ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು)ನಲ್ಲಿ ನಡೆದ 300 ಕೋಟಿ ರೂಪಾಯಿಗೂ ಅಧಿಕ ಹಣ ದುರುಪಯೋಗಕ್ಕೆ ಸಂಬಂಧಿಸಿ ಸಿಬಿಐ ತನಿಖೆ ಆರಂಭಿಸಿದೆ. ಪ್ರಕರಣ ಸಂಬಂಧ ಅಪರಿಚಿತ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ. 

ಬೆಂಗಳೂರು (ಅ.06): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು)ನಲ್ಲಿ ನಡೆದ 300 ಕೋಟಿ ರೂಪಾಯಿಗೂ ಅಧಿಕ ಹಣ ದುರುಪಯೋಗಕ್ಕೆ ಸಂಬಂಧಿಸಿ ಸಿಬಿಐ ತನಿಖೆ ಆರಂಭಿಸಿದೆ. ಪ್ರಕರಣ ಸಂಬಂಧ ಅಪರಿಚಿತ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಕೆಎಸ್‌ಒಯುನ ಸಹಯೋಗದ ಸಂಸ್ಥೆಗಳ ಕಾರ್ಯಕ್ರಮದಲ್ಲಿ ಅಪರಿಚಿತ ಅಧಿಕಾರಿಗಳು 300 ಕೋಟಿ ರೂಪಾಯಿಗೂ ಅಧಿಕ ಹಣ ದುರುಪಯೋಗ ಮಾಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಮೈಸೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ವಿಶ್ವವಿದ್ಯಾನಿಲಯವು ದೇಶಾದ್ಯಂತ ಮತ್ತು ವಿದೇಶಗಳಲ್ಲಿ ತನ್ನ ಸಹಯೋಗದ ಸಂಸ್ಥೆಗಳನ್ನು ತೆರೆದಿದೆ. 

Add Asianetnews Kannada as a Preferred SourcegooglePreferred

ಸಹಯೋಗ ಸಂಸ್ಥೆಗಳು ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ ಮತ್ತು ವಿಶ್ವವಿದ್ಯಾನಿಲಯಕ್ಕೆ ಜಮಾ ಮಾಡಬೇಕಾದ ಇತರ ಶುಲ್ಕಗಳಿಗೆ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕವನ್ನು ಜಮಾ ಮಾಡುತ್ತಿವೆಯೆಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಕೆಎಸ್‌ಒಯುಗೆ ಸಂಬಂಧಿಸಿದ 2013-14 ಮತ್ತು 2014-15ರ ಆರ್ಥಿಕ ವರ್ಷಗಳ ಲೆಕ್ಕಪರಿಶೋಧನೆಯ ಸಮಯದಲ್ಲಿ ಹಲವು ಸಹಯೋಗ ಸಂಸ್ಥೆಗಳಿಂದ ಜಮೆ ಆಗಿರುವ 50 ಕೋಟಿ ರೂಪಾಯಿ ಲೆಕ್ಕಪತ್ರದಲ್ಲಷ್ಟೇ ಇದ್ದು, ಹಣದ ರೂಪದಲ್ಲಿ ಇರಲಿಲ್ಲ. 

5000 ತಾಂಡಾಗಳಿಗೆ ಕಂದಾಯ ಗ್ರಾಮ ಪಟ್ಟ: ಸಿಎಂ ಸಿದ್ದರಾಮಯ್ಯ

'2009-10 ರಿಂದ 2012-2013ರ ಆರ್ಥಿಕ ವರ್ಷಗಳಿಗೆ ಸಂಬಂಧಿಸಿ ಸುಮಾರು 250 ಕೋಟಿ ರೂಪಾಯಿ ವಿದ್ಯಾರ್ಥಿಗಳ ಪ್ರವೇಶ ಮತ್ತು ವಿಶ್ವವಿದ್ಯಾನಿಲಯದಿಂದ ಪಡೆದ ಮೊತ್ತ ಲೆಕ್ಕದಲ್ಲಿ ಇದ್ದರೂ, ಹಣದ ರೂಪದಲ್ಲಿ ಇಲ್ಲದ ಕಾರಣ ಅದರ ಆಧಾರದ ಮೇಲೆ ಲೆಕ್ಕಪರಿಶೋಧಕರು ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು' ಎಂದು ಎಫ್ಐಆರ್ ಆರೋಪಿಸಿದೆ. ಆಂತರಿಕ ಹಣಕಾಸು ಪರಿಶೋಧನೆ ವೇಳೆ ಹಣಕಾಸು ಅಕ್ರಮ ಎಸಗಿರುವುದು ಕಂಡಬಂದಿದ್ದು, ಅದಕ್ಕೆ ಹೊಣೆಗಾರರು ಯಾರೆಂಬುದು ದೃಢಪಟ್ಟಿಲ್ಲ. ಹೀಗಾಗಿ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ)ಕ್ಕೆ ಒಪ್ಪಿಸಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ನಿರ್ದೇಶಕರ ಮಂಡಳಿ ತೀರ್ಮಾನಿಸಿತು. ಈ ಕುರಿತು ರಾಜ್ಯ ಸರ್ಕಾರಕ್ಕೂ ಶಿಫಾರಸು ಮಾಡಿ, ಒಪ್ಪಿಗೆ ಪಡೆಯಿತು.