ಈ ಬಾರಿ ನಿರ್ಮಲಾ ಸೀತಾರಾಮನ್‌ ಮಂಡನೆ ಮಾಡಿರುವ ಬಜೆಟ್‌ ವಿರೋಧ ಪಕ್ಷಗಳು ಹೇಳಿರುವಂತೆ ಕುರ್ಚಿ ಬಚಾವೋ ಬಜೆಟ್‌ ಅಲ್ಲ. ಇದು ಕಿಸಾನ್‌ ಬಚಾವೋ ಬಜೆಟ್‌ ಎಂದು ಚಿಕ್ಕಬಳ್ಳಾಪುರ ಸಂಸದ ಡಾ. ಕೆ ಸುಧಾಕರ್‌ ಮಾತನಾಡಿದ್ದಾರೆ.

ಬೆಂಗಳೂರು (ಜು.30): ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್‌ ಮಂಗಳವಾರ ಸಂಸತ್ತಿನಲ್ಲಿ ಕೇಂದ್ರ ಬಜೆಟ್‌ ಕುರಿತಾಗಿ ಮಾತನಾಡಿದ್ದಾರೆ. ಈ ವೇಳೆ ವಿಪಕ್ಷಗಳು ಬಜೆಟ್‌ಅನ್ನು ಕುರ್ಚಿ ಬಚಾವೋ ಬಜೆಟ್‌ ಎಂದು ಹೇಳಿದ್ದನ್ನು ಟೀಕೆ ಮಾಡಿದ ಸುಧಾಕರ್‌, ಇದು ಕುರ್ಚಿ ಬಚಾವೋ ಬಜೆಟ್‌ ಅಲ್ಲ, ಕಿಸಾನ್‌ ಬಚಾವೋ ಬಜೆಟ್‌ ಎಂದು ಹೇಳಿದ್ದಾರೆ. ಅದರೊಂದಿಗೆ ಬಜೆಟ್‌ಅನ್ನು ಟೀಕೆ ಮಾಡಿದ ವಿಪಕ್ಷಗಳ ಮೇಲೆ ಹರಿಹಾಯ್ದ ಅವರು, ವಿಪಕ್ಷಗಳ ನಾಯಕರು ಬಜೆಟ್‌ ಬಗ್ಗೆ ಏನೆಲ್ಲಾ ಹೇಳಿದರು. ತಮ್ಮ ಪ್ರಣಾಳಿಕೆಯನ್ನೇ ಬಜೆಟ್‌ ಮಾಡಲಾಗಿದೆ, ಕಾಂಗ್ರೆಸ್‌ ಅಧಿಕಾರವಿರುವ ರಾಜ್ಯವೊಂದರ ಬಜೆಟ್‌ ಎಂದು ಟೀಕೆ ಮಾಡಿದ್ದರು. ಆದರೆ, ಈ ಬಾರಿಯ ಕೇಂದ್ರ ಬಜೆಟ್‌ ಸಾಮಾಜಿಕ ಕಲ್ಯಾಣ ಹಾಗೂ ಆರ್ಥಿಕ ಅಭಿವೃದ್ಧಿ ಎರಡನ್ನೂ ಸಮವಾಗಿ ನಿಭಾಯಿಸಿದ ಅಯವ್ಯಯವಾಗಿದೆ ಎಂದು ಹೇಳಿದ್ದಾರೆ. ಇದು ಬರೀ ಕಿಸಾನ್‌ ಬಚಾವೋ ಬಜೆಟ್‌ ಮಾತ್ರವಲ್ಲ, ನಾರಿ ಶಕ್ತಿ ಬಚಾವೋ ಬಜೆಟ್‌, ಇದು ಯುವ ಶಕ್ತಿ ಬಚಾವೋ ಬಜೆಟ್‌ ಇದು ಗರೀಬ್‌ ಬಚಾವೋ ಬಜೆಟ್‌, ಇದು ಇಂಡಿಯನ್‌ ಎಕಾನಮಿ ಬಚಾವೋ ಬಜೆಟ್‌ ಹಾಗೂ ಇದು ದೇಶ್ ಬಚಾವೋ ಬಜೆಟ್‌ ಎಂದು ತಿಳಿಸಿದರು.

ಕಾಂಗ್ರೆಸ್‌ ಸರ್ಕಾರ ಗರೀಬಿ ಹಟಾವೋ ಎಂದುಕೊಂಡು ಅಧಿಕಾರಕ್ಕೆ ಬಂದಿತು. ಆದರೆ, ದೇಶದ ಬಡತನ ನಿರ್ಮೂಲನೆಗೆ ಪಣ ತೊಟ್ಟವರು ಯಾರು? ಆರ್ಥಿಕ ಸಮೀಕ್ಷೆ ಪ್ರಕಾರ, 130 ಮಿಲಿಯನ್‌ ಮಂದಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಏರಿದ ದಿನದಿಂದ ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ಇದಕ್ಕೂ ಹಿಂದಿನ ಸರ್ಕಾರ ಬಡತನ ನಿರ್ಮೂಲನೆಗೆ ಯಾವುದೇ ಪ್ರಯತ್ನವನ್ನೂ ಮಾಡಲಿಲ್ಲ ಎಂದು ಹೇಳಿದರು.

ನೂತನ ಸಂಸದ ಡಾ ಕೆ ಸುಧಾಕರ್‌ಗೆ ಅಭಿನಂದನಾ ಸಮಾರಂಭ: ಎಣ್ಣೆ ಬಾಡೂಟಕ್ಕೆ ಮುಗಿಬಿದ್ದ ಜನರು!

ನಮ್ಮ ಮೃತ್ರಿ ಪಾಲುದಾರರನ್ನು ಮೆಚ್ಚಿಸಲು ಬಜೆಟ್‌ನಲ್ಲಿ ಹಣ ನೀಡಲಾಗಿದೆ ಎಂದು ಅವರು ಟೀಕಿಸಿದ್ದಾರೆ. ಆದರೆ, ಕಾಂಗ್ರೆಸ್‌ ಪಕ್ಷ 1984ರ ಬಳಿಕ ಎಂದಿಗೂ ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಅದೂ ಕೂಡ ಇಂದಿರಾ ಗಾಂಧಿ ಸಾವಿನಿಂದ ಬಂದ ಅನುಕಂಪದ ಕಾರಣಕ್ಕಾಗಿ ದೊಡ್ಡ ಗೆಲುವು ಸಾಧಿಸಿ ಏಕಾಂಗಿಯಾಗಿ ಅಧಿಕಾರ ಹಿಡಿದಿತ್ತು. ಯುಪಿಎ ಅಧಿಕಾರದಲ್ಲಿದ್ದಾಗ 34 ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಏರಿತ್ತು. ಅವರು ಕೂಡ ತಮ್ಮ ಬಜೆಟ್‌ನಲ್ಲಿ ಮೈತ್ರಿ ಪಕ್ಷವನ್ನು ಮೆಚ್ಚಿಸುವ ಸಲುವಾಗಿಯೇ ಹಣ ನೀಡುತ್ತಿದ್ದರೇ ಎನ್ನುವುದನ್ನು ಕೇಳಲು ಬಯಸುತ್ತೇನೆ ಎಂದಿದ್ದಾರೆ. ಮೋದಿ ಸರ್ಕಾರದಲ್ಲಿ ರೈತರ ಹಿತವೇ ಪ್ರಮುಖ ಆದ್ಯತೆ ಎಂದು ತಿಳಿಸಿದ್ದಾರೆ.

ಸರ್ಕಾರದಿಂದ ಹಾಲು ಖರೀದಿ ದರ ಕಡಿತ: ಸಂಸದ ಸುಧಾಕರ್‌ ವಿರೋಧ

LS | Dr. K. Sudhakar | Discussion on Union Budget for 2024-25 & UT of J&K for 2024-25