ಶ್ರೀಗಳ ಅಂತ್ಯಕ್ರಿಯೆಗೆ ಎರಡು ಕ್ವಿಂಟಾಲ್ ವಿಭೂತಿ, ಉಪ್ಪು
ಸ್ವಾಮೀಜಿ ಸಮಾಧಿಯನ್ನು ವಿಶೇಷ ರೀತಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ ಶ್ರೀಗಳ ಅಂತಿಮ ವಿಧಿ ವಿಧಾನಸ ವೇಳೆ ಕ್ಷಿಂಟಾಲ್ ಪ್ರಮಾಣದಲ್ಲಿ ವಿಭೂತಿ ಹಾಗೂ ಉಪ್ಪನ್ನು ಬಳಕೆ ಮಾಡಲಾಗುತ್ತದೆ.
ತುಮಕೂರು: ಶಿವಕುಮಾರ ಸ್ವಾಮೀಜಿ ಅವರ ಕ್ರಿಯಾಸಮಾಧಿಗೂ ಮುನ್ನ ಒಂದಷ್ಟು ಧಾರ್ಮಿಕ- ವಿಧಿ ವಿಧಾನಗಳು ನಡೆಯಲಿವೆ.
ಶ್ರೀಗಳ ಅಂತ್ಯಕ್ರಿಯೆ ಕಾರ್ಯಗಳು ಬೆಳಗ್ಗೆ 8 ಗಂಟೆಯಿಂದಲೇ ಆರಂಭವಾಗಲಿದೆ. ಮೊದಲಿಗೆ ಪಾರ್ಥಿವ ಶರೀರದ ಶುದ್ಧೀಕರಣ ಮಾಡಲಾಗು ತ್ತದೆ. ನಂತರ ಕಲಶ ಪೂಜೆ, ಅಷ್ಟದಿಕ್ಪಾಲಕರ ಪೂಜೆ, ಪುಣ್ಯ, ನಂದಿಪೂಜೆ. ಪಂಚಕಳಸ ಪೂಜೆ, ಸಪ್ತರ್ಶಿ ಪೂಜೆ ಸೇರಿದಂತೆ ವಿವಿಧ ಪೂಜೆಗಳನ್ನು ಸಂಪ್ರದಾಯದಂತೆ ನಡೆಸಲಾಗುತ್ತದೆ. ಆ ಬಳಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.
ಶ್ರೀಗಳು ಐಕ್ಯರಾಗುವ ಗದ್ದುಗೆ ವಿಶೇಷತೆ ಏನು..?
ಸಂಜೆ ಗೋಸಲ ಸಿದ್ದೇಶ್ವರ ವೇದಿಕೆಯಿಂದ ಮಠದ ಬೀದಿಯಲ್ಲಿ ಸ್ವಾಮೀಜಿಯವರ ಮೆರವಣಿಗೆ ನಡೆಸಿ ಗದ್ದುಗೆ ಭವನಕ್ಕೆ ಕರೆತರಲಾಗುತ್ತದೆ. ಅಲ್ಲಿ ಗದ್ದುಗೆಗಾಗಿ ಸಿದ್ಧಪಡಿಸಿದ ಹೊಂಡದಲ್ಲಿ ಶ್ರೀಗಳನ್ನು ಕೂರಿಸಲಾಗುತ್ತದೆ. ಇದಕ್ಕೂ ಮೊದಲು ಎರಡು ಕ್ವಿಂಟಾಲ್ ವಿಭೂತಿ, ಉಪ್ಪು ಹಾಕಲಾಗುತ್ತದೆ.
ಸ್ವಾಮೀಜಿ ಸಮಾಧಿ ಮಾಡಿದ ಬಳಿಕ ಲಿಂಗ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಒಟ್ಟು ಐದು ಮಂದಿ ಸ್ವಾಮೀಜಿಗಳ ನೇತೃತ್ವದಲ್ಲಿ ಕ್ರಿಯಾ ವಿಧಿಗಳು ನೆರವೇರಲಿದೆ. ಒಟ್ಟು ೩೦ ಮಂದಿ ತಂಡ ಈ ಕ್ರಿಯಾವಿಧಿಯಲ್ಲಿ ಪಾಲ್ಗೊಳ್ಳಲಿದೆ.