Asianet Suvarna News Asianet Suvarna News

Corona Crisis: ಸೋಮವಾರ ಬೆಂಗಳೂರಲ್ಲಿ ಕೇವಲ 1 ಕೋವಿಡ್‌ ಕೇಸು!

ರಾಜ್ಯದಲ್ಲಿ ಕೊರೋನಾ ಸೋಂಕು ಪರೀಕ್ಷೆಗಳು ಮೂರು ಸಾವಿರಕ್ಕೆ ಇಳಿಕೆಯಾಗಿದ್ದು, ಆರು ತಿಂಗಳ ಬಳಿಕ ಹೊಸ ಸೋಂಕು ಪ್ರಕರಣಗಳು 40 ಆಸುಪಾಸಿಗೆ ಕುಸಿದಿವೆ. ಬೆಂಗಳೂರಿನಲ್ಲಿ ಎರಡೂವರೆ ವರ್ಷದ ಬಳಿಕ ಒಂದು ಪ್ರಕರಣ ದಾಖಲಾಗಿದೆ.

43 new coronavirus cases on october 3rd in karnataka gvd
Author
First Published Oct 4, 2022, 3:00 AM IST

ಬೆಂಗಳೂರು (ಅ.04): ರಾಜ್ಯದಲ್ಲಿ ಕೊರೋನಾ ಸೋಂಕು ಪರೀಕ್ಷೆಗಳು ಮೂರು ಸಾವಿರಕ್ಕೆ ಇಳಿಕೆಯಾಗಿದ್ದು, ಆರು ತಿಂಗಳ ಬಳಿಕ ಹೊಸ ಸೋಂಕು ಪ್ರಕರಣಗಳು 40 ಆಸುಪಾಸಿಗೆ ಕುಸಿದಿವೆ. ಬೆಂಗಳೂರಿನಲ್ಲಿ ಎರಡೂವರೆ ವರ್ಷದ ಬಳಿಕ ಒಂದು ಪ್ರಕರಣ ದಾಖಲಾಗಿದೆ. ಸೋಮವಾರ 43 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, 110 ಮಂದಿ ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ 60 ವರ್ಷದ ವೃದ್ಧೆ ಸಾವಿಗೀಡಾಗಿದ್ದಾರೆ. 3440 ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ 1.1 ರಷ್ಟು ದಾಖಲಾಗಿದೆ. ಭಾನುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 10 ಸಾವಿರ ಕಡಿಮೆ ನಡೆದಿವೆ. 

ಹೀಗಾಗಿ, ಹೊಸ ಪ್ರಕರಣಗಳು 35ರಷ್ಟು ಇಳಿಕೆಯಾಗಿವೆ. (ಭಾನುವಾರ 78 ಪ್ರಕರಣಗಳು, ಶೂನ್ಯ ಸಾವು). ಕಳೆದ ಏ.5ರಂದು ಹೊಸ ಪ್ರಕರಣಗಳು 39 ದಾಖಲಾಗಿದ್ದವು. ಸದ್ಯ ಆರು ತಿಂಗಳ ಕನಿಷ್ಠಕ್ಕೆ ಕುಸಿದಿದೆ. ಸದ್ಯ 2793 ಸಕ್ರಿಯ ಸೋಂಕಿತರಿದ್ದು, ಈ ಪೈಕಿ 30 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಮಂದಿ ಐಸಿಯು, 5 ಮಂದಿ ಆಕ್ಸಿಜನ್‌, 15 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 2763 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.

ಬೂಸ್ಟರ್‌ ಡೋಸ್‌ ಲಸಿಕೆ ಫ್ರೀ ಕೊಟ್ರೂ ಶೇ.91 ಜನ ಪಡೆದಿಲ್ಲ..!

ಎಲ್ಲಿ, ಎಷ್ಟು ಪ್ರಕರಣ?: ಸೋಮವಾರ ಬೆಂಗಳೂರಿನಲ್ಲಿ ಎರಡೂವರೆ ವರ್ಷ (2020 ಮಾರ್ಚ್‌28ರ ಬಳಿಕ) ಕೇವಲ ಒಂದು ಪ್ರಕರಣ ದಾಖಲಾಗಿದೆ. ದಕ್ಷಿಣ ಕನ್ನಡ 10, ರಾಮನಗರ 6, ಮೈಸೂರು ಮತ್ತು ಕಲಬುರಗಿ ತಲಾ 5 ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ 10 ಜಿಲ್ಲೆಗಳಲ್ಲಿ ಐದಕ್ಕಿಂತ ಕಡಿಮೆ, 15 ಜಿಲ್ಲೆಯಲ್ಲಿ ಶೂನ್ಯ ಪ್ರಕರಣ ವರದಿಯಾಗಿವೆ.

ಶೇ.75 ರಷ್ಟು ಮಕ್ಕಳಲ್ಲಿ ಕೊರೋನಾ ಪ್ರತಿಕಾಯ: ರಾಜ್ಯ ಆರೋಗ್ಯ ಇಲಾಖೆ ನಡೆಸಿದ 6-14 ವರ್ಷದ ಮಕ್ಕಳ ಕೊರೋನಾ ಸಿರೋ ಸಮೀಕ್ಷೆಯಲ್ಲಿ ಶೇ.75 ರಷ್ಟು ಮಕ್ಕಳಿಗೆ ಸೋಂಕು ತಗುಲಿದ್ದು ಪತ್ತೆಯಾಗಿದೆ. ವಿಶೇಷವೆಂದರೆ, ಈ ಮಕ್ಕಳಿಗೆ ಲಸಿಕೆ ಪಡೆಯದೇ ರೋಗ ಪ್ರತಿಕಾಯಗಳು ಕೂಡಾ ಉತ್ಪತ್ತಿಯಾಗಿವೆ.

ರಾಜ್ಯದ ಜನರ ರೋಗ ನಿರೋಧಕ ಶಕ್ತಿ ಮತ್ತು ಲಸಿಕೆ ಪರಿಣಾಮ ತಿಳಿದುಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಿರೋ ಸಮೀಕ್ಷೆಯನ್ನು ನಡೆಸುತ್ತಿತ್ತು. ಆದರೆ, ಲಸಿಕೆ ಪಡೆಯದ ಮಕ್ಕಳಲ್ಲಿ ಸಿರೋ ಸಮೀಕ್ಷೆ ನಡೆಸಲು ರಾಜ್ಯ ಕೊರೋನಾ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿತ್ತು. ಅದರಂತೆ ಆರೋಗ್ಯ ಇಲಾಖೆಯು ರಾಜ್ಯಾದ್ಯಂತ 6 ರಿಂದ 14 ವರ್ಷದೊಳಗಿನ 5358 ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಿತ್ತು. ಆಗ ಶೇ.75.38 ಮಕ್ಕಳಲ್ಲಿ ಕೊರೋನಾ ವಿರುದ್ಧ ಹೋರಾಡುವ ರೋಗ ಪ್ರತಿಕಾಯ ಪತ್ತೆಯಾಗಿದೆ. ಅಂದರೆ, ಇವರೆಲ್ಲರಿಗೂ ಸೋಂಕು ತಗುಲಿ ಅದರಿಂದಲೇ ರೋಗಪ್ರತಿಕಾಯಗಳು ಉತ್ಪತ್ತಿಯಾಗಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ.

Covid-19: ಕೋವಿಶೀಲ್ಡ್ ಲಸಿಕೆಯಿಂದ ಪುರುಷತ್ವಕ್ಕೆ ಹಾನಿ ಇದೆಯಾ?

ಚಿಕ್ಕಮಗಳೂರು ನಂ.1: ಜಿಲ್ಲಾವಾರು ಸಮೀಕ್ಷೆ ನಡೆಸಿದ್ದು, ಅತಿ ಹೆಚ್ಚು ಚಿಕ್ಕಮಗಳೂರು ಶೇ. 100, ಬಾಗಲಕೋಟೆ ಶೇ. 91.12, ಉತ್ತರ ಕನ್ನಡ ಶೇ. 89.61, ಗದಗ ಶೇ. 88.62 ಮಕ್ಕಳಲ್ಲಿ ಪ್ರತಿಕಾಯ ಪತ್ತೆಯಾಗಿದೆ. ಸೋಂಕಿನ ತೀವ್ರತೆ ಹೆಚ್ಚಿದ್ದ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ. 86.88 ಮಕ್ಕಳಲ್ಲಿ ಪ್ರತಿಕಾಯ ಇರುವುದು ಪತ್ತೆಯಾಗಿದೆ. ಅತೀ ಕಡಿಮೆ ಪ್ರತಿಕಾಯ ಹೊಂದಿರುವ ಜಿಲ್ಲೆಗಳ ಪೈಕಿ ಕೊನೆಯಿಂದ ಐದು ಸ್ಥಾನಗಳಲ್ಲಿ ಕಲಬುರಗಿ ಶೇ. 43.24, ಯಾದಗಿರಿ ಶೇ. 48.20, ಉಡುಪಿ ಶೇ. 52.31, ಹಾವೇರಿ ಶೇ. 59.47 ಹಾಗೂ ರಾಮನಗರ ಶೇ. 62.72 ಮಕ್ಕಳಲ್ಲಿ ಪ್ರತಿಕಾಯಗಳು ಕಂಡುಬಂದಿವೆ.

Follow Us:
Download App:
  • android
  • ios