ಬಸ್ ಸಂಚಾರ: ಕೆಎಸ್ಆರ್ಟಿಸಿಯಿಂದ ಸಾರ್ವಜನಿಕ ಪ್ರಕಟಣೆ
* ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಅನುಮತಿ ಕೊಟ್ಟ ಸರ್ಕಾರ
* ಕೆಎಸ್ಆರ್ಟಿಸಿಯಿಂದ ಪ್ರಯಾಣಿಕರಿಗೆ ಮಹತ್ವದ ಪ್ರಕಟಣೆ
* ಶೇ.50ರಷ್ಟು ಪ್ರಯಾಣಿಕರೊಂದಿಗೆ 3 ಸಾವಿರ ಕೆಎಸ್ಆರ್ಟಿ ಸಿ ಬಸ್ ಸಂಚಾರ
ಬೆಂಗಳೂರು, (ಜೂನ್.20) : ರಾಜ್ಯದಲ್ಲಿ ಕೊರೋನಾ ಸೋಂಕಿನ ಪಾಸಿಟಿವಿಟಿ ದರ ಕಡಿಮೆಗೊಂಡ 16 ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ (ಜೂನ್.21) ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಶೇ.50ರಷ್ಟು ಪ್ರಯಾಣಿಕರೊಂದಿಗೆ 3 ಸಾವಿರ ಕೆಎಸ್ಆರ್ಟಿ ಸಿ ಬಸ್ ಸಂಚಾರ ಆರಂಭಗೊಳ್ಳಲಿದೆ ಎಂದು ಕೆಎಸ್ಆರ್ಟಿಸಿ ಸಾರ್ವಜನಿಕರ ಗಮನಕ್ಕೆ ಇರಲಿ ಎಂದು ಸುತ್ತೋಲೆಯೊಂದನ್ನ ಹೊರಡಿಸಿದೆ.
ರಾಜ್ಯದಲ್ಲಿ ಮತ್ತಷ್ಟು ಲಾಕ್ಡೌನ್ ಸಡಿಲಿಕೆ, ಬಸ್ ಓಡಾಡುತ್ತವೆ, ಕಂಡೀಷನ್ಸ್ ಅಪ್ಲೈ
ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ವಿಧಿಸಿದ್ದ ನಿರ್ಬಂಧಗಳನ್ನು ಮೈಸೂರು ಜಿಲ್ಲೆ ಹೊರತುಪಡಿಸಿ, ಇತರೆ ಜಿಲ್ಲೆಗಳಲ್ಲಿ ಸಡಿಲಿಸಿ, ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಶೇ.50ರಷ್ಟು ಆಸನ ಸಾಮರ್ಥ್ಯದೊಂದಿಗೆ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ಅನುಮತಿಸಲಾಗಿರುತ್ತದೆ.
ಕೆ ಎಸ್ ಆರ್ ಟಿ ಸಿ ನಿಗಮವು ದಿನಾಂಕ 21-06-2021ರಿಂದ ಜಾರಿಗೆ ಬರುವಂತೆ ಮೈಸೂರು ಜಿಲ್ಲೆ ಹೊರತುಪಡಿಸಿ, ಇತರೆ ಜಿಲ್ಲೆಗಳಲ್ಲಿ ಪ್ರಯಾಣಿಕರ ಜನದಟ್ಟಣೆ ಹಾಗೂ ಅವಶ್ಯಕತೆಗೆ ಅನುಗುಣವಾಗಿ ಸ್ಥಳೀಯ ಮತ್ತು ದೂರ ಮಾರ್ಗದ ಅಂತರ ಜಿಲ್ಲಾ ಸಾರಿಗೆಗಳ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದೆ. ಪ್ರಾರಂಭಿಕವಾಗಿ ಸುಮಾರು 3 ಸಾವಿರ ಬಸ್ಸುಗಳನ್ನು ಕಾರ್ಯಾಚರಿಸಲು ಯೋಜಿಸಲಾಗಿದೆ.
ಅಂತಾರಾಜ್ಯ ಮಾರ್ಗಗಳ ಕಾರ್ಯಚಾರಣೆಯ ಬಗ್ಗೆ ಆಯಾ ಮಾರ್ಗಸೂಚಿಗಳನ್ವಯ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು. ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೆಎಸ್ಆರ್ಟಿಸಿ ಮನವಿ ಮಾಡಿದೆ.