Asianet Suvarna News Asianet Suvarna News

Covid Crisis in Karnataka: ಇಡೀ ಏಪ್ರಿಲ್‌ನಲ್ಲಿ ಕೋವಿಡ್‌ಗೆ ಕೇವಲ 5 ಬಲಿ..!

*  ರಾಜ್ಯದಲ್ಲಿ ಕೊರೋನಾ ಉತ್ತುಂಗಕ್ಕೇರಿದ ನಂತರ 2 ವರ್ಷದಲ್ಲೇ ಅತಿ ಕನಿಷ್ಠ
*  ಲಸಿಕೆ, ಚಿಕಿತ್ಸೆ, ಆರೋಗ್ಯದ ಬಗ್ಗೆ ಜನರಲ್ಲಿ ಕಾಳಜಿಯಿಂದ ಸಾವು ಇಳಿಕೆ?
*  ಮೇ ತಿಂಗಳಲ್ಲಿ 15,523 ಜನರು ಬಲಿ 

5 Killed Due to Coronavirus in April at Karnataka grg
Author
Bengaluru, First Published May 4, 2022, 6:09 AM IST

ರಾಕೇಶ್‌ ಎನ್‌.ಎಸ್‌.

ಬೆಂಗಳೂರು(ಮೇ.04): ರಾಜ್ಯಕ್ಕೆ(Karnataka) ಕೊರೋನಾ(Coronavirus) ಕಾಲಿಟ್ಟ ಕಾಲದಿಂದ ಹಿಡಿದು ಇದುವರೆಗೂ ಅತ್ಯಂತ ಕಡಿಮೆ ಸಾವು ಕಂಡ ಮಾಸ ಏಪ್ರಿಲ್‌! 2022ರ ಏಪ್ರಿಲ್‌ ಮಾಸದಲ್ಲಿ ಐದು ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ(Death). ಇದು ಕೊರೋನಾ ಅವಧಿಯ ಅತಿ ಕಡಿಮೆ ಸಾವು ಎಂದು ಪರಿಗಣಿಸಬಹುದು. ಏಕೆಂದರೆ, ರಾಜ್ಯಕ್ಕೆ ಕೊರೋನಾ ಕಾಲಿಟ್ಟಿದ್ದು 2020ರಲ್ಲಿ. ಆ ವರ್ಷದ ಏಪ್ರಿಲ್‌ನಲ್ಲಿ ಮೂವರು ಕೊರೋನಾಗೆ ಬಲಿಯಾಗಿದ್ದರು. ಅನಂತರ ನಿತ್ಯ ಈ ಸಾವಿನ ಸಂಖ್ಯೆ ಏರಿಕೆಯಲ್ಲೇ ಸಾಗಿ ಕ್ರಮೇಣ ಇಳಿಕೆಯಾಗಿದೆ. ಕಳೆದ ಏಪ್ರಿಲ್‌ನಲ್ಲಿ 5 ಸಾವಿಗೆ ಇಳಿಕೆಯಾಗಿದೆ. ತನ್ನ ಉತ್ತುಂಗದ ಅವಧಿಯಲ್ಲಿ ಅಂದರೆ ಬರೋಬ್ಬರಿ ಒಂದು ವರ್ಷದ ಹಿಂದೆ (2021 ಮೇ ತಿಂಗಳಲ್ಲಿ) 15,523 ಸಾವು ಸಂಭವಿಸಿದ್ದು ರಾಜ್ಯದ ಇದುವರೆಗಿನ ಅತಿ ಹೆಚ್ಚಿನ ಸಾವಾಗಿತ್ತು. ಆ ತಿಂಗಳಿನಲ್ಲಿ ನಿತ್ಯ ಸರಾಸರಿ 500 ಸಾವು ಸಂಭವಿಸುತ್ತಿದ್ದವು!

ದುರ್ಬಲವಾದ ಕೊರೋನಾ, ಬಹುತೇಕರಿಗೆ ಲಸಿಕೆ (Vaccine) ನೀಡಿಕೆ, ಆಸ್ಪತ್ರೆಗಳಲ್ಲಿ ಉತ್ತಮ ಸೌಲಭ್ಯ, ಆರೋಗ್ಯದ ಬಗ್ಗೆ ಜನರಲ್ಲಿ ಕಾಳಜಿ ಪರಿಣಾಮ ರಾಜ್ಯದಲ್ಲಿ ಈಗ ಸೋಂಕಿನ ಪ್ರಮಾಣ ಹಾಗೂ ಸಾವಿನ ಪ್ರಮಾಣ ಕಡಿಮೆಯಾಗಿದೆ. 2022 ಸಾಲಿನ ಏಪ್ರಿಲ್‌ 4 ಮತ್ತು 6ರಂದು ಬೆಂಗಳೂರು ನಗರದಲ್ಲಿ ತಲಾ ಒಬ್ಬರು, ಏ.8ರಂದು ಗದಗದಲ್ಲಿ ಒಬ್ಬರು ಮತ್ತು ಏ.30ರಂದು ಬೆಳಗಾವಿ ಮತ್ತು ವಿಜಯಪುರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ತನ್ಮೂಲಕ ಈ ಮಾಸ ಅತ್ಯಂತ ಕಡಿಮೆ ಸಾವು ಕಂಡ ತಿಂಗಳು ಎನಿಸಿದೆ.

Covid Crisis: ಕರ್ನಾಟಕದಲ್ಲಿ ಕೊರೋನಾ ಪಾಸಿಟಿವಿಟಿ ದರ ದಿನದಿಂದ ದಿನಕ್ಕೆ ಏರಿಕೆ..!

ರಾಜ್ಯದಲ್ಲಿ ಕೋವಿಡ್‌(Covid-19) ಮೊದಲ ಬಾರಿಗೆ ಕಾಣಿಸಿಕೊಂಡ 2020ರ ಮಾಚ್‌ರ್‍ನಲ್ಲಿ ಮೂವರು ಮೃತರಾಗಿದ್ದರು. ನಂತರದ ಏಪ್ರಿಲ್‌ನಲ್ಲಿ 21 ಜನರು ಮೇ ತಿಂಗಳಲ್ಲಿ 22 ಸಾವು ಸಂಭವಿಸಿತ್ತು. ನಂತರದ ಪ್ರತಿ ತಿಂಗಳಲ್ಲಿ ನೂರಕ್ಕಿಂತ ಹೆಚ್ಚು ಜನರು ಕೊರೋನಾಗೆ ಬಲಿಯಾಗುತ್ತಿದ್ದರು. ಸೋಂಕು ಪ್ರಕರಣ ಏರಿಕೆಯೊಂದಿಗೆ ಸಾವಿನ ಸಂಖ್ಯೆ ಹೆಚ್ಚಳ ಕಂಡು ಬಂದಿತ್ತು. ಅದರಲ್ಲೂ ಎರಡನೇ ಅಲೆ ತೀವ್ರವಾಗಿದ್ದ 2021ರ ಮೇ ತಿಂಗಳಿನಲ್ಲಿ ಬರೋಬ್ಬರಿ 15,523 ಮಂದಿ ಮೃತಪಟ್ಟಿದ್ದರು.

2022ರ ಜನವರಿಯಲ್ಲಿ ಆರಂಭವಾದ ಮೂರನೇ ಅಲೆ ವೇಳೆ ಸೋಂಕಿನ ಪ್ರಕರಣ ವೇಗವಾಗಿ ಏರಿಕೆ ಆಗಿದ್ದರೂ ಹೆಚ್ಚಿನ ಸಾವು ಸಂಭವಿಸಿರಲಿಲ್ಲ. ಮೂರನೇ ಅಲೆಗೆ ಕಾರಣವಾಗಿದ್ದ ಕೊರೋನಾದ ರೂಪಾಂತರಿ ತಳಿ ‘ಓಮಿಕ್ರೊನ್‌’ ವೇಗವಾಗಿ ಹಬ್ಬಿದ್ದರೂ ಶ್ವಾಸಕೋಶಕ್ಕೆ ಹಾನಿ ಮಾಡುವ ಕ್ಷಮತೆ ಇರಲಿಲ್ಲ, ಹೀಗಾಗಿ ಸಾವಿನ ಸಂಖ್ಯೆ ಕಡಿಮೆ ಆಗಿದೆ. ಜತೆಗೆ ಕೋವಿಡ್‌ಗೆ ಸುಲಭ ತುತ್ತಾಗಿದ್ದ ಹಿರಿಯ ನಾಗರಿಕರು ಲಸಿಕೆ ಪಡೆದಿದ್ದರಿಂದ ಮೂರನೇ ಅಲೆ ಅಷ್ಟೊಂದು ಮಾರಣಾಂತಿಕವಾಗಿರಲಿಲ್ಲ ಎಂದು ತಜ್ಞರು ಹೇಳುತ್ತಾರೆ.

ಮೂರನೇ ಅಲೆ ಉತ್ತುಂಗದಲ್ಲಿದ್ದ ಫೆ.2ರಂದು 81 ಮಂದಿ ಮೃತರಾಗಿದ್ದು ಒಂದು ದಿನದ ಗರಿಷ್ಠ ಸಾವು. ಜತೆಗೆ ಇದೇ ತಿಂಗಳಲ್ಲಿ ಫೆಬ್ರವರಿ ತಿಂಗಳಲ್ಲಿ 952 ಜನರು ಸಾವಿಗೀಡಾಗಿರುವುದು ಸಹ ಮೂರನೇ ಅಲೆಯ ಗರಿಷ್ಠ ಸಾವಿನ ಪ್ರಕರಣವಾಗಿದೆ. ಈ ವರ್ಷದ ಏಪ್ರಿಲ್‌ 30ರವರೆಗೆ ರಾಜ್ಯದಲ್ಲಿ ಒಟ್ಟಾರೆ 40,059 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಬೆಂಗಳೂರು(Bengaluru) ನಗರದಲ್ಲಿ 16,962 ಮಂದಿ ಸಾವನ್ನಪ್ಪಿದ್ದಾರೆ.

Covid Crisis: 'ಕೋವಿಡ್‌ ನಾಲ್ಕನೇ ಅಲೆ ಎದುರಿಸಲು ಉತ್ತರ ಕನ್ನಡ ಜಿಲ್ಲೆ ಸಿದ್ಧತೆ!

ಸದ್ಯ ದೈನಂದಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದರೂ ಆಸ್ಪತ್ರೆಗೆ ದಾಖಲಾಗುತ್ತಿರುವವರ ಪ್ರಮಾಣ ಕಡಿಮೆಯೇ ಇದೆ. 11 ಮಂದಿ ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದು ಈ ಪೈಕಿ ಒಬ್ಬರು ವೆಂಟಿಲೇಟರ್‌ ಸಹಿತ ತೀವ್ರ ನಿಗಾ ವಿಭಾಗ, ಇಬ್ಬರು ತೀವ್ರ ನಿಗಾ ವಿಭಾಗ, ಮೂವರು ಆಮ್ಲಜನಕ ಯುಕ್ತ ಹಾಸಿಗೆ ಮತ್ತು ಐವರು ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೇ ತಿಂಗಳಲ್ಲಿ 15,523 ಜನರು ಬಲಿ!

ಕಳೆದ ವರ್ಷದ ಮೇ ತಿಂಗಳಲ್ಲಿ ಅತ್ಯಧಿಕ 15,523 ಸಾವು ದಾಖಲಾಗಿತ್ತು. ಸರಾಸರಿ 500ಕ್ಕೂ ಹೆಚ್ಚು ಮಂದಿ ಮರಣವನ್ನಪ್ಪಿದ್ದರು. ರಾಜ್ಯದಲ್ಲಿ ಈವರೆಗೆ 40,059 ಕೋವಿಡ್‌ ಸಾವು ಸಂಭವಿಸಿದ್ದು, ಇದರಲ್ಲಿನ ಶೇ.40ರಷ್ಟುಸಾವು ಇದೊಂದೇ ತಿಂಗಳಲ್ಲಿ ಘಟಿಸಿತ್ತು. ಮೇ 23ಕ್ಕೆ ಒಂದು ದಿನದ ಸಾರ್ವಕಾಲಿಕ ಗರಿಷ್ಠ 626 ಸಾವು ವರದಿಯಾಗಿತ್ತು. ಹಾಗೆಯೇ ದಾಖಲೆಯ 10.81 ಲಕ್ಷ ಪ್ರಕರಣಗಳು ವರದಿಯಾಗಿದ್ದವು. ಹಾಗೆಯೇ 2021ರ ಜೂನ್‌ನಲ್ಲಿ 5,950 ಮಂದಿ ಸಾವನ್ನಪ್ಪಿದ್ದರು. ಈ ಎರಡು ತಿಂಗಳಲ್ಲಿ ರಾಜ್ಯದ ಒಟ್ಟು ಕೋವಿಡ್‌ ಸಾವುಗಳಲ್ಲಿ ಶೇ.50ಕ್ಕಿಂತ ಹೆಚ್ಚು ದಾಖಲಾಗಿದೆ.

ತಿಂಗಳು (2022) ಪಾಸಿಟಿವ್‌ ಕೇಸ್‌ ಸಾವು

ಜನವರಿ 8,02,130 663
ಫೆಬ್ರವರಿ 1,31,596 952
ಮಾರ್ಚ್ 4,451 104
ಏಪ್ರಿಲ್‌ 2,108 5
 

Follow Us:
Download App:
  • android
  • ios