ಪಶು ಚಿಕಿತ್ಸಾಲಯಕ್ಕೆ ಸೇರಿದ 2 ಎಕರೆ ಜಾಗ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ನೀಡಿದ ರಾಜ್ಯ ಸರ್ಕಾರ!
ಪಶು ಸಂಗೋಪನೆ ಇಲಾಖೆಗೆ ಒಳಪಟ್ಟ ಪಶುಚಿಕಿತ್ಸಾಲಯಕ್ಕೆ ಸೇರಿದ 2 ಎಕರೆ ಜಾಗವನ್ನು ರಾಜ್ಯ ಸರ್ಕಾರ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಗೆ ನೀಡಿ ಆದೇಶ ಹೊರಡಿಸಿದೆ.
ಬೆಂಗಳೂರು (ಫೆ.28): ರಾಜ್ಯ ಸರ್ಕಾರ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರ ವ್ಯಾಪ್ತಿಯಲ್ಲಿರುವ ಪಶು ಸಂಗೋಪನೆ ಇಲಾಖೆಗೆ ಒಳಪಟ್ಟ ಪಶುಚಿಕಿತ್ಸಾಲಯಕ್ಕೆ ಸೇರಿದ 2 ಎಕರೆ ಜಾಗವನ್ನು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಗೆ ನೀಡಿ ಆದೇಶ ಹೊರಡಿಸಿದೆ. ಮೈಸೂರು ರಸ್ತೆಯ ಚೆಲುವಾದಿ ಪಾಳ್ಯ ವಾರ್ಡ್, ಮೈಸೂರು ರಸ್ತೆ ಹಾಗೂ ಗೂಡ್ಶಡ್ ರಸ್ತೆಗೆ ಹೊಂದಿಕೊಂಡಂತೆ ಇರುವ ಪಶು ಚಿಕಿತ್ಸಾಲಯವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ವಲಯದಲ್ಲಿ ಅಲ್ಪ ಸಂಖ್ಯಾತರ ಸಮುದಾಯದ ಹೆಚ್ಚಿನ ಜನರು ವಾಸ ಮಾಡುತ್ತಿರುವ ಕಾರಣ ಮೌಲಾನಾ ಆಜಾದ್/ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಬೇಡಿಕೆ ಹೆಚ್ಚಾಗಿರುತ್ತದೆ. ಈ ಜಮೀನಿನಲ್ಲಿ ಮೌಲಾನಾ ಆಜಾದ್ ಶಾಲೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮಂಜೂರು ಮಾಡಿದೆ. ಇನ್ನು ಈಗಾಗಲೇ ಅಲ್ಲಿರುವ ಪಶು ಆಸ್ಪತ್ರೆಯನ್ನು ಹುದ್ದೆಗಳ ಸಮೇತ ಜಯನಗರದಲ್ಲಿರುವ ಘಟಕಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಅದೇಶದವರೆಗೆ ಸ್ಥಳಾಂತರ ಮಾಡಿ ಆದೇಶ ಹೊರಡಿಸಲಾಗಿದೆ.
ಪ್ರಸ್ತುತ ರಾಜ್ಯದಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ಮೂಲಕ 126 ವಸತಿ ಶಾಲೆಗಳು, 314 ವಿದ್ಯಾರ್ಥಿ ನಿಲಯಗಳು ಹಾಗೂ 200 ಮೌಲಾನಾ ಆಜಾದ್ ಮಾದರಿ ಶಾಲೆಗಳು, 101 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 1 ಲಕ್ಷಕ್ಕಿಂತ ಅಧಿಕ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಮಾನ್ಯ ವಸತಿ ಹಾಗೂ ವಕ್ಫ್ ಅಲ್ಪಸಂಖ್ಯಾತರ ಸಚಿವರಾಗಿರುವ ಜಮೀರ್ ಅಹ್ಮದ್, ಚಾಮರಾಜಪೇಟೆ ವಿಧಾನಸಭೆ ವ್ಯಾಪ್ತಿಯಲ್ಲಿರುವ ಚೆಲುವಾದಿ ಪಾಳ್ಯ ವಾರ್ಡ್, ಮೈಸೂರು ರಸ್ತೆ ಹಾಗೂ ಗೂಡ್ಶಡ್ ರಸ್ತೆಗೆ ಹೊಂದಿಕೊಂಡಂತೆ ಪಶು ಸಂಗೋಪನಾ ಇಲಾಖೆಯ ಪಶು ಆಸ್ಪತ್ರೆ ಇದೆ. ಆದರೆ, ಬೆಂಗಳೂರು ನಗರ ಪ್ರದೇಶದಲ್ಲಿ ಜಾನುವಾರುಗಳು ಸಾಕಣೆ ಕಡಿಮೆ ಇರುವ ಕಾರಣ, ಬೆಂಗಳೂರು ಕೇಂದ್ರ ಭಾಗದಲ್ಲಿರುವ ಪಶು ಆಸ್ಪತ್ರೆ ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದಂತಿದೆ. ಆದ್ದರಿಂದ ಇದನ್ನು ಬೆಂಗಳೂರು ಹೊರ ವಲಯಕ್ಕೆ ಸ್ಥಳಾಂತರ ಮಾಡಿ, ಈ ಪ್ರದೇಶವನ್ನು ಶೈಕ್ಷಣಿಕ ಉದ್ದೇಶಕ್ಕೆ ಬಳಸಿಕೊಳ್ಳುವಂತೆ ಕೇಳಿಕೊಂಡಿದ್ದರು ಎಂದು ಆದೇಶದಲ್ಲಿ ತಿಳಿಸಲಾಗಿದೆ.
'ಪಾಕ್ ಜಿಂದಾಬಾದ್' ಪರ ವಿವಾದಾತ್ಮಕ ಪೋಸ್ಟ್: ವಿವಾದಕ್ಕೆ ಕಾರಣವಾದ ನಟ ಚೇತನ್ ಕುಮಾರ್ ಹೇಳಿಕೆ
ಇನ್ನು ಈ ಕ್ಷೇತ್ರದಲ್ಲಿ 1.25 ಲಕ್ಷ ಅಲ್ಪಸಂಖ್ಯಾತರ ಜನಸಂಖ್ಯೆ ಇದೆ. ಆದರೆ, ಇಲ್ಲಿ ಸೂಕ್ತವಾದ ಮೌಲಾನಾ ಆಜಾದ್ ಮಾದರಿ ಶಾಲೆ/ಮೊರಾರ್ಜಿ ವಸತಿ ಶಾಲೆ ಇರೋದಿಲ್ಲ ಎಂದು ತಿಳಿಸಲಾಗಿದೆ. ಆ ಕಾರಣದಿಂದಾಗಿ ಪಶು ಆಸ್ಪತ್ರೆಯನ್ನು ಶಿಫ್ಟ್ ಮಾಡಿ ಅಲ್ಲಿನ 2 ಎಕರೆ ಜಾಗವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
Watch: ಇದೆಂಥಾ ಸಂಭ್ರಮ... ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ!
'ಬೆಂಗಳೂರು ನಗರದ ಹೃದಯ ಭಾಗದ ಚಾಮರಾಜಪೇಟೆಯಲ್ಲಿರುವ ಪಶುಸಂಗೋಪನೆ ಇಲಾಖೆಯ ಎರಡು ಎಕರೆ ಜಾಗವನ್ನು ಅಲ್ಪಸಂಖ್ಯಾತ ಇಲಾಖೆಗೆ ನೀಡುವ ಜರೂರತ್ತು ಸರ್ಕಾರಕ್ಕೆ ಏನಿತ್ತು ಎಂಬುದು ತಿಳಿಯದು. ಈ ಜಾಗವನ್ನು ಪಶುಸಂಗೋಪನಾ ಇಲಾಖೆಯೇ ಉಳಿಸಿಕೊಂಡು ಅಲ್ಲಿ ಅಭಿವೃದ್ಧಿ, ಆಧುನೀಕರಣವನ್ನು ಕೈಗೊಂಡು ಪ್ರಾಣಿಗಳಿಗೆ ಉತ್ತಮ ಚಿಕಿತ್ಸೆ, ಸಂಶೋಧನೆ, ಲಸಿಕೆ, ಔಷದೋಪಚಾರ ನೀಡಬಹುದಾಗಿತ್ತು. ಈ ರೀತಿಯಾದ ಅತಿರೇಕದ ಓಲೈಕೆ ನಿಜಕ್ಕೂ ಖಂಡನೀಯ...' ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ನಿರ್ಧಾರವನ್ನು ಟೀಕೆ ಮಾಡಿ ಟ್ವೀಟ್ ಮಾಡಿದ್ದಾರೆ.