಸಜ್ಜು: ಸಚಿವ ಡಾ. ಸುಧಾಕರ್
* ಸಕಲ ಸಿದ್ಧತೆಗೆ ಸಿಎಂ ಕಟ್ಟುನಿಟ್ಟಿನ ಸೂಚನೆ
ಬೆಂಗಳೂರು(ಡಿ.27): ರಾಜ್ಯದಲ್ಲಿ(Karnataka) ಒಮಿಕ್ರೋನ್ ನಿರೀಕ್ಷೆಗೂ ಮೀರಿ ವೇಗವಾಗಿ ಹರಡುತ್ತಿದೆ. ರಾಜ್ಯ ಸರ್ಕಾರ ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಐಸಿಯು ಬೆಡ್ಗಳ ಸಂಖ್ಯೆಯನ್ನು 3860ರಿಂದ 7,051ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೆ 30 ಸಾವಿರ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಿದ್ದೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್(Dr K Sudhakar) ಹೇಳಿದ್ದಾರೆ. ಒಮಿಕ್ರೋನ್(Omicron) ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಭಾನುವಾರ ಬೆಳಗ್ಗೆ ಮಹತ್ವದ ಸಭೆ ನಡೆಸಿದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಸುಧಾಕರ್, ‘ರಾಜ್ಯದಲ್ಲಿ ಕೊರೋನಾ(Coronavirus) ನಿರೀಕ್ಷೆಗೂ ಮೀರಿ ಹರಡುತ್ತಿದೆ. ಹೀಗಾಗಿ ಸೋಂಕು ತಡೆಯುವ ಕ್ರಮಗಳು, ಲಸಿಕೆ, ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳ ಕುರಿತು ಚರ್ಚೆ ಮಾಡಲಾಗಿದೆ. ರಾಜ್ಯದಲ್ಲಿ ಎರಡನೇ ಅಲೆ ವೇಳೆಯಲ್ಲೇ 3,860 ಐಸಿಯು ಬೆಡ್(ICU Bed) ವ್ಯವಸ್ಥೆ ಮಾಡಲಾಗಿತ್ತು. ಇದೀಗ 3,191 ಬೆಡ್ ಹೆಚ್ಚಿಸಿದ್ದು ಒಟ್ಟು 7,051 ಬೆಡ್ಗಳನ್ನು ಐಸಿಯು ಬೆಡ್ಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಉಳಿದಂತೆ 30 ಸಾವಿರ ಆಕ್ಸಿಜನ್ ಬೆಡ್ಗಳನ್ನು ಸಿದ್ಧಪಡಿಸಿದ್ದೇವೆ. ಜತೆಗೆ ಆಕ್ಸಿಜನ್ ಲಭ್ಯತೆ, ಔಷಧಗಳ ಬಗ್ಗೆಯೂ ವ್ಯವಸ್ಥೆ ಮಾಡಿದ್ದೇವೆ. ಒಮಿಕ್ರೋನ್ ಸೋಂಕಿನ ಚಿಕಿತ್ಸೆ(Treatment) ಬಗ್ಗೆ ಈಗಾಗಲೇ ವೈದ್ಯಕೀಯ ಚಿಕಿತ್ಸಾ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ವೈದ್ಯರಿಗೂ ಸೂಕ್ತ ಮಾಹಿತಿ ಒದಗಿಸಲಾಗಿದೆ. ಹೀಗಾಗಿ ರಾಜ್ಯವು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ’ ಎಂದು ಹೇಳಿದರು.
Omicron Threat: ಕಠಿಣ ಕ್ರಮ ಅನಿವಾರ್ಯ, ನೈಟ್ ಕರ್ಫ್ಯೂ ಮರುಪರಿಶೀಲಿಸಲ್ಲ: ಬೊಮ್ಮಾಯಿ
ಒಮಿಕ್ರೋನ್ ಪತ್ತೆಗೆ ಉಪಕರಣ ಖರೀದಿ
‘ಒಮಿಕ್ರೋನ್ ವೇಗವಾಗಿ ಹರಡುತ್ತದೆ ಎಂದು ತಿಳಿದುಬಂದಿದೆ. ಹೀಗಾಗಿ ರಾಜ್ಯದಲ್ಲಿ ಒಮಿಕ್ರೋನ್ ಮಾದರಿಯನ್ನು ವೇಗವಾಗಿ ಪತ್ತೆ ಮಾಡಿ ಚಿಕಿತ್ಸೆ ಒದಗಿಸಿದರೆ ಸೋಂಕು ನಿಯಂತ್ರಿಸಬಹುದು. ಹೀಗಾಗಿ ಒಮಿಕ್ರೋನ್ ತಳಿಯನ್ನು ವೇಗವಾಗಿ ಪತ್ತೆ ಮಾಡಲು ಥರ್ಮೊ ಫಿಷರ್ ಎಂಬ ಸಾಧನವನ್ನು ಖರೀದಿಸಲು ಮುಖ್ಯಮಂತ್ರಿಗಳು(Chief Minister) ಒಪ್ಪಿಗೆ ನೀಡಿದ್ದಾರೆ’ ಎಂದು ಸುಧಾಕರ್ ತಿಳಿಸಿದರು.
ಸಕಲ ಸಿದ್ಧತೆಗೆ ಸಿಎಂ ಕಟ್ಟುನಿಟ್ಟಿನ ಸೂಚನೆ
ಬೆಂಗಳೂರು: ಸಂಭವನೀಯ ಕೊರೋನಾ ಅಲೆಯನ್ನು ನಿಭಾಯಿಸಲು ಅಗತ್ಯ ಐಸಿಯು ಬೆಡ್, ಆಕ್ಸಿಜನ್ ಬೆಡ್(Oxygen Bed) ಹಾಗೂ ಆಕ್ಸಿಜನ್, ಅಗತ್ಯ ಔಷಧಗಳ ಸಿದ್ಧತೆಗೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
Omicron Threat: ಜ.3ರಿಂದ ರಾಜ್ಯದ 43 ಲಕ್ಷ ಮಕ್ಕಳಿಗೆ ಲಸಿಕೆ
ಭಾನುವಾರ ಬೆಳಗ್ಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಕೊರೋನಾ ಕಾರ್ಯಪಡೆ ಸದಸ್ಯರು, ಸಚಿವರು, ಹಿರಿಯ ಅಧಿಕಾರಿಗಳು, ಕೊರೋನಾ ತಾಂತ್ರಿಕ ಸಲಹಾ ಸಮಿತಿ(Corona Technical Advisory Committee) ಸದಸ್ಯರೊಂದಿಗೆ ಬಸವರಾಜ ಬೊಮ್ಮಾಯಿ ಅವರು ಸುದೀರ್ಘವಾಗಿ ಚರ್ಚೆ ನಡೆಸಿದರು.
ಈ ವೇಳೆ ಈಗಾಗಲೇ 38 ಮಂದಿಗೆ ರಾಜ್ಯದಲ್ಲಿ ಒಮಿಕ್ರೋನ್ ಸೋಂಕು ಹರಡಿದೆ. ವಿದೇಶಿ ಪ್ರಯಾಣ ಹಿನ್ನೆಲೆ ಇಲ್ಲದವರಿಗೂ ಸೋಂಕು ಕಾಣಿಸಿಕೊಳ್ಳುತ್ತಿದೆ. ದೇಶಾದ್ಯಂತ 400ಕ್ಕೂ ಹೆಚ್ಚು ಪ್ರಕರಣ ದೃಢಪಟ್ಟಿದ್ದು, ಮೂರನೇ ಅಲೆಯ ಸಾಧ್ಯತೆ ಬಗ್ಗೆ ಕೇಂದ್ರ ಸರ್ಕಾರ(Central Government) ಎಚ್ಚರಿಕೆ ನೀಡಿದೆ. ಹೀಗಾಗಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದು ಸ್ಪಷ್ಟ ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸಚಿವರಾದ ಆರಗ ಜ್ಞಾನೇಂದ್ರ(Araga Jnanendra), ಆರ್. ಅಶೋಕ್(R Ashok) ಸೇರಿದಂತೆ ಕೊರೋನಾ ಕಾರ್ಯಪಡೆ ಸದಸ್ಯರು, ಹಿರಿಯ ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಹಾಜರಿದ್ದರು.