24 ತಾಸು ಹೋಟೆಲ್‌ ತೆರೆಯಲು ಅವಕಾಶವಿಲ್ಲ: ಸಿಎಂ -ಆದರೆ ಸದ್ಯ ಇರುವ ಅವಧಿ ವಿಸ್ತರಣೆಗೆ ಪರಿಶೀಲನೆ: ಬೊಮ್ಮಾಯಿ ಭರವಸೆ ಜಿಎಸ್‌ಟಿ ಹೊರೆ ತಗ್ಗಿಸಲು ಕೇಂದ್ರಕ್ಕೆ ಮನವಿ

ಬೆಂಗಳೂರು (ಸೆ.21) : ದಿನದ 24 ಗಂಟೆ ಕಾರ್ಯ ನಿರ್ವಹಿಸಲು ಅವಕಾಶ ನೀಡಬೇಕು ಎಂಬ ಹೊಟೇಲ್‌ ಮಾಲಿಕರ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ. ಆದರೆ, ಸದ್ಯ ಇರುವ ಅವಧಿಯನ್ನು ಮತ್ತಷ್ಟುವಿಸ್ತರಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ನಗರದ ಖಾಸಗಿ ಹೋಟೇಲ್‌ನಲ್ಲಿ ಬೃಹತ್‌ ಬೆಂಗಳೂರು ಹೋಟೇಲುಗಳ ಸಂಘ (ಬಿಬಿಎಚ್‌ಎ) ಆಯೋಜಿಸಿದ್ದ ‘ಆಹಾರ ಪ್ರಶಸ್ತಿಗಳು-2022’ ಪ್ರದಾನ ಮಾಡಿ ಮಾತನಾಡಿದ ಅವರು, ಹೋಟೇಲ್‌ಗಳಿಗೆ 24 ಗಂಟೆ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು ಎಂಬ ಮನವಿ ಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಸಾಧ್ಯವಿಲ್ಲ. ಆದರೆ, ಹಾಲಿ ಇರುವ ಅವಧಿಯನ್ನು ಮತ್ತಷ್ಟುವಿಸ್ತರಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

30 ದಿನ ಹೋಟೆಲ್‌ ರೂಮ್‌ಗೆ 6 ಲಕ್ಷ: ಶ್ರೀಲೀಲಾ ಐಷಾರಾಮಿ ಜೀವನದಿಂದ ನಿರ್ಮಾಪಕರಿಗೆ ನಷ್ಟ?

ಹೋಟೆಲ್‌ಗಳಿಗೆ ರಾಜ್ಯ ಸರ್ಕಾರದಿಂದ ಸಿಗಬೇಕಾದ ಎಲ್ಲ ಅನುಮತಿಯನ್ನು ಆನ್‌ಲೈನ್‌ ಮೂಲಕ ಏಕಗವಾಕ್ಷಿಯಡಿ ನೀಡುವ ಬಗ್ಗೆ ಶೀಘ್ರವೇ ನಿಯಮ ರೂಪಿಸಲಾಗುವುದು. ಆದರೆ ಸ್ಥಳೀಯ ಸಂಸ್ಥೆಗಳಿಂದ ಪಡೆಯಬೇಕಾದ ಅನುಮತಿಯನ್ನು ಪ್ರತ್ಯೇಕವಾಗಿಯೇ ಪಡೆದುಕೊಳ್ಳಬೇಕು. ಹಾಗೆಯೇ ಸಾವಿರ ರು.ಗಳಿಗಿಂತ ಕಡಿಮೆ ಬಾಡಿಗೆ ರೂಂಗಳಿಗೆ ಜಿಎಸ್‌ಟಿ ರಿಯಾಯಿತಿ ನೀಡಬೇಕು ಎಂಬ ಮನವಿಯ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಿ ಕೊಂಡಿರುವ ಹೋಟೆಲ್‌ಗಳಿಗೆ ಮಾತ್ರ ಉದ್ದಿಮೆಯ ಸ್ಥಾನಮಾನ ಸಿಗಲಿದೆ ಎಂದ ಅವರು, ಅನ್ಯ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿನ ಹೋಟೇಲ್‌ ಉದ್ಯಮಿಗಳು ಪ್ರವಾಸೋದ್ಯಮದಿಂದ ಪಡೆಯಬಹುದಾದ ಪ್ರಯೋಜನದ ಶೇ.50ಅನ್ನು ಪಡೆದಿಲ್ಲ. ಪ್ರವಾಸೋದ್ಯಮದಿಂದ ಪಡೆಯಬಹುದಾದ ಗರಿಷ್ಠ ಲಾಭವನ್ನು ಪಡೆದುಕೊಳ್ಳಿ. ಇದಕ್ಕೆ ಸರ್ಕಾರ ಅಗತ್ಯ ನೆರವು ನೀಡಲು ಸಿದ್ಧ ಎಂದು ಅವರು ತಿಳಿಸಿದರು.

ಬಿಬಿಎಚ್‌ಎ ಅಧ್ಯಕ್ಷ ಪಿ.ಸಿ.ರಾವ್‌ ಮಾತನಾಡಿ, ಸರ್ಕಾರ ದಿನದ 24 ಗಂಟೆ ಹೋಟೆಲ್‌ ತೆರೆಯಲು ಅನುಮತಿ ನೀಡಲು ಚಿಂತನೆ ನಡೆಸಿತ್ತಾದರೂ ಪೊಲೀಸ್‌ ಇಲಾಖೆ ಭದ್ರತೆ ನೆಪವೊಡ್ಡಿ ಅನುಮತಿ ನೀಡುವುದಕ್ಕೆ ಹಿಂದೇಟು ಹಾಕುತ್ತಿದೆ. ಸದ್ಯ ರಾತ್ರಿ 1ರವರೆಗೆ ಹೋಟೆಲ್‌ ತೆರೆಯಲು ಪರವಾನಗಿ ಇದ್ದರೂ 11 ಗಂಟೆಗೆ ಪೊಲೀಸರು ಬಂದು ಬಾಗಿಲು ಬಂದ್‌ ಮಾಡಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸ್‌ ಇಲಾಖೆ ತಿಳಿ ಹೇಳಬೇಕು. ಜತೆಗೆ ಹೋಟೆಲ್‌ನಲ್ಲಿ ಜಿಎಸ್‌ಟಿ ಹೊರೆ ಹೆಚ್ಚಿದೆ. ಒಂದು ಸಾವಿರ ರು. ಬಾಡಿಗೆ ರೂಮ್‌ಗೆ ಶೇ.12 ಜಿಎಸ್‌ಟಿ ಹಾಕಲಾಗುತ್ತದೆ. ಕೂಡಲೇ ಜಿಎಸ್‌ಟಿ ಕಡಿಮೆ ಮಾಡುವ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಫ್ಲೈಟ್ ಲೇಟ್ ಆಗಿದ್ದಕ್ಕೆ‌ ಹೋಟೆಲ್ ಸಿಕ್ಕಿಲ್ಲ, ಆಸ್ಪತ್ರೆಯಲ್ಲಿ ಒಂದು ದಿನ ಕಳೆದೆ: ನಟಿ ಸುಹಾಸಿನಿ

ಕಾರ್ಯಕ್ರಮದಲ್ಲಿ ಬೃಹತ್‌ ಉದ್ಯಮ ಸಚಿವ ಮುರುಗೇಶ್‌ ನಿರಾಣಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌, ಸಂಘದ ಗೌರವ ಕಾರ್ಯದರ್ಶಿ ವೀರೇಂದ್ರ ಎನ್‌.ಕಾಮತ್‌ ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತರು: ಅತ್ಯುತ್ತಮ ದರ್ಶಿನಿ ಸ್ಟೈಲ್‌ ಪ್ರಶಸ್ತಿಗೆ ‘ಐಸಿರಿ ಕೆಫೆ, ಅತ್ಯುತ್ತಮ ಕ್ಯಾಶುವಲ್‌ ಸ್ಟೈಲ್‌ ಡೈನಿಂಗ್‌ (ವೆಜ್‌) ‘ಶ್ರೀ ಸಾಗರ್‌’, ಅತ್ಯುತ್ತಮ ಕ್ಯಾಶುವಲ್‌ ಸ್ಟೈಲ್‌ ಡೈನಿಂಗ್‌ (ನಾನ್‌-ವೆಜ್‌) ‘ನಾಗಾರ್ಜುನ ರೆಸ್ಟೋರೆಂಟ್‌’, ಫೈನ್‌ ಡೈನಿಂಗ್‌ ‘ಕೇಬಲ್‌ ಕಾರ್‌’, ಉದಯೋನ್ಮುಖ ಮಹಿಳಾ ಉದ್ಯಮಿ ಕೆ.ವೈ.ಕೀರ್ತನಾ ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗೆ ಜಿ.ಶ್ರೀನಿವಾಸ್‌ ರಾವ್‌ ಭಾಜನರಾದರು.