ಸಾರ್ವಕಾಲಿಕ ದಾಖಲೆಯತ್ತ ಉಷ್ಣಾಂಶ| ಇದೇ ರೀತಿ ಮುಂದುವರೆದರೆ ಜಿಲ್ಲೆಯ ತಾಪಮಾನ ಮಾರ್ಚ್‌ ಮಾಸದ ಸಾರ್ವಕಾಲಿಕ ದಾಖಲೆ 43 ಡಿ.ಸೆ.ಯನ್ನು ಮುಟ್ಟುವ ಸಾಧ್ಯತೆ| ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಮೈಸೂರು, ಕೊಡಗು ಮತ್ತು ಚಾಮರಾಜನಗರದಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆ ಬೀಳುವ ಸಾಧ್ಯತೆ| 

ಬೆಂಗಳೂರು(ಮಾ.31): ಕರ್ನಾಟಕ ದಿನೇ ದಿನೇ ಬಿಸಿಯೇರುತ್ತಿದೆ. ಅದರಲ್ಲೂ ರಾಜ್ಯದ ಉತ್ತರ ಒಳನಾಡಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದ್ದು, ಈ ಪೈಕಿ ಕಲಬುರಗಿ ಜಿಲ್ಲೆ ನಿಗಿ ನಿಗಿ ಕೆಂಡವಾಗತೊಡಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಲಬುರಗಿಯ ತಾಪಮಾನ ಕ್ರಮೇಣ ಹೆಚ್ಚಾಗುತ್ತಿದೆ. ಕಳೆದ ಮಾ.28ರಂದು 40.6 ಡಿ.ಸೆ. ಇದ್ದ ತಾಪಮಾನ ಮಾ.29ರಂದು ಗರಿಷ್ಠ 41.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಇದೇ ರೀತಿ ಮುಂದುವರೆದರೆ ಜಿಲ್ಲೆಯ ತಾಪಮಾನ ಮಾರ್ಚ್‌ ಮಾಸದ ಸಾರ್ವಕಾಲಿಕ ದಾಖಲೆ (43 ಡಿ.ಸೆ.)ಯನ್ನು ಮುಟ್ಟುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ. 

ಉಳಿದಂತೆ ರಾಜ್ಯದಲ್ಲಿ ಉತ್ತರ ಒಳನಾಡಿನ ಭಾಗದಲ್ಲಿ ಅತ್ಯಧಿಕ ಬಿಸಿಲು ದಾಖಲಾಗಿದೆ. ಉತ್ತರ ಒಳನಾಡಿನ ರಾಯಚೂರು 39.8 ಡಿ.ಸೆ., ವಿಜಯಪುರ ಹಾಗೂ ಬೀದರ್‌ ತಲಾ 38.9, ಕೊಪ್ಪಳ 37.5, ಗದಗ 37.2, ಬೆಳಗಾವಿ ವಿಮಾನ ನಿಲ್ದಾಣ 36.7, ಧಾರವಾಡ 36.4 ಡಿ.ಸೆ. ಹಾಗೂ ಕರಾವಳಿಯ ಪಣಂಬೂರಿನಲ್ಲಿ 36.3, ದಾವಣಗೆರೆ 36, ಮಂಡ್ಯ 35.6 ಡಿ.ಸೆ.ಉಷ್ಣಾಂಶ ದಾಖಲಾಗಿದೆ.

ಚಳಿ ಇಳಿಕೆ, ಬಿಸಿಲು ಏರಿಕೆ: ಕಲಬುರಗಿಯಲ್ಲಿ 38.6 ಡಿಗ್ರಿ!

ಹಗುರ ಮಳೆ ನಿರೀಕ್ಷೆ:

ಸೋಮವಾರ ಮಂಗಳೂರಿನ ಕೆಲವು ಪ್ರದೇಶಗಳಲ್ಲಿ 3 ಸೆಂ.ಮೀ. ಹಾಗೂ ಚಿಕ್ಕಮಗಳೂರಿನ ಕಳಸದಲ್ಲಿ 2 ಸೆಂ.ಮೀ. ಮಳೆ ಸುರಿದಿದೆ. ಇನ್ನೆರಡು ದಿನ (ಏ.1ರವರೆಗೆ) ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಮೈಸೂರು, ಕೊಡಗು ಮತ್ತು ಚಾಮರಾಜನಗರದಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆ ಬೀಳಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.